ಹಿರಿಯ ಸಹಕಾರಿ ಧುರೀಣ, ಎಲ್ಲರ ʼಶಾಂತಣ್ಣʼ ಟಿಎಸ್‌ಎಸ್‌ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಇನ್ನಿಲ್ಲ

ಶಿರಸಿ: ʼಶಾಂತಣ್ಣʼ ಎಂದೇ ಆಪ್ತವಲಯದಲ್ಲಿ ಜನಪ್ರಿಯರಾಗಿದ್ದ ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ, ಸಹೃದಯಿ ಟಿಎಸ್‌ಎಸ್‌ ಮಾಜಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವಯೋ ಸಹಜ ಖಾಯಿಲೆಯಿಂದ ಬುಧವಾರ ನಿಧನರಾಗಿದ್ದಾರೆ.
ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಇವರು ಶಿಕ್ಷಣ, ಸಹಕಾರ, ರಾಜಕಾರಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿಐೂ ಕೆಲಸ ಮಾಡಿದ್ದಾರೆ. ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಶಿರಸಿ ತೋಟಗಾರ್ಸ್‌ ಸೊಸೈಟಿ ಈ ಮಟ್ಟಕ್ಕೆ ಬೆಳೆಯಲು ಅವರ ಶ್ರಮ ಪ್ರಮುಖ ಕಾರಣ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸುಮಾರು ಮೂರು ದಶಕಗಳ ಕಾಲ ಟಿಎಸ್‌ಎಸ್‌ ಅಧ್ಯಕ್ಷರಾಗಿದ್ದರು. ಅತ್ಯಂತ ಸಣ್ಣ ಬೆಳೆಗಾರರಿಂದ ಹಿಡಿದು ನೂರಾರು ಕ್ವಿಂಟಲ್‌ ಅಡಕೆ ಬೆಳಗಾರರವರೆಗೂ ಟಿಎಸ್‌ಎಸ್‌ ಸಂಸ್ಥೆ ಎಲ್ಲರಿಗೂ ತೆರೆದ ಮನೆಯಂತಾಗಲು ಅವರ ಶ್ರಮ ಅಪಾರ. ಟಿಎಸ್‌ಎಸ್‌ ಸಂಸ್ಥೆಯನ್ನುಆ ರೀತಿ ಬೆಳೆಸಿದ್ದರು.

ಹಿಂದೆ ಎಚ್.ಕೆ.ಪಾಟೀಲ ಅವರು ಕೃಷಿ ಸಚಿವರಾಗಿದ್ದಾಗ ಅಡಕೆಗೆ ಸರ್ಕಾರದಿಂದ ಪ್ರಪ್ರಥಮ ಬಾರಿಗೆ ಬೆಂಬಲ ಬೆಲೆ ದೊರಕಿಸುವಲ್ಲಿ ಶಾಂತಾರಾಮ ಹೆಗಡೆಯವರ ಪ್ರಯತ್ನ ಬಹಳಷ್ಟಿತ್ತು. ಸಹಕಾರಿ ಕ್ಷೇತ್ರದಲ್ಲಿ ಅಡಕೆ ಮಾರುಕಟ್ಟೆ ಖಾಸಗಿ ವರ್ತಕರ ಹಿಡಿತದಲ್ಲಿ ನಲುಗುತ್ತಿರುವ ಸಂದರ್ಭದಲ್ಲಿ ಶಿರಸಿಯ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಇದರ ವತಿಯಿಂದ ಸ್ವಂತ ಖರೀದಿ ಯೋಜನೆ ಆರಂಭಿಸುವಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಅಡಕೆ ಬೆಳೆಗಾರರ ಹಿತಕಾಯುವಲ್ಲಿ ಅವರು ಯಶಸ್ವಿಯಾಗಿದ್ದರು. ರೈತರ ಅಡಕೆಯನ್ನು ಯೋಗ್ಯದರದಲ್ಲಿ ಖರೀದಿಸಿ ಅಡಕೆಗೆ ಬೇಡಿಕೆ ತಗ್ಗದಂತೆ ನೋಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಹೊರ ಮಾರುಕಟ್ಟೆಯಲ್ಲಿ ಅಡಕೆಗೆ ಬೇಡಿಕೆ ಇಲ್ಲದ ಸಂದರ್ಭದಲ್ಲಿ ಯೋಗ್ಯ ದರದಲ್ಲಿ ಅಡಕೆಯನ್ನು ಖರೀದಿಸಿ, ಶೇಖರಿಸಿ ಮೌಲ್ಯವರ್ಧಿತ ಉತ್ಪನ್ನವಾಗಿ ಸಂಸ್ಕರಿಸಿ ಬೇಡಿಕೆ ಹೆಚ್ಚಾಗುವಂತೆ ನೋಡಿಕೊಂಡಿದ್ದರು. ಅಲ್ಲದೆ ಶಿರಸಿಯ ಟಿಎಸ್‌ಎಸ್‌ ಸಂಸ್ಥೆಯನ್ನು ವಿಸ್ತರಿಸಿದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಅಡಕೆ ಖರೀದಿಯ ಮೂಲಕ ಬೆಳೆಗೆ ಯೋಗ್ಯ ದರ ದೊರಕಿಸುವ ಮುಖ್ಯ ಉದ್ದೇಶದ ಜೊತೆಯಲ್ಲಿ ಅಡಕೆ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು 2002ರಲ್ಲಿ ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳ ಸ್ಥಾಪಿಸಲು ಸಮಾನ ಮನಸ್ಕ ಸಹಕಾರಿಗಳೊಂದಿಗೆ ಶ್ರಮಿಸಿದ್ದಲ್ಲದೇ, ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಅದನ್ನು ಮುನ್ನಡೆಸಿದ್ದರು. ನಂತರ ಆಡಳಿತ ಮಂಡಳಿ ನಿರ್ದೇಶಕರಾಗಿ ಮುಂದುವರಿದಿದ್ದರು. ಪದ್ಮಭೂಷಣ ಡಾ. ಡಿ.ವಿರೇಂದ್ರ ಹೆಗ್ಗಡೆ ಸಂಸ್ಥಾಪಕ ಅಧ್ಯಕ್ಷರಾಗಿರುವ ಮಂಗಳೂರಿನ ಅರೇಕಾನಟ್ ರೀಸರ್ಚ್ ಆ್ಯಂಡ್ ಡೆವಲೆಪ್ಮೆಂಟ್ ಫೌಂಡೇಶನ್ ಮಂಗಳೂರು ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದಾ ಉಪಾಧ್ಯಕ್ಷರಾಗಿ, ನಂತರ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಶಾಂತಾರಾಮ ಹೆಗಡೆ, ಶಿರಸಿಯಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ, ವಾಣಿಜ್ಯ ಸಂಕೀರ್ಣ ಮತ್ತು ಮಹಿಳಾ ವಸತಿ ನಿಲಯ ಇವುಗಳನ್ನು ಹೊಂದಿ ಸೇವಾ ತತ್ಪರವಾಗಿರುವ ಸಂಸ್ಥೆ ಶಿರಸಿಯ “ತೋಟಗಾರ್ಸ್ ವೆಲ್‍ಫೇರ್ ಅಸೋಸಿಯೇಶನ್” ನಿರ್ದೇಶಕರಾಗಿ, ಗ್ರಾಮಿಣ ಭಾಗದ ಜನರ ಆರೋಗ್ಯ ಮತ್ತು ವೈದ್ಯಕೀಯ ಅವಶ್ಯಕತೆಗಳ ಪೂರೈಕೆ ಹಾಗೂ ಸೇವೆ ಮುಡಿಪಾಗಿರುವ ಎಸ್.ಆರ್.ಕೆ. ಫೌಂಡೇಶನ್, ಶಿರಸಿ ಇದರ ಗೌರವ ಕಾರ್ಯದರ್ಶಿಯಾಗಿದ್ದರು. ಶಿರಸಿ ಸುತ್ತಮುತ್ತಲಿನ ಎಲ್ಲ ಜನರ ಆಧುನಿಕ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸುವ ಕಲ್ಪನೆಯೊಂದಿಗೆ ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿ ಲಕ್ಷಾಂತರ ಜನರಿಗೆ ವೈದ್ಯಕೀಯ ನೆರವು ನೀಡುತ್ತಿರುವ ಅತ್ಯಾಧುನಿಕ ಟಿ.ಎಸ್.ಎಸ್ ಶ್ರೀ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ವಿಶ್ವಸ್ಥ ಸಮಿತಿಯಾದ “ತೋಟಗಾರರ ಸೇವಾ ಸಮಿತಿ, ಶಿರಸಿ” ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಅಗಲಿದ ಇವರ ಪಾರ್ಥಿ ಶರೀರದ ದರ್ಶನಕ್ಕೆ ಸಾಮ್ರಾಟ್‌ ವಸತಿಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಗಣ್ಯರ ಸಂತಾಪ :
ಸಹಕಾರಿ ದಿಗ್ಗಜ ಶಾಂತಾರಾಮ ಹೆಗಡೆ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಸ್‌ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement