ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಗೆ ಗೂಡ್ಸ್ ರೈಲು ಡಿಕ್ಕಿ ; 15 ಮಂದಿ ಸಾವು, 60 ಜನರಿಗೆ ಗಾಯ

ಸಿಲಿಗುರಿ (ಪಶ್ಚಿಮ ಬಂಗಾಳ) : ಗೂಡ್ಸ್ ರೈಲೊಂದು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ.
ಈಶಾನ್ಯ ಫ್ರಂಟಿಯರ್ ರೈಲ್ವೆ ವ್ಯಾಪ್ತಿಗೆ ಒಳಪಡುವ ನಿಜಬರಿ ಮತ್ತು ರಂಗಪಾಣಿ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದ್ದು, ಎಕ್ಸ್‌ಪ್ರೆಸ್ ರೈಲಿನ ಮೂರು ಕೋಚ್‌ಗಳು (ಎರಡು ಪಾರ್ಸೆಲ್ ವ್ಯಾನ್‌ಗಳು ಮತ್ತು ಗಾರ್ಡ್ ವ್ಯಾನ್) ಹಳಿತಪ್ಪಿವೆ. ಇನ್ನೊಂದು ವ್ಯಾನ್ ಭಾಗಶಃ ಜಖಂಗೊಂಡಿದೆ. ಗಾಯಾಳುಗಳನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಉತ್ತರ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಸುಮಾರು 30 ಕಿಮೀ ದೂರದಲ್ಲಿರುವ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಇಂಜಿನ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೂರು ಹಿಂದಿನ ಬೋಗಿಗಳು ಹಳಿತಪ್ಪಿದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಭೀಕರ ಅಪಘಾತದಲ್ಲಿ ಮೂವರು ರೈಲ್ವೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಗ್ನಲ್ ಅನ್ನು ನಿರ್ಲಕ್ಷಿಸಿದ ಚಾಲಕ (ಲೋಕೋ ಪೈಲಟ್) ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಗಾರ್ಡ್ ಸಹ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
13174 ಸಂಖ್ಯೆಯ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಗರ್ತಲಾದಿಂದ ಸಿಯಾಲ್ಡಹ್‌ಗೆ ತೆರಳುತ್ತಿತ್ತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಸಚಿವರು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಅಪಘಾತದ ಹಿಂದಿನ ನಿಖರವಾದ ಕಾರಣವನ್ನು ಎನ್‌ಎಫ್ ರೈಲ್ವೇ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಗೂಡ್ಸ್ ರೈಲು ಅದೇ ಮಾರ್ಗದಲ್ಲಿ ಹಿಂಬದಿಯಿಂದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹೇಗೆ ಸಮೀಪಿಸಿತು ಎಂಬುದು ಗೊತ್ತಾಗಿಲ್ಲ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ಯಾಸೆಂಜರ್ ರೈಲು ಹಳಿಗಳ ಮೇಲೆ ನಿಂತಿದ್ದಾಗ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಎರಡು ಹಿಂಭಾಗದ ಬೋಗಿಗಳು ಹಳಿಗಳಿಂದ ಎಸೆಯಲ್ಪಟ್ಟರೆ, ಮತ್ತೊಂದು ಬೋಗಿಯು ಗೂಡ್ಸ್ ರೈಲಿನ ಇಂಜಿನ್ ಕೆಳಗೆ ಸಿಕ್ಕಿಹಾಕಿಕೊಂಡು ಗಾಳಿಯ ಮಧ್ಯದಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ಹೆಚ್ಚುವರಿ ಸವಾಲನ್ನು ಒಡ್ಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತವು ಒಂದು ವರ್ಷದ ಹಿಂದೆ ಒಡಿಶಾದ ಬಹನಾಗಾ ಬಜಾರ್ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ನೆನಪನ್ನು ತಂದಿತು, ಇದು ಸುಮಾರು 289 ಜನರ ಸಾವಿಗೆ ಕಾರಣವಾಗಿತ್ತು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement