50 ವರ್ಷಗಳ ಹಿಂದೆ ಸತತವಾಗಿ 120 ಗಂಟೆಗಳ ಕಾಲ ಹಸಿವಿನಿಂದ ಬಳಲಿದ ಘಟನೆ ನೆನಪಿಸಿಕೊಂಡ ಇನ್ಫೋಸಿಸ್ ನಾರಾಯಣಮೂರ್ತಿ

ವಿಶ್ವಸಂಸ್ಥೆ: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 50 ವರ್ಷಗಳ ಹಿಂದೆ ನಿರಂತರ 120 ಗಂಟೆ ಕಾಲ ಹಸಿವಿನಿಂದ ಬಳಲಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಗೆ ಭಾರತದ ಪರ್ಮನೆಂಟ್ ಮಿಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುರೋಪ್‌ನಲ್ಲಿ ಹಿಚ್‌ಹೈಕಿಂಗ್ ಮಾಡುವಾಗ 120 ಗಂಟೆಗಳ ಕಾಲ “ಹಸಿವನ್ನು ಅನುಭವಿಸಿದ್ದೆ” ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
‘ನಿಮ್ಮಲ್ಲಿ ಹೆಚ್ಚಿನವರಿಗೆ ಹಸಿವಿನ ಅನುಭವ ಆಗಿಲ್ಲದಿರಬಹುದು. ಆದರೆ ನನಗೆ ಆ ಅನುಭವ ಆಗಿದೆ. 50 ವರ್ಷಗಳ ಹಿಂದೆ ನಾನು ಯುರೋಪಿನ ಬಲ್ಗೇರಿಯಾ ಮತ್ತು ಆಗಿನ ಯುಗೊಸ್ಲಾವಿಯಾ ಮತ್ತು ಇಂದಿನ ಸರ್ಬಿಯಾದ ನಡುವಿನ ಗಡಿ ಪಟ್ಟಣವಾದ ನಿಶ್ ಎಂಬ ಸ್ಥಳದಲ್ಲಿ ಹಿಚ್‌ಹೈಕಿಂಗ್ ಮಾಡುವಾಗ (ಹಿಚ್​ಹೈಕಿಂಗ್ ಎಂದರೆ ದಾರಿಯಲ್ಲಿ ಹೋಗುವ ಅಪರಿಚಿತರ ವಾಹನಗಳ ಸಹಾಯದಿಂದ ಪ್ರಯಾಣ ಮಾಡುವುದು) 120 ಗಂಟೆಗಳ ಕಾಲ ನಿರಂತರವಾಗಿ ಹಸಿವನ್ನು ಅನುಭವಿಸಿದ್ದೆ” ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ಸಭೆಯಲ್ಲಿ ಅವರು ತಮ್ಮ ಅಂದಿನ ದಿನಗಳನ್ನು ಮೆಲುಕು ಹಾಕಿದರು. ಈ ಸಭೆಯಲ್ಲಿ ವಿಶ್ವಸಂಸ್ಥೆಯ ರಾಜತಾಂತ್ರಿಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ಭಾರತೀಯ ಸಮುದಾಯದ ಜನರು ಇದ್ದರು.
“ಇಲ್ಲಿನ ಹೆಚ್ಚಿನ ಭಾರತೀಯರು ಮತ್ತು ನಾನು ಭಾರತ ಸರ್ಕಾರದಿಂದ ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ಅನುದಾನಿತ ಶಿಕ್ಷಣವನ್ನು ಪಡೆದಿದ್ದೇವೆ. ಆದ್ದರಿಂದ, ನಾಗರಿಕರಾಗಿ, ನಾವು ನಮ್ಮ ರಾಷ್ಟ್ರಕ್ಕೆ ಕೃತಜ್ಞತೆಯನ್ನು ತೋರಿಸಬೇಕು ಮತ್ತು ಅಸಹಾಯಕ, ಬಡ ಮಕ್ಕಳ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಪಡೆಯಲು ಸಹಾಯ ಮಾಡಬೇಕು ಎಂದು ಅವರು ಹೇಳಿದರು.
‘ನಮ್ಮ ಬಡಮಕ್ಕಳು ಸಮಾಜದ ಬಗ್ಗೆ ಆಶಯ ಮತ್ತು ನಂಬಿಕೆ ಕಳೆದುಕೊಂಡರೆ ಅವರು ಹಿಂಸಾಚಾರಕ್ಕೆ ತಿರುಗುತ್ತಾರೆ. ಭಾರತ ಸಾಧಿಸಿರುವ ಮತ್ತು ಸಾಧಿಸಬೇಕೆಂದಿರುವ ಎಲ್ಲಾ ಒಳ್ಳೆಯ ಕಾರ್ಯಗಳು ನಾಶವಾಗುತ್ತವೆ’ ಎಂದು ಹೇಳಿದ ಅವರು, ಯಶಸ್ಸೆಂದರೆ ಅಸಹಾಯಕ ಜನರ ಮೊಗದಲ್ಲಿ ಮುಗುಳ್ನಗೆ ತರುವುದು. ಅಕ್ಷಯ ಪಾತ್ರ ಇದರಲ್ಲಿ ಯಶಸ್ವಿಯಾಗಿದೆ. ಇದರ ಮಾದರಿಯನ್ನು ವಿಶ್ವಸಂಸ್ಥೆ ಅನುಸರಿಸಬಹುದು ಎಂದೂ ಸಲಹೆ ನೀಡಿದರು.

ಪ್ರಮುಖ ಸುದ್ದಿ :-   ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳು ಮಾರಾಟ ; ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಎಲ್‌ ಐಸಿ ; 24 ತಾಸಿನಲ್ಲಿ ಮಾಡಿದ ಪಾಲಿಸಿಗಳು ಎಷ್ಟೆಂದರೆ..

ಭಾರತ ಸರ್ಕಾರವು ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (PMGKAY) ಅನ್ನು ನಡೆಸುತ್ತಿದೆ ಎಂದು ಹೇಳಿದ ಅವರು, ಇದು 80 ಕೋಟಿ ಜನರಿಗೆ ಪ್ರಯೋಜನ ನೀಡುತ್ತದೆ.
ಇದರ ಭಾಗವಾಗಿ, ಶಾಲಾ ಪೋಷಣೆ ಕಾರ್ಯಕ್ರಮ ಪಿಎಂ ಪೋಶಣ ಯೋಜನೆಯು 11.8 ಕೋಟಿ ಮಕ್ಕಳಿಗೆ ನೇರವಾಗಿ ಪ್ರಯೋಜನ ನೀಡುತ್ತದೆ ಎಂದು ಹೇಳಿದರು. ಇಸ್ಕಾನ್‌ ʼಅಕ್ಷಯ ಪಾತ್ರʼವು ಇದಕ್ಕೆ ಹೆಮ್ಮೆಯ ಸೇರ್ಪಡೆಯಾಗಿದೆ ಮತ್ತು ಭಾರತ ಸರ್ಕಾರದ ಈ ಅದ್ಭುತ ಉಪಕ್ರಮದ ಹೆಮ್ಮೆಯ ಪಾಲುದಾರ” ಎಂದು ಅವರು ಹೇಳಿದರು.
ಸರ್ಕಾರದ ಆರ್ಥಿಕ ನೀತಿಗಳು, ದೂರದೃಷ್ಟಿ ಮತ್ತು ಭಾರತೀಯ ವಾಣಿಜ್ಯೋದ್ಯಮಿಗಳು ಮತ್ತು ನಾಗರಿಕರ ಕಠಿಣ ಪರಿಶ್ರಮ ಮತ್ತು ಬಹುರಾಷ್ಟ್ರೀಯ ಕಂಪನಿಗಳ ವಿದೇಶಿ ನೇರ ಹೂಡಿಕೆಯ ಯಶಸ್ಸಿನಿಂದಾಗಿ ಭಾರತವು ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement