ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ: ಪಕ್ಷಕ್ಕೆ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ ಚವಾಣ ರಾಜೀನಾಮೆ ; 10-12 ಶಾಸಕರೊಂದಿಗೆ ಬಿಜೆಪಿ ಸೇರುವ ಸಾಧ್ಯತೆ

ಮುಂಬೈ: ಲೋಕಸಭೆ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವನೆಗೆ ತಿಂಗಳುಗಳ ಮೊದಲು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಂಸದ ಅಶೋಕ ಚವಾಣ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಮೂಲಗಳ ಪ್ರಕಾರ ಅವರು ಬಿಜೆಪಿಗೆ ಸೇರುಬ ಸಾಧ್ಯತೆಯಿದ್ದು, ಹಿರಿಯ ನಾಯಕನಿಗೆ ರಾಜ್ಯಸಭೆಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ ಚವಾಣ ಅವರು, ಬೇರೆ ಪಕ್ಷ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ, ಇನ್ನೂ ಯಾವುದೇ ಪಕ್ಷದ ಜತೆ ಮಾತನಾಡಿಲ್ಲ. ಆದರೆ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಚುನಾವಣೆಗೆ ಕೇವಲ ತಿಂಗಳುಗಳು ಬಾಕಿ ಇರುವಾಗ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವುದಾಗಿ ಹೇಳಿದರು.

ವಿಧಾನಸಭೆಯಲ್ಲಿ ಭೋಕರ್ ಕ್ಷೇತ್ರವನ್ನು ಪ್ರತಿನಿಧಿಸುವ ಚವಾಣ ಅವರು ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಕಳೆದ ಕೆಲ ದಿನಗಳಲ್ಲಿ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಹಾಗೂ ಬಾಬಾ ಸಿದ್ಧಿಕಿ ಪಕ್ಷ ತೊರೆದ ನಂತರ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ ಅವರು ಕಾಂಗ್ರೆಸ್‌ ತೊರೆದ ಮೂರನೇ ಹಾಗೂ ದೊಡ್ಡ ನಾಯಕರಾಗಿದ್ದಾರೆ.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನಾನಾ ಪಟೋಲೆ ಅವರಿಗೆ ನೀಡಿದ ಒಂದು ಸಾಲಿನ ರಾಜೀನಾಮೆ ಪತ್ರದಲ್ಲಿ, “ನಾನು 12/02/2024ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ” ಎಂದು ಬರೆದಿದ್ದಾರೆ. 65 ವರ್ಷ ವಯಸ್ಸಿನ ಅಶೋಕ ಚವಾಣ ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ಸ್ಪೀಕರ್‌ಗೆ ರಾಜೀನಾಮೆ ಕಳುಹಿಸಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ ಅವರೊಂದಿಗೆ ಅವರ ಭಿನ್ನಾಭಿಪ್ರಾಯಗಳು ಅಶೋಕ ಚವಾಣ ಅವರು ಪಕ್ಷವನ್ನು ಬದಲಾಯಿಸುವ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು.

ಪ್ರಮುಖ ಸುದ್ದಿ :-   1950-2015ರ ಅವಧಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 7.8% ಕುಸಿತ ; ಅಲ್ಪಸಂಖ್ಯಾತರ ಶೇಕಡಾವಾರು ಹೆಚ್ಚಳ : ಪಿಎಂ-ಇಎಸಿ ಅಧ್ಯಯನ

ಬಿಜೆಪಿಯಿಂದ ರಾಜ್ಯಸಭಾ ಸ್ಥಾನ ಸಾಧ್ಯತೆ…
ಮೂಲಗಳ ಪ್ರಕಾರ ಬಿಜೆಪಿ ಚವಾಣ ಅವರಿಗೆ ರಾಜ್ಯಸಭಾ ಸ್ಥಾನ ನೀಡುವ ಸಾಧ್ಯತೆ ಇದೆ. 10 ರಿಂದ 12 ಶಾಸಕರು ಚವಾಣ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಸರಿಯಾದ ಸಮಯದಲ್ಲಿ ಪಕ್ಷವನ್ನು ಬದಲಾಯಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಚವಾಣ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳ ನಡುವೆ, ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಹೇಳಿದರು.
“ಅಶೋಕ ಚವಾಣ ಬಗ್ಗೆ ನಾನು ಮಾಧ್ಯಮಗಳಿಂದ ಕೇಳಿದ್ದೇನೆ. ಆದರೆ ನಾನು ಈಗ ಹೇಳಬಲ್ಲ ಏಕೈಕ ವಿಷಯವೆಂದರೆ ಕಾಂಗ್ರೆಸ್‌ನ ಹಲವಾರು ಉತ್ತಮ ನಾಯಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ನಾಯಕರು ಕಾಂಗ್ರೆಸ್‌ನಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಂಕರರಾವ್ ಚವಾಣ ಅವರ ಪುತ್ರರಾದ ಅಶೋಕ ಚವಾಣ ಸಹ ಮುಖ್ಯಮಂತ್ರಿಯಾದವರು. ಮಹಾರಾಷ್ಟ್ರದ ನಾಂದೇಡ್ ಪ್ರದೇಶದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆ ಮತ್ತು ಈ ಬದಲಾವಣೆಯು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಾನಿಯಾಗಬಹುದಾಗಿದೆ.
ಅಶೋಕ ಚವಾಣ ಈವರೆಗೆ ಘಟನಾತ್ಮಕ ರಾಜಕೀಯ ಪ್ರಯಾಣವನ್ನು ಹೊಂದಿದ್ದಾರೆ. ತಮ್ಮ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಅವರು, ಮುಂದೆ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರಾಗಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ಅವರು ಎರಡು ಸಂದರ್ಭಗಳಲ್ಲಿ ನಾಂದೇಡದಿಂದ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರಾಗಿದ್ದರು.
ಮುಂಬೈನಲ್ಲಿ 2008 ರ ಭಯೋತ್ಪಾದಕ ದಾಳಿಯ ನಂತರ ವಿಲಾಸರಾವ್ ದೇಶಮುಖ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. 2009 ರ ರಾಜ್ಯ ಚುನಾವಣೆಯ ನಂತರ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಸಿಕೊಂಡಿತು. ಆದಾಗ್ಯೂ, ಆದರ್ಶ್ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ ಮಧ್ಯೆ ಚವಾಣ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...| ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

5 / 5. 2

ಶೇರ್ ಮಾಡಿ :

  1. G.B.Naravani.

    It Seems New Name Of Congress Will Be BJP . All except some few are finding places in BJP for one Or The Other Reason. What Abt Original BJPS?

ನಿಮ್ಮ ಕಾಮೆಂಟ್ ಬರೆಯಿರಿ

advertisement