ಲಕ್ನೋ: ಉತ್ತರ ಪ್ರದೇಶದ ಬದೌನ್ನಲ್ಲಿ ಕ್ಷೌರಿಕನೊಬ್ಬ ಪಕ್ಕದಲ್ಲಿ ವಾಸಿಸುತ್ತಿದ್ದ ಇಬ್ಬರು ಮಕ್ಕಳನ್ನು ಕೊಂದು ಮತ್ತೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ನಂತರ ಕ್ಷೌರಿಕ ಎನ್ಕೌಂಟರ್ನಲ್ಲಿ ಕೊಲ್ಲಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ನಡೆದ ಘಟನೆ ನಗರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಈತ ನಗರದ ಬದೌನ್ನ ಬಾಬಾ ಕಾಲೋನಿಯಲ್ಲಿ ಕೊಲೆಯಾದ ಮಕ್ಕಳ ಮನೆಯ ಎದುರು ಕ್ಷೌರದಂಗಡಿ ನಡೆಸುತ್ತಿದ್ದ. ಸಾಜಿದ್ ಮೃತ ಮಕ್ಕಳ ತಂದೆ ವಿನೋದ ಅವರಿಗೆ ಪರಿಚಯಸ್ಥನಾಗಿದ್ದ ಎಂದು ಹೇಳಲಾಗಿದೆ.
ಆರೋಪಿ ಮಂಗಳವಾರ ಸಂಜೆ 7:30 ರ ಸುಮಾರಿಗೆ ಎದುರು ಮನೆಗೆ ಪ್ರವೇಶಿಸಿ ಚಹಾ ನೀಡುವಂತೆ ಕೇಳಿದ್ದಾನೆ ಎಂದು ಎಂದು ಪೊಲೀಸರನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಆತ ಚಹಾ ಕೇಳಿದ ನಂತರ ಬಾಲಕರ ತಾಯಿ ಚಹಾ ಮಾಡಲು ಹೋದಾಗ, ಮೂವರು ಮಕ್ಕಳಾದ ಆಯುಷ್ (13), ಅಹಾನ್ (7) ಮತ್ತು ಪಿಯೂಷ್ (6) ಆಟವಾಡುತ್ತಿದ್ದ ಟೆರೇಸ್ಗೆ ಹೋಗಿ ಬಾಲಕರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಇಬ್ಬರು ಮಕ್ಕಳ ಕತ್ತು ಸೀಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಜಿದ್ ಇಬ್ಬರು ಮಕ್ಕಳಾದ ಆಯುಷ್ ಮತ್ತು ಅಹಾನ್ ಅವರ ಕತ್ತು ಸೀಳಿ ಸ್ಥಳದಲ್ಲೇ ಅವರನ್ನು ಕೊಂದ ನಂತರ ಆರು ವರ್ಷದ ಕಿರಿಯ ಸಹೋದರನ ಮೇಲೂ ದಾಳಿ ಮಾಡಿದ್ದಾನೆ, ಆದಾಗ್ಯೂ, ಬಾಲಕ ಸ್ಥಳದಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಆತ ತಾಯಿಗೆ ಈ ಬಗ್ಗೆ ಎಚ್ಚರಿಸಿದ್ದಾನೆ. ಕಿರಿಯ ಸಹೋದರ ಪಿಯೂಷ್ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ ಆರೋಪಿಯು ವಿನೋದ ಅವರ ಕುಟುಂಬದ ಜೊತೆ ಜಗಳ ಮಾಡಿಕೊಂಡಿದ್ದಾನೆ. ಸಾಜಿದ್ ಮನೆಯೊಳಗೆ ಪ್ರವೇಶಿಸಿದಾಗ ಪಾರ್ಲರ್ ನಡೆಸುತ್ತಿರುವ ವಿನೋದಕುಮಾರ ಅವರ ಪತ್ನಿ ಹಾಗೂ ಮೂವರು ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು. ಚಹಾ ಕೇಳಿದ ನಂತರ ವಿನೋದಕುಮಾರ ಅವರ ಪತ್ನಿ ಚಹಾ ಮಾಡಲು ಹೋದಾಗ ಆರೋಪಿ ಸಾಜಿದ್ ಮಕ್ಕಳು ಆಟವಾಡುತ್ತಿದ್ದ ಟೆರೇಸ್ಗೆ ಹೋಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ, ಆಕ್ರೋಶಗೊಂಡ ಸ್ಥಳೀಯರು ಮಕ್ಕಳ ಶವವನ್ನು ಒಯ್ಯಲು ಬಿಡಲಿಲ್ಲ. ಕೋಪಗೊಂಡ ಸ್ಥಳೀಯರು ಆರೋಪಿಯ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಸಮೀಪದಲ್ಲಿಯೇ ಸಾಜಿದ್ ಸಿಕ್ಕಿಬಿದ್ದಿದ್ದಾನೆ. ಆದರೆ ಆತ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ ಮತ್ತು ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಎಂದು ಬುದೌನ್ನ ಎಸ್ಎಸ್ಪಿ ಅಲೋಕ ಪ್ರಿಯದರ್ಶಿ ತಿಳಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರತ್ತ ಗುಂಡು ಹಾರಿಸಿದರು, ಆದರೆ ಪ್ರತಿ ಗುಂಡಿನ ದಾಳಿಯಲ್ಲಿ ಸಾಜಿದ್ ಕೊಲ್ಲಲ್ಪಟ್ಟ ಎಂದು ಅವರು ಹೇಳಿದರು. ಕೊಲೆಗೆ ಬಳಸಿದ ಆಯುಧ ಮತ್ತು ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ. ಎಫ್ಐಆರ್ನಲ್ಲಿ ಮೃತ ಮಕ್ಕಳ ಕುಟುಂಬದವರು ಆರೋಪಿಯ ಸಹೋದರ ಜಾವೇದ್ನ ಹೆಸರನ್ನೂ ದಾಖಲಿಸಿದ್ದಾರೆ. ಆತನ ಪತ್ತೆಗೆ ತಂಡಗಳು ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು. ಪೊಲೀಸರ ಪ್ರಕಾರ, ಕೊಲೆಯ ಹಿಂದಿನ ಉದ್ದೇಶ ತಿಳಿದಿಲ್ಲ.
“ನನಗೆ ಅವನೊಂದಿಗೆ ಯಾವುದೇ ಜಗಳ ಇರಲಿಲ್ಲ, ಅವನು ಮನೆಗೆ ಬಂದಾಗ ನಾನು ಕೆಲಸದ ನಿಮಿತ್ತ ಮನೆಯಿಂದ ಹೊರಗಿದ್ದೆ, ಆತ ₹ 5,000 ಕೇಳಿದ್ದಾನೆ ಮತ್ತು ನನ್ನ ಹೆಂಡತಿ ಅವನಿಗೆ ಹಣವನ್ನು ಕೊಟ್ಟಿದ್ದಾಳೆ. ನನ್ನ ಒಬ್ಬ ಮಗ ಆತನ ದಾಳಿಯಿಂದ ತಪ್ಪಿಸಿಕೊಂಡು ಬಂದು ತಾಯಿಗೆ ಈ ಬಗ್ಗೆ ಎಚ್ಚರಿಸಿದ್ದಾನೆ ಎಂದು ವಿನೋದ ಅವರು ಎನ್ಡಿಟಿವಿಗೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ