ಅಹ್ಮದ್ನಗರ: ಬಾವಿಗೆ ಬಿದ್ದ ಬೆಕ್ಕಿನ ಪ್ರಾಣ ಉಳಿಸುವ ಪ್ರಯತ್ನದಲ್ಲಿ ಒಂದೇ ಕುಟುಂಬದ ಐವರು ಸಾವಿಗೀಡಾದ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿ ನಡೆದಿದೆ.
ನೆವಾಸ ತಾಲೂಕಿನ ವಾಕಡಿ ಪ್ರದೇಶದಲ್ಲಿ ಏಪ್ರಿಲ್ 9, ಮಂಗಳವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಾವಿಯಲ್ಲಿ ಸಿಲುಕಿದ್ದ ಬೆಕ್ಕನ್ನು ಉಳಿಸುವ ಪ್ರಯತ್ನದಲ್ಲಿ 6 ಮಂದಿ ಒಬ್ಬರ ನಂತರ ಒಬ್ಬರು ಬಾವಿಗೆ ಹಾರಿದ ನಂತರ ಈ ಘಟನೆ ದುರಂತ ಸಂಭವಿಸಿದೆ. ಒಬ್ಬರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮೃತರನ್ನು ಮಾಣಿಕ್ ಕಾಳೆ (65), ಸಂದೀಪ ಕಾಳೆ (36), ಅನಿಲ ಕಾಳೆ (53), ಬಾಬುಲ್ ಕಾಳೆ (28), ಬಾಬಾಸಾಹೇಬ (36) ಎಂದು ಗುರುತಿಸಲಾಗಿದೆ.
ವಾಕಡಿ ಗ್ರಾಮದ ಕಾಳೆ ಎನ್ನುವವರ ಕುಟುಂಬದ ಹಿತ್ತಲಿನಲ್ಲಿ ಬಾವಿಯೊಂದು ಹಾಳು ಬಿದ್ದಿತ್ತು. ಅದನ್ನು ಇತ್ತೀಚೆಗೆ ಬಯೋಗ್ಯಾಸ್ ಗುಂಡಿಯಾಗಿ ಪರಿವರ್ತಿಸಿದ್ದರು.
ಮಂಗಳವಾರ ಬೆಳಿಗ್ಗೆ ಆ ಗುಂಡಿಯಲ್ಲಿ ಬೆಕ್ಕೊಂದು ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು. ಬೆಕ್ಕನ್ನು ನೋಡಿದ್ದ ಯುವಕ ಬಾಬುಲ್ ಕಾಳೆ ಅದನ್ನು ಪಾರು ಮಾಡಲು ಗುಂಡಿಗೆ ಜಿಗಿದು ಅದರ ಪ್ರಾಣ ಉಳಿಸಲು ಮುಂದಾಗಿದ್ದಾನೆ. ಆದರೆ, ಆತ ಹೊರಬರಲು ಸಾಧ್ಯವಾಗಿಲ್ಲ. ಇದನ್ನು ನೋಡಿದ ಇತರ ಐವರು ಆತನ ಪ್ರಾಣ ಕಾಪಾಡಲು ತಾವೂ ಬಾವಿಗೆ ಧುಮುಕಿದ್ದಾರೆ. ಆದರೆ, ಬಯೋಗ್ಯಾಸ್ ಗುಂಡಿಯಲ್ಲಿನ ವಿಷಾನಿಲದಿಂದ (ಮಿಥೇನ್) ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಕ್ಕನ್ನು ರಕ್ಷಿಸಲು, ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಬಾವಿಗೆ ಹಾರಿದ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ನಂತರ ಆತನನ್ನು ಪೊಲೀಸರು ರಕ್ಷಿಸಿದರು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿಯಿಂದ ಮೃತದೇಹಗಳನ್ನು ಮಂಗಳವಾರ ರಾತ್ರಿ ಹೊರತೆಗೆಯಲಾಗಿದೆ. ಬದುಕುಳಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ನೇವಸಾ ತಹಶಿಲ್ದಾರ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ