ನವದೆಹಲಿ : ಸಂಪತ್ತಿನ ಮರು ಹಂಚಿಕೆ ಕುರಿತಾಗಿನ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಘೋಷಣೆಯು ಈಗ ವಿವಾದ ಸೃಷ್ಟಿಸಿದ್ದು, ಈ ನಡುವೆ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ನೀಡಿರುವ ಉತ್ತರಾಧಿಕಾರ ತೆರಿಗೆ ಸಲಹೆ ವಿವಾದದ ಕಿಡಿ ಹೊತ್ತಿಸಿದೆ.
ಭಾರತದಲ್ಲಿಯೂ ಅಮೆರಿಕ ಮಾದರಿಯ ಉತ್ತರಾಧಿಕಾರ ತೆರಿಗೆ ಅನ್ವಯಿಸುವಂತೆ ಪಿತ್ರೊಡಾ ನೀಡಿರುವ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರೆ ಕಾಂಗ್ರೆಸ್ ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಪಿತ್ರೊಡಾ ಅವರು, ಸಂಪತ್ತಿನ ಮರು ಹಂಚಿಕೆ ನೀತಿಯು ಸಾಮಾನ್ಯ ಜನರ ಹಿತಾಸಕ್ತಿಗೆ ಪೂರಕವಾಗಿದೆ, ಇದು ಶ್ರೀಮಂತರ ಪರವಾಗಿ ಇಲ್ಲ ಎಂದು ಕಾಂಗ್ರೆಸ್ನ ಚುನಾವಣಾ ಆಶ್ವಾಸನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ ಇದೇವೇಳೆ ಅಮೆರಿಕದ ಉತ್ತರಾಧಿಕಾರ ತೆರಿಗೆ ಬಗ್ಗೆ ವಿವರಿಸಿರುವ ಅವರು, “ವ್ಯಕ್ತಿಯೊಬ್ಬ 100 ಮಿಲಿಯನ್ ಡಾಲರ್ ಸಂಪತ್ತು ಹೊಂದಿದ್ದರೆ, ಆತ ಮೃತಪಟ್ಟಾಗ ತನ್ನ ಮಕ್ಕಳಿಗೆ ಶೇ 45ರಷ್ಟು ಆತನ ಸಂಪತ್ತನ್ನು ಮಾತ್ರ ವರ್ಗಾಯಿಸಬಹುದಾಗಿದೆ. ಉಳಿದ ಸಂಪತ್ತು ಸರ್ಕಾರಕ್ಕೆ ಹೋಗುತ್ತದೆ. ಇದು ಬಹಳ ಆಸಕ್ತಿಕರ ಕಾನೂನು. ನಿಮ್ಮ ಪೀಳಿಗೆ ಸಂಪತ್ತು ಸೃಷ್ಟಿಸಿದೆ. ಈಗ ನೀವು ನಿರ್ಗಮಿಸುತ್ತಿದ್ದೀರಿ. ಹೀಗಾಗಿ ನೀವು ನಿಮ್ಮ ಸಂಪತ್ತನ್ನು, ಸಂಪೂರ್ಣವಾಗಿ ಅಲ್ಲ, ಆದರೆ ಅರ್ಧದಷ್ಟನ್ನು ಸಾರ್ವಜನಿಕರಿಗೆ ಬಿಟ್ಟು ಹೋಗಿ ಎಂದು ಈ ಕಾನೂನು ಹೇಳುತ್ತದೆ. ಇದು ಬಹಳ ನ್ಯಾಯೋಚಿತ ಎಂದು ನನಗೆ ಅನಿಸುತ್ತಿದೆ” ಎಂದು ಪಿತ್ರೋಡಾ ಹೇಳಿದ್ದಾರೆ.
“ಭಾರತದಲ್ಲಿ ಈ ಕಾನೂನು ಇಲ್ಲ. 10 ಬಿಲಿಯನ್ ಸಂಪತ್ತು ಹೊಂದಿರುವ ವ್ಯಕ್ತಿ ಮೃತಪಟ್ಟರೆ, ಅಷ್ಟೂ ಸಂಪತ್ತು ಅವರ ಮಕ್ಕಳಿಗೇ ಸಿಗುತ್ತದೆ. ಸಾರ್ವಜನಿಕರಿಗೆ ಆತನ ಸಂಪತ್ತು ಸಿಗುವುದು ಶೂನ್ಯವಾಗಿದೆ. ಹೀಗಾಗಿ ಈ ರೀತಿಯ ಕಾನೂನುನಗಳ ಬಗ್ಗೆ ಚರ್ಚಿಸಬೇಕಾದ ಅಗತ್ಯವಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ನಾವು ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವಾಗ, ನಾವು ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ ಅದು ಜನರ ಹಿತಾಸಕ್ತಿಯಾಗಿದೆಯೇ ಹೊರತು ಕೇವಲ ಅತಿ ಶ್ರೀಮಂತರ ಹಿತಾಸಕ್ತಿಯಲ್ಲ ಎಂದು ಅವರು ಹೇಳಿದರು.
ಸಂಪತ್ತು ಹಂಚಿಕೆಯ ವಿಷಯವು ‘ನೀತಿ ಸಮಸ್ಯೆ’ ಎಂದು ಹೇಳಿದ ಪಿತ್ರೋಡಾ, “ಇದು ನೀತಿಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವು ಸಂಪತ್ತಿನ ಹಂಚಿಕೆಯನ್ನು ಉತ್ತಮಗೊಳಿಸುವ ನೀತಿಯನ್ನು ರೂಪಿಸುತ್ತದೆ. ನಮಗೆ ಕನಿಷ್ಠ ವೇತನ (ಭಾರತದಲ್ಲಿ) ಇಲ್ಲ. ನೀವು ಬಡವರಿಗೆ ಇಷ್ಟು ಹಣವನ್ನು ನೀಡಬೇಕು ಎಂದು ನಾವು ದೇಶದಲ್ಲಿ ಕನಿಷ್ಠ ವೇತನವನ್ನು ತಂದರೆ ಅದು ಸಂಪತ್ತಿನ ಹಂಚಿಕೆಯಾಗಿದೆ. ಇಂದು, ಶ್ರೀಮಂತರು ತಮ್ಮ ಪ್ಯೂನ್ಗಳು, ಸೇವಕರು ಮತ್ತು ಮನೆಯ ಸಹಾಯಕ್ಕೆ ಸಾಕಷ್ಟು ಹಣವನ್ನು ನೀಡುವುದಿಲ್ಲ ಆದರೆ ಅವರು ದುಬೈ ಮತ್ತು ಲಂಡನ್ನಲ್ಲಿ ವಿಹಾರಕ್ಕೆ ಆ ಹಣವನ್ನು ಖರ್ಚು ಮಾಡುತ್ತಾರೆ … ನೀವು ಸಂಪತ್ತಿನ ಹಂಚಿಕೆಯ ಬಗ್ಗೆ ಮಾತನಾಡುವಾಗ, ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಅಲ್ಲ. ನನ್ನ ಬಳಿ ಇಷ್ಟು ಹಣವಿದೆ ಮತ್ತು ನಾನು ಅದನ್ನು ಎಲ್ಲರಿಗೂ ಹಂಚುತ್ತೇನೆ ಎಂದು ಹೇಳಿ ಪಿತ್ರೋಡಾ ಹೇಳಿದರು.
ಆದರೆ ಅಮೆರಿಕದ ಆರು ರಾಜ್ಯಗಳಲ್ಲಿ ಮಾತ್ರ ಈ ಉತ್ತರಾಧಿಕಾರ ತೆರಿಗೆ ವ್ಯವಸ್ಥೆ ಇದೆ. ‘ಡೆತ್ ಟ್ಯಾಕ್ಸ್’ ಅಥವಾ ಮರಣ ತೆರಿಗೆ ಎಂಬ ಇನ್ನೊಂದು ತೆರಿಗೆ ಪದ್ಧತಿ ಸಹ ಇದೆ. ಇದರಲ್ಲಿ ಸಾವಿನ ಬಳಿಕ ಆಸ್ತಿ ವರ್ಗಾವಣೆ ಮಾಡುವ ಹಕ್ಕಿನ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಆಸ್ತಿ ದೋಚುವವರ ಬಗ್ಗೆ ಜಾಗ್ರತೆ
ಆದರೆ ಈಗ ಪಿತ್ರೊಡಾ ಹೇಳಿಕೆ ಈಗ ರಾಜಕೀಯವಾಗಿ ವಿವಾದದ ಕಿಡಿ ಹೊತ್ತಿಸಿದೆ. ಪಿತ್ರೋಡಾ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆದಿರುವ ಬಿಜೆಪಿ, ‘ಆಸ್ತಿ ಕಸಿಯುವವರ ಬಗ್ಗೆ ಜಾಗ್ರತೆ ವಹಿಸಿ’ ಎಂದು ಜನರಿಗೆ ಸಲಹೆ ನೀಡಿದೆ. ಭಾರತವನ್ನು ನಾಶ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಈಗ, ಸ್ಯಾಮ್ ಪಿತ್ರೋಡಾ ಸಂಪತ್ತಿನ ಮರುಹಂಚಿಕೆಗಾಗಿ 50% ಪಿತ್ರಾರ್ಜಿತ ತೆರಿಗೆಯನ್ನು ಪ್ರತಿಪಾದಿಸುತ್ತಾರೆ. ಇದರರ್ಥ ನಮ್ಮ ಎಲ್ಲಾ ಶ್ರಮ ಮತ್ತು ಉದ್ಯಮದೊಂದಿಗೆ ನಾವು ನಿರ್ಮಿಸುವ ಯಾವುದೇ ಸಂಪತ್ತಿನ 50%ರಷ್ಟನ್ನು ತೆಗೆದುಕೊಳ್ಳಲಾಗುತ್ತದೆ. ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಪಾವತಿಸುವ ಎಲ್ಲಾ ತೆರಿಗೆಯ ಜೊತೆಗೆ, ಅದು ಕೂಡ ಹೆಚ್ಚಾಗುತ್ತದೆ ಎಂದು ಬಿಜೆಪಿಯ ಅಮಿತ್ ಮಾಳವೀಯ ಹೇಳಿದ್ದಾರೆ.
“ಕಾಂಗ್ರೆಸ್ಗೆ ಪಕ್ಷಕ್ಕೆ ಮತ ಹಾಕುವುದು ಎಂದರೆ ನಿಮ್ಮ ಹಣ, ಆಸ್ತಿ, ವಸ್ತುಗಳನ್ನು ಕಳೆದುಕೊಳ್ಳುವುದಕ್ಕೆ ಸಮವಾಗಿರುತ್ತದೆ. ಜನರ ಆಸ್ತಿ ಕಸಿಯುವವರು ಇಲ್ಲಿದ್ದಾರೆ. ಹೀಗಾಗಿ ಮತದಾರರೇ ಜಾಗರೂಕರಾಗಿರಿ. ಎಂದು ಬಿಜೆಪಿ ವಕ್ತಾರ ಜೈವೀರ್ ಶೆರ್ಗಿಲ್ ಟ್ವೀಟ್ ಮಾಡಿದ್ದಾರೆ.
“ನೀವು ತೆರಿಗೆ ಪಾವತಿಸಿ ಕಷ್ಟಪಟ್ಟು ಸಂಪಾದಿಸಿದ ಸಂಪನ್ಮೂಲಗಳನ್ನು ದೋಚಲು ಕಾಂಗ್ರೆಸ್ ಬಯಸಿದೆ” ಎಂದು ಶೆಹಜಾದ್ ಪೂನಾವಾಲ ಅವರು ಟೀಕಿಸಿದ್ದಾರೆ. “ವಿಪರ್ಯಾಸವೆಂದರೆ ಗಾಂಧಿಗಳು ತಮ್ಮ ಸ್ವಂತ ಮಕ್ಕಳು ಮತ್ತು ಅಳಿಯನಿಗಾಗಿ ಬೃಹತ್ ಖಜಾನೆ ನಿರ್ಮಿಸಿದ್ದಾರೆ. ಆದರೆ ಅವರು ಜನರು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಕಿತ್ತುಕೊಳ್ಳಲು ಬಯಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್…..
ಆದರೆ ಸ್ಯಾಮ್ ಪಿತ್ರೊಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಪಿತ್ರೋಡಾ ಅವರ ಹೇಳಿಕೆ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಅದು ಹೇಳಿದೆ. “ಪಿತ್ರೊಡಾ ಹೇಳಿಕೆಯನ್ನು ಭಾವೋದ್ರೇಕಗೊಳಿಸುವ ಪ್ರಯತ್ನವು ಪ್ರಧಾನಿ ನರೇಂದ್ರ ಮೋದಿ ಅವರ ದುರುದ್ದೇಶಪೂರ್ವಕ ಹಾಗೂ ಹಾನಿಕರ ಚುನಾವಣಾ ಪ್ರಚಾರದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರ” ಎಂದು ಕಾಂಗ್ರೆಸ್ ನಾಯಕ ಜೈರಾಮ ರಮೇಶ ಆರೋಪಿಸಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರು ನನ್ನನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತದ ಅನೇಕರಿಗೆ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದಾರೆ. ಅವರು ಭಾರತದ ಅಭಿವೃದ್ಧಿಗೆ ಹಲವಾರು, ನಿರಂತರ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಪಿತ್ರೋಡಾ ಅವರು ಬಲವಾಗಿ ಭಾವಿಸುವ ವಿಷಯಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಖಂಡಿತವಾಗಿ, ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಚರ್ಚಿಸಲು, ವ್ಯಕ್ತಪಡಿಸಲು ಮತ್ತು ಚರ್ಚಿಸಲು ಸ್ವಾತಂತ್ರ್ಯವಿದೆ.
ಪಿತ್ರೋಡಾ ಅವರ ಅಭಿಪ್ರಾಯಗಳು ಯಾವಾಗಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತವೆ ಎಂದು ಇದರ ಅರ್ಥವಲ್ಲ. ಅನೇಕ ಬಾರಿ ಅವರು ಮಾಡುವುದಿಲ್ಲ. ಇದೀಗ ಅವರ ಕಾಮೆಂಟ್ಗಳನ್ನು ಸಂವೇದನಾಶೀಲಗೊಳಿಸುವುದು ನರೇಂದ್ರ ಮೋದಿಯವರ ದುರುದ್ದೇಶಪೂರಿತ ಮತ್ತು ಚೇಷ್ಟೆಯ ಚುನಾವಣಾ ಪ್ರಚಾರದಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶಪೂರ್ವಕ ಮತ್ತು ಹತಾಶ ಪ್ರಯತ್ನಗಳು; ಅದು ಸುಳ್ಳು ಮತ್ತು ಹೆಚ್ಚು ಸುಳ್ಳುಗಳಿಂದ ಮಾತ್ರ ನಿರೂಪಿಸಲ್ಪಟ್ಟಿದೆ ಎಂದು ಜೈರಾಮ ರಮೇಶ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ