ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಉಲ್ಬಣ : 39 ಸಾವು, ಸರ್ಕಾರಿ ಟಿವಿ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಢಾಕಾ : ಸರ್ಕಾರಿ ಉದ್ಯೋಗಗಳಿಗೆ ಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಪ್ರತಿಭಟನಾಕಾರರು, ಭದ್ರತಾ ಅಧಿಕಾರಿಗಳು ಮತ್ತು ಸರ್ಕಾರದ ಪರ ವಿದ್ಯಾರ್ಥಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ನಂತರ ವ್ಯಾಪಕ ಹಿಂಸಾಚಾರವು ಬಾಂಗ್ಲಾದೇಶದಲ್ಲಿ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ, ಬಾಂಗ್ಲಾದೇಶದಲ್ಲಿ ಗುರುವಾರವು ಅತ್ಯಂತ ಹಿಂಸಾತ್ಮಕ ದಿನವಾಗಿದೆ.
ವಿದ್ಯಾರ್ಥಿಗಳು ಬಾಂಗ್ಲಾದೇಶದಾದ್ಯಂತ ಸಾರಿಗೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಪ್ರತಿಭಟನಾಕಾರರು ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದು ರಾಜಧಾನಿ ಢಾಕಾ ಸೇರಿದಂತೆ ದೇಶದಾದ್ಯಂತ ಘರ್ಷಣೆ ನಡೆಸಿದರು.
ವಾಹನಗಳು, ಪೊಲೀಸ್ ಪೋಸ್ಟ್‌ಗಳು ಮತ್ತು ಇತರ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರ ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದರಿಂದ ನೂರಾರು ಜನರು ಗಾಯಗೊಂಡರು.

ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧತೆ…
ಗುರುವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ ಶುಕ್ರವಾರ ಬಾಂಗ್ಲಾದೇಶದ ಢಾಕಾದಲ್ಲಿ ಬೀದಿಗಳು ನಿರ್ಜನವಾಗಿದ್ದವು. ಬಾಂಗ್ಲಾದೇಶ ಟಿವಿ ಸುದ್ದಿ ವಾಹಿನಿಗಳು ಶುಕ್ರವಾರ ಪ್ರಸಾರ ಮಾಡುತ್ತಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಶುಕ್ರವಾರ ಬಾಂಗ್ಲಾದೇಶದಲ್ಲಿ ಸಂವಹನ ಸೇವೆಗಳು ವ್ಯಾಪಕವಾಗಿ ಅಸ್ತವ್ಯಸ್ತಗೊಂಡವು, ಅಧಿಕಾರಿಗಳು ಗುರುವಾರ ಕೆಲವು ಮೊಬೈಲ್ ಸೇವೆಗಳನ್ನು ಕಡಿತಗೊಳಿಸುವುದರೊಂದಿಗೆ ಅಶಾಂತಿಯನ್ನು ತಗ್ಗಿಸಲು ಪ್ರಯತ್ನಿಸಿದರು. ಆದರೆ ಅಡ್ಡಿಯು ದೇಶಾದ್ಯಂತ ಹರಡಿತು. ನೆಟ್‌ಬ್ಲಾಕ್ಸ್ ಪ್ರಕಾರ, ಬಾಂಗ್ಲಾದೇಶವು ರಾತ್ರಿಯಾಗುತ್ತಿದ್ದಂತೆ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಸಾಗರೋತ್ತರ ದೂರವಾಣಿ ಕರೆಗಳು ಹೆಚ್ಚಾಗಿ ಸಂಪರ್ಕಕ್ಕೆ ಬರುತ್ತಿರಲಿಲ್ಲ ಮತ್ತು ಇಂಟರ್ನೆಟ್ ಮೂಲಕ ಕರೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಉದ್ವಿಗ್ನತೆಯನ್ನು ಶಾಂತಗೊಳಿಸಲು ಪ್ರಧಾನಿ ಶೇಖ್ ಹಸೀನಾ ಅವರು ಟಿವಿಗಳಲ್ಲಿ ಕಾಣಿಸಿಕೊಂಡ ಒಂದು ದಿನದ ನಂತರ ಗುರುವಾರ, ವಿದ್ಯಾರ್ಥಿ ಪ್ರತಿಭಟನಾಕಾರರು ಸರ್ಕಾರಿ ಸುದ್ದಿ ಪ್ರಸಾರಕದ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಹಲವಾರು ಪೊಲೀಸ್ ಪೋಸ್ಟ್‌ಗಳು, ವಾಹನಗಳು ಮತ್ತು ಇತರ ಸಂಸ್ಥೆಗಳಿಗೆ ಬೆಂಕಿ ಹಚ್ಚಲಾಗಿದೆ. ಅವಾಮಿ ಲೀಗ್‌ನ ಹಲವು ಪದಾಧಿಕಾರಿಗಳ ಮೇಲೆಯೂ ವಿದ್ಯಾರ್ಥಿಗಳ ದಾಳಿ ನಡೆದಿದೆ.

ಪ್ರಮುಖ ಸುದ್ದಿ :-   ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

ಶೇಖ್ ಹಸೀನಾ ಸರ್ಕಾರವು 1971 ರಲ್ಲಿ ಪಾಕಿಸ್ತಾನದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದವರ ಕುಟುಂಬಗಳಿಗೆ 30% ಸರ್ಕಾರಿ ಉದ್ಯೋಗಗಳನ್ನು ಮೀಸಲಿಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಹೆಚ್ಚಿನ ನಿರುದ್ಯೋಗದಿಂದ ಉಂಟಾದ ಆಂದೋಲನವು ಈ ವರ್ಷದ ಆರಂಭದಲ್ಲಿ ಪ್ರಧಾನಿ ಹಸೀನಾ ಅವರು ಮರು ಆಯ್ಕೆಯಾದ ನಂತರದ ದೊಡ್ಡದಾಗಿದೆ.
ಕಳೆದ ತಿಂಗಳ ಕೊನೆಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಆದಾಗ್ಯೂ, ಸೋಮವಾರ ಢಾಕಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತರು ಆಡಳಿತಾರೂಢ ಅವಾಮಿ ಲೀಗ್‌ನಿಂದ ಬೆಂಬಲಿತವಾದ ಪ್ರತಿಭಟನಕಾರರು ಮತ್ತು ಪೊಲೀಸರ ಜೊತೆ ಘರ್ಷಣೆ ನಡೆದ ನಂತರ ಇದು ಉಲ್ಬಣಗೊಂಡಿತು.
ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಶೇಖ್ ಹಸೀನಾ ಅವರ ಅವಾಮಿ ಲೀಗ್‌ನ ಬೆಂಬಲಿಗರಿಗೆ ಅನುಕೂಲವಾಗುವಂತೆ ಕೋಟಾ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಪ್ರತಿಭಟನಾಕಾರರು ವಾದಿಸುತ್ತಾರೆ. ಅವರು ಅದನ್ನು ತಾರತಮ್ಯ ವ್ಯವಸ್ಥೆ ಎಂದು ಕರೆಯುತ್ತಾರೆ ಮತ್ತು ಅದನ್ನು ಅರ್ಹತೆ ಆಧಾರಿತ ವ್ಯವಸ್ಥೆಯ ಮೂಲಕ ಬದಲಾಯಿಸಬೇಕು ಎಂದು ಬಯಸುತ್ತಾರೆ.

ಬಾಂಗ್ಲಾದೇಶ ಸರ್ಕಾರವು 2018 ರಲ್ಲಿ ಈ ಕೋಟಾಗಳನ್ನು ರದ್ದುಗೊಳಿಸಿದ್ದರೂ, ಹೈಕೋರ್ಟ್ ಅವುಗಳನ್ನು ನಂತರ ಮರುಸ್ಥಾಪಿಸಿತು.
2018 ರಲ್ಲಿ ಸರ್ಕಾರವು ರದ್ದುಪಡಿಸಿದ ಕೋಟಾವನ್ನು ಮರುಸ್ಥಾಪಿಸುವ ಹೈಕೋರ್ಟ್‌ ಆದೇಶದ ವಿರುದ್ಧ ಸರ್ಕಾರದ ಮೇಲ್ಮನವಿಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಆಗಸ್ಟ್ 7 ರಂದು ಆಲಿಸಲು ಸಿದ್ಧವಾಗಿದೆ.
ಇದೇ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಪ್ರಧಾನಿ ಶೇಖ್ ಹಸೀನಾ, ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ವಿದ್ಯಾರ್ಥಿಗಳು ನಿರಾಶೆಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ವೇಳೆ, ನ್ಯಾಯಾಂಗ ವಿಚಾರಣೆ ನಡೆಸಲಾಗುವುದು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಲಸಾಗುವುದು ಎಂದು ಅವರು ಘೋಷಿಸಿದರು.
ಜಮಾತ್-ಎ-ಇಸ್ಲಾಮಿ ಬಾಂಗ್ಲಾದೇಶದ ವಿದ್ಯಾರ್ಥಿ ವಿಭಾಗವಾದ ಛಾತ್ರ ಶಿಬಿರ ಮತ್ತು ಇನ್ನೊಂದು ಸಂಘಟನೆಯಾದ ಛಾತ್ರ ದಳವು ಪ್ರತಿಭಟನೆಯಲ್ಲಿ ನುಸುಳಿದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಎಂದು ಆಡಳಿತಾರೂಢ ಅವಾಮಿ ಲೀಗ್ ಆರೋಪಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಲೀಗ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement