ಅಯೋಧ್ಯೆ: ಭಗವಾನ್ ರಾಮ ಇರುವಲ್ಲಿ ಹನುಮಂತ ಇದ್ದೇ ಇರುತ್ತಾನೆ ಎನ್ನುವುದು ಬಲವಾದ ನಂಬಿಕೆ. ಈ ನಂಬಿಕೆಗೆ ಕಾಕತಾಳೀಯವಾದ ಘಟನೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ. ಮಂದಿರ ಉದ್ಘಾಟನೆಯಾದ ಮಾರನೇ ದಿನ ಮಂಗವೊಂದು ಮಂದಿರದ ಗರ್ಭಗುಡಿ ಪ್ರವೇಶಿಸಿ, ರಾಮನನ್ನು ಕಣ್ತುಂಬಿಕೊಂಡ ಘಟನೆ ನಡೆದಿದೆ.
ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದೆ.
ಮಂಗಳವಾರ (ಜನವರಿ 23) ಸಂಜೆ ಗರ್ಭಗುಡಿಗೆ ಪ್ರವೇಶಿಸಿದ ಮಂಗವೊಂದು ಭಗವಾನ್ ರಾಮನ ಉತ್ಸವ ವಿಗ್ರಹದ ಬಳಿ ತೆರಳಿತ್ತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತಿಳಿಸಿದೆ.
ದಕ್ಷಿಣ ದ್ವಾರದ ಮೂಲಕ ಈ ಕೋತಿ ಗರ್ಭಗುಡಿಯನ್ನು ಪ್ರವೇಶಿಸಿ ರಾಮ ಲಲ್ಲಾ ವಿಗ್ರಹದ ಬಳಿ ಹೋಗಿದೆ. ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಅದು ವಿಗ್ರಹವನ್ನು ನೆಲದ ಮೇಲೆ ಬೀಳಿಸಬಹುದು ಎಂಬ ಆತಂಕದಿಂದ ಅದರ ಕಡೆಗೆ ಧಾವಿಸಿದ್ದರು. ಆದರೆ ಅದು ಹಾಗೆ ಮಾಡಲಿಲ್ಲ. ಪೊಲೀಸರು ಮಂಗನ ಕಡೆಗೆ ಹೋಗುತ್ತಿದ್ದಂತೆ ಅದು ಶಾಂತವಾಗಿಯೇ ಉತ್ತರ ದ್ವಾರದ ಕಡೆಗೆ ತೆರಳಿದೆ. ಅಲ್ಲಿನ ದ್ವಾರ ಮುಚ್ಚಿದ್ದರಿಂದ ಪೂರ್ವದ ಕಡೆಗೆ ಹೋಗಿದೆ ಮತ್ತು ಜನಸಮೂಹದ ನಡುವೆ ಶಾಂತವಾಗಿಯೇ ಹಾದುಹೋಯಿತು ಎಂದು ಟ್ರಸ್ಟ್ ಹೇಳಿದೆ. ರಾಮನನ್ನು ನೋಡಲು ಸ್ವತಃ ಹನುಮಾನ್ ಬಂದಂತೆ ಎನಿಸಿತು ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಸದ್ಯ ಈ ವಿಚಾರ ಭಕ್ತರಲ್ಲಿ ಸಂಚಲನ ಮೂಡಿಸಿದೆ. ಹನುಮಂತನ ಸಂಕೇತವಾದ ಮಂಗಗಳು ಅಯೋಧ್ಯೆಯಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತವೆ.
ಲಕ್ಷಾಂತರ ಮಂದಿ ಭೇಟಿ
ಅಯೋಧ್ಯೆಯಲ್ಲಿ ಭಗವಾನ್ ರಾಮ ಲಲ್ಲಾ ಅವರ ಭವ್ಯವಾದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಒಂದು ದಿನದ ನಂತರ ಮಂಗಳವಾರ ಸುಮಾರು ಐದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದರು. ಮಂಗಳವಾರ ಐದು ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಪಡೆದರು ಎಂದು ಮಾಹಿತಿ ನಿರ್ದೇಶಕ ಶಿಶಿರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸದಾಗಿ ನಿರ್ಮಿಸಲಾದ ದೇವಾಲಯದ ಬಾಗಿಲುಗಳನ್ನು ಸಾರ್ವಜನಿಕರಿಗೆ ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು ಮತ್ತು ಸಂದರ್ಶಕರ ಕೊನೆಯ ಪ್ರವೇಶ ರಾತ್ರಿ 10 ಗಂಟೆ ವರೆಗೂ ನಡೆಯಿತು. ಜನಸಂದಣಿ ನಿರ್ವಹಣೆಗಾಗಿ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಗರದ ಎಂಟು ಸ್ಥಳಗಳಲ್ಲಿ ಮ್ಯಾಜಿಸ್ಟ್ರೇಟ್ಗಳನ್ನು ನಿಯೋಜಿಸಿದ್ದಾರೆ.
ಯೋಗಿ ಆದಿತ್ಯನಾಥನೇತೃತ್ವದ ಉತ್ತರ ಪ್ರದೇಶ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಸುಗಮವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದೆ. ಮಂಗಳವಾರ ಭಕ್ತರ ನೂಕು ನುಗ್ಗಲು ಸಂಭವಿಸಿ ಗೊಂದಲ ಏರ್ಪಟ್ಟಿತ್ತು. ಮಧ್ಯಾಹ್ನ ಎರಡನೇ ಅವಧಿಯ ದರ್ಶನದ ವೇಳೆ ನೂಕುನುಗ್ಗಲು, ತಳ್ಳಾಟ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಸಮರ್ಪಕ ವ್ಯವಸ್ಥೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ