
ಮಂಗಳೂರು: ತುಳುನಾಡಿನ ಅತ್ಯಂತ ಕಾರಣಿಕ ದೈವವಾಗಿರುವ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ , ಭಾರತದ ಕ್ರಿಕೆಟ್ ತಂಡದ ಖ್ಯಾತನಾಮ ಆಟಗಾರ ಕೆ.ಎಲ್. ರಾಹುಲ್, ಖ್ಯಾತ ಚಲನಚಿತ್ರ ನಟ ಸುನಿಲ್ ಶೆಟ್ಟಿ ಕುಟುಂಬದವರು ಭಾಗಿಯಾಗಿದ್ದರು.
ನಟಿ ಕತ್ರಿನಾ ಕೈಫ್, ಅವರ ಪತಿ ವಿಕ್ಕಿ ಕೌಶಲ್, ನಟ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಅಳಿಯ ಹಾಗೂ ಕ್ರಿಕೆಟಿಗ ಕೆ.ಎಲ್ .ರಾಹುಲ್, ಮ್ಯಾಟ್ರಿಕ್ಸ್ ಎಂಟರ್ಟೈನ್ಮೆಂಟ್ನ ರೇಷ್ಮಾ ಶೆಟ್ಟಿ ಹಾಗೂ ವಿ.ಎಮ್ ಕಾಮತ್ ಸೇರಿದಂತೆ ಒಟ್ಟು 9 ಮಂದಿಯ ಹೆಸರನ್ನು ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು.

ಕೋಲದಲ್ಲಿ ವಿಕ್ಕಿ ಕೌಶಲ್ ಹೊರತುಪಡಿಸಿ ಉಳಿದವರು ಭಾಗಿಯಾಗಿದ್ದರು. ಬಳಿಕ ರಾತ್ರಿ ನಡೆದ ಕೋಲದಲ್ಲಿ ಪುರಷರಿಗಷ್ಟೇ ಅವಕಾಶ ಇದ್ದ ಕಾರಣ ಮಹಿಳೆಯರು ಹೊರ ಬಂದಿದ್ದಾರೆ. ಕತ್ರಿನಾ, ರೇಷ್ಮಾ, ಆದ್ಯಾ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಚೇರಿಯಲ್ಲಿ ಉಳಿದುಕೊಂಡರು. ಕೆ.ಎಲ್. ರಾಹುಲ್ ಮತ್ತು ಅಹಾನ್ ಶೆಟ್ಟಿ ಕೋಲದಲ್ಲಿ ಭಾಗವಹಿಸಿದರು. ಕಟ್ಟೆಯೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೋಲವನ್ನು ಹೊರಗೆ ನಿಂತು ಕತ್ರಿನಾ ಕೈಫ್ ಸೇರಿದಂತೆ ಉಳಿದವರು ವೀಕ್ಷಿಸಿದರು. ಹಾಗೂ ಪ್ರಾರ್ಥನೆಯಲ್ಲಿ ಭಾಗಿಯಾದರು.
ಸಂಜೆ ವೇಳೆಗೆ ಕುತ್ತಾರಿಗೆ ಆಗಮಿಸಿದ ಇವರು ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕೊರಗಜ್ಜನ ಕಟ್ಟೆಯ ಕಚೇರಿಯಲ್ಲಿ ಮನವಿ ಮಾಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ