ಸಿಂಹಗಳಿಗೆ ಸೀತೆ, ಅಕ್ಬರ್‌ ಹೆಸರೇ ಯಾಕೆ..? ಸಿಂಹಗಳಿಗೆ ಇಟ್ಟ ಹೆಸರು ಬದಲಿಸಲು ಸೂಚಿಸಿದ ಕೋಲ್ಕತ್ತಾ ಹೈಕೋರ್ಟ್‌

ಕೋಲ್ಕತ್ತಾ : ಸಿಲಿಗುರಿಯ ಬಂಗಾಳ ಸಫಾರಿ ಪಾರ್ಕ್‌ನಲ್ಲಿ ಎರಡೂ ಪ್ರಾಣಿಗಳನ್ನು ಒಂದೇ ಆವರಣದಲ್ಲಿ ಇರಿಸಿದ ಸಿಂಹ ಹಾಗೂ ಸಿಂಹಿಣಿಗೆ ಇರಿಸಿದ “ಅಕ್ಬರ್” ಮತ್ತು ಸಿಂಹಿಣಿ “ಸೀತಾ” ಹೆಸರುಗಳು ವಿವಾದಕ್ಕೆ ಕಾರಣವಾದ ನಂತರ ಈ ಹೆಸರಿನ ಬದಲು ಬೇರೆ ಹೆಸರನ್ನು ಮರು ನಾಮಕರಣ ಮಾಡುವಂತೆ ಕೋಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಸಿಲಿಗುರಿಯ ಉತ್ತರ ಬಂಗಾಳ ವನ್ಯಜೀವಿ ಉದ್ಯಾನಕ್ಕೆ ಕರೆತರುವ ಮುನ್ನವೇ 2016 ಮತ್ತು 2018ರಲ್ಲಿ ಎರಡು ಸಿಂಹಗಳಿಗೆ ಸೀತಾ ಮತ್ತು ಅಕ್ಬರ್ ಎಂದು ತ್ರಿಪುರ ಮೃಗಾಲಯದ ಅಧಿಕಾರಿಗಳು ನಾಮಕರಣ ಮಾಡಿದ್ದರು ಎಂಬುದಾಗಿ ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಕೋಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿತು.
ಅದೇನೇ ಇದ್ದರೂ ವಿವಾದಕ್ಕೆ ಕೊನೆಯಾಗುವ ನಿಟ್ಟಿನಲ್ಲಿ ಆ ಎರಡು ಸಿಂಹಗಳಿಗೆ ಬೇರೆ ಹೆಸರಿಡುವುದನ್ನು ಪರಿಗಣಿಸುವಂತೆ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಿಳಿಸಿತು. ಸೀತೆಯನ್ನು ದೇಶದ ಬಹುಸಂಖ್ಯಾತ ಜನರು ಪೂಜಿಸುತ್ತಾರೆ ಮತ್ತು ಅಕ್ಬರ್ ಒಬ್ಬ ದಕ್ಷ, ಯಶಸ್ವಿ ಮತ್ತು ಜಾತ್ಯತೀತ ಮೊಘಲ್ ಚಕ್ರವರ್ತಿ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

“ವಕೀಲರೇ ನಿಮ್ಮ ಸ್ವಂತ ಸಾಕುಪ್ರಾಣಿಗೆ ಯಾವುದಾದರೂ ಹಿಂದೂ ದೇವರು ಅಥವಾ ಮುಸ್ಲಿಂ ಪ್ರವಾದಿಯ ಹೆಸರಿಡುತ್ತೀರಾ.. ನಮ್ಮಲ್ಲಿ ಯಾರಾದರೂ ಪ್ರಾಣಿಯೊಂದಕ್ಕೆ ರವೀಂದ್ರನಾಥ ಟ್ಯಾಗೋರ್ ಅವರ ಹೆಸರಿಡುವುದನ್ನು ಯೋಚಿಸಲು ಸಾಧ್ಯವೇ? ಸೀತೆಯನ್ನು ಈ ದೇಶದ ವಿಸ್ತೃತ ಭಾಗ ಪೂಜಿಸುತ್ತದೆ. ಸಿಂಹಕ್ಕೆ ಅಕ್ಬರ್ ಹೆಸರಿಡುವುದನ್ನೂ ನಾನು ವಿರೋಧಿಸುತ್ತೇನೆ. ಅಕ್ಬರ್‌ ದಕ್ಷ, ಯಶಸ್ವಿ ಮತ್ತು ಜಾತ್ಯತೀತ ಮೊಘಲ್ ಚಕ್ರವರ್ತಿಯಾಗಿದ್ದರು” ಎಂದು ನ್ಯಾಯಾಲಯ ಹೇಳಿದೆ.
ನೀವು ಅದಕ್ಕೆ ಬಿಜ್ಲಿ ಅಥವಾ ಆ ರೀತಿಯ ಬೇರೆ ಹೆಸರಿಡಬಹುದಿತ್ತು. ಬದಲಿಗೆ ಅಕ್ಬರ್ ಮತ್ತು ಸೀತೆಯ ಹೆಸರುಗಳನ್ನೇ ಇಟ್ಟಿದ್ದೇಕೆ?” ಎಂದು ನ್ಯಾಯಾಲಯ ಪ್ರಶ್ನಿಸಿತು. ಬಂಗಾಳ ವನ್ಯಜೀವಿ ಉದ್ಯಾನದ ಸಿಂಹಿಣಿಗೆ ಸೀತಾ ಎಂದು ಹೆಸರಿಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆಗಳನ್ನು ಕೇಳಿದೆ.

ತ್ರಿಪುರಾದಿಂದ ಸಿಲಿಗುರಿಯ ಬಂಗಾಳ ಸಫಾರಿ ಉದ್ಯಾನವನಕ್ಕೆ ತರಲಾದ ಎರಡು ಸಿಂಹಗಳಿಗೆ ಸೀತಾ ಮತ್ತು ಅಕ್ಬರ್ ಹೆಸರುಗಳನ್ನು ನೀಡಲಾಗಿದೆಯೇ ಎಂದು ಅಧಿಕೃತವಾಗಿ ತಿಳಿಸುವಂತೆ ಪೀಠ ಬುಧವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಹೆಸರಿಟ್ಟಿದ್ದು ಪಶ್ಚಿಮ ಬಂಗಾಳ ಸರ್ಕಾರವಲ್ಲ ; ತ್ರಿಪುರ ಮೃಗಾಲಯದ ಅಧಿಕಾರಿಗಳು ಎಂದು ಗುರುವಾರ ದಾಖಲೆಗಳ ಸಹಿತ ಪೀಠಕ್ಕೆ ತಿಳಿಸಲಾಯಿತು. ಆಗ ನ್ಯಾಯಾಲಯ ಸಿಂಹಗಳಿಗೆ ದೇವರ ಅಥವಾ ಐತಿಹಾಸಿಕವಾಗಿ ಪೂಜ್ಯ ವ್ಯಕ್ತಿಗಳ ಹೆಸರನ್ನು ಇಡುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿತು.
ಜೊತೆಗೆ, ಸಿಂಹಗಳಿಗೆ ಈ ಹೆಸರುಗಳನ್ನಿಟ್ಟು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಅರ್ಜಿದಾರರು ಹೇಳುತ್ತಿರುವುದರಿಂದ, ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯಾಗಿ ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಅದರಂತೆ ಪಿಐಎಲ್‌ಗಳನ್ನು ಆಲಿಸುವ ಪೀಠದೆದುರು ವಿಚಾರಣೆಗೆ ಪಟ್ಟಿ ಮಾಡುವಂತೆ ಅದು ಆದೇಶಿಸಿತು.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement