ಮುಂಬೈ : 26/11ರ ಮುಂಬೈ ದಾಳಿ ವೇಳೆ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಭಯೋತ್ಪಾದಕ ಅಜ್ಮಲ್ ಕಸಬ್ ಕೊಂದಿಲ್ಲ, ಆದರೆ ಆರ್ಎಸ್ಎಸ್-ಸಂಯೋಜಿತ ಪೋಲೀಸ್ ಅಧಿಕಾರಿಯೊಬ್ಬರು ಅವರನ್ನು ಹತ್ಯೆ ಮಾಡಿದ್ದಾರೆ ಮತ್ತು ವಕೀಲ ಉಜ್ವಲ್ ನಿಕಮ್ ಒಬ್ಬ ದೇಶದ್ರೋಹಿ, ಅವರು ಸತ್ಯವನ್ನು ಹತ್ತಿಕ್ಕಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್ ಅವರು ಹೇಳಿಕೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರನ್ನು ಕೊಂದ ಬುಲೆಟ್ ಅಜ್ಮಲ್ ಕಸಬ್ ಅಥವಾ ದಾಳಿಯಲ್ಲಿ ಭಾಗಿಯಾಗಿರುವ ಇತರ ಒಂಬತ್ತು ಪಾಕಿಸ್ತಾನಿ ಭಯೋತ್ಪಾದಕರ ಬಂದೂಕಿನಿಂದ ಬಂದಿಲ್ಲ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ಎಸ್ಎಸ್) ನಿಷ್ಠರಾಗಿರುವ ಪೊಲೀಸ್ ಅಧಿಕಾರಿಯ ಆಯುಧದಿಂದ ಬಂದಿದೆ ಎಂದು ವಾಡೆತ್ತಿವಾರ್ ಶನಿವಾರ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಮುಂಬೈ ನಾರ್ತ್ ಸೆಂಟ್ರಲ್ನ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಜ್ವಲ್ ನಿಕಮ್ ಅವರು ಈ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಮತ್ತು ಅವರೊಬ್ಬ “ದೇಶದ್ರೋಹಿ” ಎಂದು ವಾಡೆಟ್ಟಿವಾರ್ ಕರೆದಿದ್ದಾರೆ. ಉಜ್ವಲ್ ನಿಕಂ ಅವರನ್ನು ಲೋಕಸಭೆ ಚುನಾವಣೆಗೆ ನಾಮನಿರ್ದೇಶನ ಮಾಡಿರುವ ಬಿಜೆಪಿ ನಿರ್ಧಾರವನ್ನು ಪ್ರಶ್ನಿಸಿದ ಅವರು, ಬಿಜೆಪಿ ದ್ರೋಹಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಉಜ್ವಲ್ ನಿಕಮ್ ಅವರು 26/11 ಪ್ರಕರಣದಲ್ಲಿ ಸರ್ಕಾರದ ಪರ ವಕೀಲರಾಗಿದ್ದರು ಮತ್ತು ಈಗ ಲೋಕಸಭೆ ಚುನಾವಣೆಯಲ್ಲಿ ಮುಂಬೈ ನಾರ್ತ್ ಸೆಂಟ್ರಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
”ತನಿಖೆಯ ವೇಳೆ ಪ್ರಮುಖ ಮಾಹಿತಿ ಹೊರಬಂದಿತ್ತು. ಆದರೆ, ಅದನ್ನು ದೇಶದ್ರೋಹಿ ಉಜ್ವಲ್ ನಿಕಮ್ ಹತ್ತಿಕ್ಕಿದರು. ನನ್ನ ಪ್ರಶ್ನೆ ಏನೆಂದರೆ ಬಿಜೆಪಿಯವರು ದೇಶದ್ರೋಹಿಯನ್ನು ರಕ್ಷಿಸುವುದು ಮತ್ತು ಅಂತಹ ವ್ಯಕ್ತಿಯನ್ನು ಲೋಕಸಭೆ ಚುನಾವಣೆಗೆ ನಾಮನಿರ್ದೇಶನ ಮಾಡುವುದು ಏಕೆ? ಈ ಮೂಲಕ ಬಿಜೆಪಿ ದೇಶದ್ರೋಹಿಗಳನ್ನು ರಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು.
ಹೇಮಂತ್ ಕರ್ಕರೆ ಅವರ ಸಾವಿನ ಬಗ್ಗೆ ತಾನು ಹೇಳಿದ್ದನ್ನು ನಿವೃತ್ತ ಪೊಲೀಸ್ ಅಧಿಕಾರಿ ಎಸ್ಎಂ ಮುಶ್ರಿಫ್ ಅವರು ಹೂ ಕಿಲ್ಲಡ್ ಕರ್ಕರೆ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ವಾಡೆಟ್ಟಿವಾರ್ ಅವರು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ. ಇಂದಿನ ರಾಜಕೀಯದಲ್ಲಿ ಯಾವುದೇ ನೈತಿಕತೆ ಇಲ್ಲ, ಅಧಿಕಾರಕ್ಕಾಗಿ ರಾಜಕೀಯ ಮಾಡುವವರು ದೇಶವನ್ನು ಮಾರುತ್ತಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಕಾಂಗ್ರೆಸ್ ನಾಯಕ ವಾಡೆತ್ತಿವಾರ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿಯು, 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಆರೋಪಿಸಿದೆ. “ಇದು ಆಘಾತಕಾರಿ ಮತ್ತು ನಂಬಲಾಗದ್ದು.. ಪಾಕಿಸ್ತಾನವು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗಾಗಿ ಪ್ರಾರ್ಥಿಸುವುದರಲ್ಲಿ ಆಶ್ಚರ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರನೀತಿ ಮುಖ್ಯ ವೋಟ್ಬ್ಯಾಂಕ್, ಅದು ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.
ಹೇಮಂತ್ ಕರ್ಕರೆ ಅವರ ಸಾವಿನ ಕುರಿತು “ನಾಚಿಕೆಗೇಡಿನ ಮತ್ತು ಅವಹೇಳನಕಾರಿ” ಹೇಳಿಕೆಗಾಗಿ ವಿಜಯ್ ವಾಡೆಟ್ಟಿವಾರ್ ವಿರುದ್ಧ ನಾಗ್ಪುರ ಬಿಜೆಪಿ ಕಾನೂನು ಘಟಕ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಯನ್ನು ಖಂಡಿಸಿದ್ದಾರೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಾಂಗ್ರೆಸ್ ಕಸಬ್ ಜೊತೆ ಕೈಜೋಡಿಸಿದೆ ಎಂದು ಹೇಳಿದ್ದಾರೆ.
ಹೇಮಂತ್ ಕರ್ಕರೆ ಮುಂಬೈ ಎಟಿಎಸ್ ಮುಖ್ಯಸ್ಥರಾಗಿದ್ದರು ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಕೊಲ್ಲಲ್ಪಟ್ಟರು. 2009 ರಲ್ಲಿ, ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಲಾಯಿತು. 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಭಯೋತ್ಪಾದಕ ಕಸಬ್ನನ್ನು ಗಲ್ಲಿಗೇರಿಸುವವರೆಗೂ ಉಜ್ವಲ್ ನಿಕಮ್ ಅವರು ಸರ್ಕಾರದ ಪರವಾಗಿ ಹೋರಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ