ಬಿಜೆಪಿ ಹಿರಿಯ ನಾಯಕ- ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿ ನಿಧನ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿ ಅವರು ಸೋಮವಾರ ಸಂಜೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌)ಯಲ್ಲಿ ನಿಧನರಾದರು. 72 ವರ್ಷದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಏಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು.
ಒಂದು ಕಾಲದಲ್ಲಿ ಬಿಹಾರದಲ್ಲಿ ಬಿಜೆಪಿಯ ಚಿರಪರಿಚಿತ ಮುಖವಾಗಿದ್ದ ಧೀಮಂತ ನಾಯಕ, ತಮ್ಮ ಅನಾರೋಗ್ಯದ ಕಾರಣದಿಂದ ನಡೆಯುತ್ತಿರುವ ಲೋಕಸಭಾ ಚುನಾವಣೆಯಿಂದ ದೂರ ಇದ್ದರು. ಅವರು ಏಪ್ರಿಲ್ 3 ರಂದು ಎಕ್ಸ್‌ನಲ್ಲಿ ಪೋಸ್ಟ್‌ ಮೂಲಕ ಅದನ್ನು ತಿಳಿಸಿದ್ದರು.
ಕಳೆದ 6 ತಿಂಗಳಿಂದ ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ. ಈಗ ಜನರಿಗೆ ಹೇಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ಅನಾರೋಗ್ಯದ ಕಾರಣ 2024 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ಎಲ್ಲವನ್ನೂ ಪ್ರಧಾನಿಗೆ ಹೇಳಿದ್ದೇನೆ. ಯಾವಾಗಲೂ ಕೃತಜ್ಞರಾಗಿರುತ್ತೇನೆ ಮತ್ತು ಯಾವಾಗಲೂ ದೇಶಕ್ಕೆ, ಬಿಹಾರಕ್ಕೆ ಮತ್ತು ಪಕ್ಷಕ್ಕೆ ಸಮರ್ಪಿಸಲಾಗಿದೆ ಎಂದು ಅವರ ಪೋಸ್ಟ್ ಹೇಳಿದೆ.
ಬಿಹಾರದಲ್ಲಿ ಅವರು ಮೂರು ದಶಕಗಳಲ್ಲಿ ಪಕ್ಷದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. 2005 ಮತ್ತು 2020 ರ ನಡುವೆ 11 ವರ್ಷಗಳ ಕಾಲ, ಎರಡು ಅವಧಿಗಳಲ್ಲಿ, ಅವರು ಮುಖ್ಯಮಂತ್ರಿ ನಿತೀಶಕುಮಾರ ಸರ್ಕಾರದಲ್ಲಿ ಅವರ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಪಾರ್ಥಿವ ಶರೀರವನ್ನು ಮೇ 14ರಂದು ಪಾಟ್ನಾದ ರಾಜೇಂದ್ರ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಮತ್ತು ದಿನದ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.

ಸುಶೀಲಕುಮಾರ ಮೋದಿ ಯಾರು…?
ಜನವರಿ 5, 1952 ರಂದು ಜನಿಸಿದ ಸುಶೀಲಕುಮಾರ ಮೋದಿ ಅವರು ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು, ಅಲ್ಲಿ ಅವರು 1973 ರಲ್ಲಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಅವರ ಮೂರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ, ಸುಶೀಲಕುಮಾರ ಮೋದಿ ಅವರು ಎಂಎಲ್ಎ, ಎಂಎಲ್ಸಿ ಮತ್ತು ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು 2005 ರಿಂದ 2013 ರವರೆಗೆ ಮತ್ತು ಮತ್ತೆ 2017 ರಿಂದ 2020 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಅವರು ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ 1990 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅವರು 1996 ರಿಂದ 2004 ರವರೆಗೆ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
2004 ರಲ್ಲಿ, ಸುಶೀಲ್ ಮೋದಿ ಭಾಗಲ್ಪುರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ರಾಜಕೀಯಕ್ಕೆ ಪರಿವರ್ತನೆಗೊಂಡರು. ಆದಾಗ್ಯೂ, 2005 ರಲ್ಲಿ, ಅವರು ತಮ್ಮ ಲೋಕಸಭಾ ಸ್ಥಾನದಿಂದ ಕೆಳಗಿಳಿದು ಬಿಹಾರದ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ರವಿಶಂಕರ ಪ್ರಸಾದ, ಬಿಹಾರದ ಹಾಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯಕುಮಾರ ಸಿನ್ಹಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸುಶೀಲಕುಮಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ..
“ಪಕ್ಷದಲ್ಲಿ ನನ್ನ ಅಮೂಲ್ಯ ಸಹೋದ್ಯೋಗಿ ಮತ್ತು ದಶಕಗಳಿಂದ ನನ್ನ ಸ್ನೇಹಿತರಾಗಿದ್ದ ಸುಶೀಲ ಮೋದಿಜಿ ಅವರ ಅಕಾಲಿಕ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಬಿಹಾರದಲ್ಲಿ ಬಿಜೆಪಿಯ ಉದಯ ಮತ್ತು ಯಶಸ್ಸಿನಲ್ಲಿ ಅವರು ಅಮೂಲ್ಯ ಪಾತ್ರವನ್ನು ವಹಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದರು. ವಿದ್ಯಾರ್ಥಿ ಸಂಘಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ. ಅವರು ಅತ್ಯಂತ ಶ್ರಮಶೀಲ ಮತ್ತು ಸಮಾಜಮುಖಿ ಶಾಸಕ ಎಂದು ಹೆಸರಾಗಿದ್ದರು. ಅವರು ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅವರು ಆಡಳಿತಾಧಿಕಾರಿಯಾಗಿಯೂ ಸಾಕಷ್ಟು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ. ಜಿಎಸ್‌ಟಿ ಜಾರಿಯಲ್ಲಿ ಅವರ ಸಕ್ರಿಯ ಪಾತ್ರ ಎಂದೆಂದಿಗೂ ಸ್ಮರಣೀಯವಾಗಿದೆ. ನನ್ನ ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪವಿದೆ!,” ಎಂದು ಅವರು ಹೇಳಿದ್ದಾರೆ.

“ನಮ್ಮ ಹಿರಿಯ ನಾಯಕ ಸುಶೀಲಕುಮಾರ ಮೋದಿ ಜಿ ಅವರ ನಿಧನದ ಸುದ್ದಿಯಿಂದ ನಾನು ದುಃಖಿತನಾಗಿದ್ದೇನೆ. ಇಂದು ಬಿಹಾರ ರಾಜಕೀಯದ ಮಹಾನ್ ಹರಿಕಾರನನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಎಬಿವಿಪಿಯಿಂದ ಹಿಡಿದು ಬಿಜೆಪಿಯ ಸಂಘಟನೆ, ಸರ್ಕಾರದ ವರೆಗೆ ಸುಶೀಲಜಿ ಹಲವು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಡವರು ಮತ್ತು ಹಿಂದುಳಿದವರ ಹಿತಾಸಕ್ತಿಗಾಗಿ ತಮ್ಮ ಜೀವನ ಮೀಸಲಿಟ್ಟರು. ಓಂ ಶಾಂತಿ ಎಂದು ಅಮಿತ್‌ ಶಾ ಹೇಳಿದ್ದಾರೆ.
ಹಿರಿಯ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ ಮೋದಿಜಿ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ತಿನಿಂದ ಹಿಡಿದು ಇಲ್ಲಿಯವರೆಗೆ ಸಂಘಟನೆಗಾಗಿ ಒಂದಾಗಿ ದುಡಿದಿದ್ದೇವೆ. ಸುಶೀಲ ಮೋದಿ ಅವರ ಇಡೀ ಜೀವನ ಬಿಹಾರಕ್ಕೆ ಮುಡಿಪಾಗಿತ್ತು. ಬಿಹಾರವನ್ನು ಜಂಗಲ್ ರಾಜ್‌ನಿಂದ ಹೊರತರಲು ಮತ್ತು ಅಭಿವೃದ್ಧಿಯ ಪಥದಲ್ಲಿ ತರಲು ಅವರ ಪ್ರಯತ್ನಗಳು ಬಹಳ ಸಹಾಯಕವಾಗಿವೆ. ಅವರ ಅನುಪಸ್ಥಿತಿಯು ಅಸಂಖ್ಯಾತ ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಬಿಹಾರದ ಅಭಿವೃದ್ಧಿಗಾಗಿ ಅವರು ಮಾಡಿದ ಕೆಲಸ ಸದಾ ಸ್ಮರಣೀಯ ಎಂದು ರಾಜನಾಥ ಸಿಂಗ್ ಪೋಸ್ಟ್ ಮಾಡಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಎಚ್‌ಎಎಂ (HAM) ಮುಖ್ಯಸ್ಥ ಜಿತನ್ ರಾಮ ಮಾಂಝಿ ಅವರು X ನಲ್ಲಿ ತಮ್ಮ ಸಂತಾಪವನ್ನು ಪೋಸ್ಟ್ ಮಾಡಿದ್ದಾರೆ. “ನಮ್ಮ ಆತ್ಮೀಯ ಸ್ನೇಹಿತ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸುಶೀಲಕುಮಾರ ಮೋದಿ ಜಿ ಅವರ ನಿಧನಕ್ಕೆ ಹೃತ್ಪೂರ್ವಕ ಶ್ರದ್ಧಾಂಜಲಿ” ಎಂದು ಬರೆದಿದ್ದಾರೆ.
ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿಯವರ ದುಃಖದ ನಿಧನದ ಬಗ್ಗೆ ಕೇಳಲು ವಿಷಾದಿಸುತ್ತೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇರುತ್ತವೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಮಮತಾ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.
“ಬಿಹಾರದ ಮಾಜಿ ಉಪಮುಖ್ಯಮಂತ್ರಿ, ನಮ್ಮ ರಕ್ಷಕ, ಹೋರಾಟಗಾರ ಮತ್ತು ಕಠಿಣ ಪರಿಶ್ರಮಿ ನಾಯಕರಾದ ಗೌರವಾನ್ವಿತ ಸುಶೀಲಕುಮಾರ ಮೋದಿಯವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ” ಎಂದು ತೇಜಸ್ವಿ ಯಾದವ್ ಪೋಸ್ಟ್ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement