ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ….: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ನವದೆಹಲಿ : ಕಪಾಳಮೋಕ್ಷ, ಎಳೆದಾಡಿ, ಎದೆಗೆ ಒದ್ದಿದ್ದಾನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಪ್ತ ವಿಭವಕುಮಾರ ವಿರುದ್ಧ ಆಪ್‌ ನಾಯಕಿ ಸ್ವಾತಿ ಮಲಿವಾಲ್‌ ನೀಡಿರುವ ದೂರಿನಲ್ಲಿ ಗಂಭೀರ ಹಲ್ಲೆ ಆರೋಪ ಮಾಡಲಾಗಿದೆ.
ಸೋಮವಾರ ಬೆಳಗ್ಗೆ, ಮುಖ್ಯಮಂತ್ರಿಯವರ ಅಧಿಕೃತ ನಿವಾಸದ ಡ್ರಾಯಿಂಗ್ ರೂಮಿನಲ್ಲಿ ವಿಭವಕುಮಾರ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ವಾತಿ ಮಲಿವಾಲ್ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಕೇಜ್ರಿವಾಲ್ ಮನೆಯಲ್ಲಿದ್ದರು.
ಕಳೆದ ರಾತ್ರಿ ದಾಖಲಿಸಿದ ಎಫ್‌ಐಆರ್‌ನಲ್ಲಿ, ತಾನು ಸಿವಿಲ್ ಲೈನ್ಸ್‌ನಲ್ಲಿರುವ ಅರವಿಂದ ಕೇಜ್ರಿವಾಲ್ ಅವರ ಮನೆಗೆ ಆಗಮಿಸಿದ್ದಾಗಿ ಮಲಿವಾಲ್‌ ಹೇಳಿದ್ದಾರೆ. ಮತ್ತು ಮುಖ್ಯಮಂತ್ರಿಯವರ ಸಹಾಯಕನನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತಾನು ಬಂದಿರುವ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದೇನೆ ಮತ್ತು ಡ್ರಾಯಿಂಗ್ ರೂಮಿನಲ್ಲಿ ಕಾಯಲು ಹೇಳಲಾಯಿತು ಎಂದು ಅವರು ಹೇಳಿದರು.

ತಾನು ಕಾಯುತ್ತಿದ್ದಾಗ ವಿಭವಕುಮಾರ ಕೋಣೆಗೆ ನುಗ್ಗಿ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ ಎಂದು ಅವರು ಆರೋಪಿಸಿದ್ದಾರೆ. ಆತ ತನ್ನ ಮುಖದ ಮೇಲೆ ಏಳು-ಎಂಟು ಬಾರಿ ಹೊಡೆದಿದ್ದಾನೆ ಮತ್ತು ತಮ್ಮ ಎದೆ, ಹೊಟ್ಟೆ ಭಾಗಗಳಿಗೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ.
“ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಸಹಾಯಕ್ಕಾಗಿ ಪದೇ ಪದೇ ಕೂಗಿಕೊಳ್ಳುತ್ತಿದ್ದೆ. ನನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ, ನಾನು ಆತನನ್ನು ನನ್ನ ಕಾಲುಗಳಿಂದ ದೂರ ತಳ್ಳಿದೆ. ಆ ಸಮಯದಲ್ಲಿ, ಆತ ಕ್ರೂರವಾಗಿ ಎಳೆದಾಡಿದ್ದಾನೆ. ನನ್ನ ಎದೆ, ಹೊಟ್ಟೆ ಮತ್ತು ಸೊಂಟದ ಭಾಗಗಳಿಗೆ ತನ್ನ ಕಾಲುಗಳಿಂದ ಒದೆಯುವ ಮೂಲಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ದಾಳಿಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ ಮತ್ತು 112 ಸಂಖ್ಯೆಗೆ ಕರೆ ಮಾಡಿ ಘಟನೆಯನ್ನು ವರದಿ ಮಾಡಿದೆ” ಎಂದು ಮಲಿವಾಲ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಕೇಜ್ರಿವಾಲ್ ಅವರ ಮೌನಕ್ಕೆ ಬಿಜೆಪಿ ಟೀಕಿಸಿದೆ.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement