ವಾಯವ್ಯ ಪಾಕಿಸ್ತಾನದಲ್ಲಿ ಎರಡು ಬುಡಕಟ್ಟುಗಳ ನಡುವೆ ಸಶಸ್ತ್ರ ಘರ್ಷಣೆ ; 36 ಸಾವು, 162 ಮಂದಿಗೆ ಗಾಯ

ಇಸ್ಲಾಮಾಬಾದ್‌ : ವಾಯುವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಜಿಲ್ಲೆಯಲ್ಲಿ ಒಂದು ತುಂಡು ಭೂಮಿಗಾಗಿ ಹೋರಾಡುತ್ತಿರುವ ಎರಡು ಬುಡಕಟ್ಟುಗಳ ನಡುವೆ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಮತ್ತು 162 ಇತರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಪ್ಪರ್ ಕುರ್ರಂ ಜಿಲ್ಲೆಯ ಬೊಶೆರಾ ಗ್ರಾಮದಲ್ಲಿ ಐದು ದಿನಗಳ ಹಿಂದೆ ಭಾರಿ ಘರ್ಷಣೆಗಳು ಪ್ರಾರಂಭವಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಇದು ಬುಡಕಟ್ಟು ಮತ್ತು ಧಾರ್ಮಿಕ ಗುಂಪುಗಳ ನಡುವೆ ಮಾರಣಾಂತಿಕ ಘರ್ಷಣೆಗಳು, ಮತೀಯ ಘರ್ಷಣೆಗಳು ಮತ್ತು ಉಗ್ರಗಾಮಿ ದಾಳಿಗಳಿಗೆ ಸಾಕ್ಷಿಯಾಗಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾದ ಕುರ್ರಂ ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ ಬುಡಕಟ್ಟು ಘರ್ಷಣೆಯಲ್ಲಿ 36 ಜನರು ಸಾವಿಗೀಡಾಗಿದ್ದಾರೆ ಮತ್ತು 162 ಜನರು ಗಾಯಗೊಂಡಿದ್ದಾರೆ ಎಂದು ಕುರ್ರಂ ಡೆಪ್ಯುಟಿ ಕಮಿಷನರ್ ಜಾವೇದುಲ್ಲಾ ಮೆಹ್ಸೂದ್ ಹೇಳಿದ್ದಾರೆ.

ಬುಡಕಟ್ಟು ಹಿರಿಯರು, ಮಿಲಿಟರಿ ನಾಯಕತ್ವ, ಪೊಲೀಸ್ ಮತ್ತು ಜಿಲ್ಲಾಡಳಿತದ ಸಹಾಯದಿಂದ ಅಧಿಕಾರಿಗಳು ಸ್ವಲ್ಪ ಸಮಯದ ಹಿಂದೆ ಬೋಶೆರಾ, ಮಲಿಖೇಲ್ ಮತ್ತು ದಂಡರ್ ಪ್ರದೇಶಗಳಲ್ಲಿ ಶಿಯಾ ಮತ್ತು ಸುನ್ನಿ ಬುಡಕಟ್ಟುಗಳ ನಡುವೆ ಸಂಧಾನ ನಡೆಸಿ ಕದನ ವಿರಾಮಕ್ಕೆ ಬರುವಂತೆ ಮಾಡಿದ್ದಾರೆ. ಆದರೆ, ಜಿಲ್ಲೆಯ ಇತರ ಕೆಲವು ಭಾಗಗಳಲ್ಲಿ ಇನ್ನೂ ಗುಂಡಿನ ದಾಳಿ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಪ್ರದೇಶಗಳಲ್ಲಿಯೂ ಕದನ ವಿರಾಮಕ್ಕೆ ಬರುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಪಂಗಡಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಗಳು ಪೀವಾರ್, ತಂಗಿ, ಬಲಿಶ್ಖೇಲ್, ಖಾರ್ ಕಲಾಯ್, ಮಕ್ಬಾಲ್, ಕುಂಜ್ ಅಲಿಜೈ, ಪಾರಾ ಚಮ್ಕಾನಿ ಮತ್ತು ಕರ್ಮಾನ್ ಸೇರಿದಂತೆ ಇತರ ಪ್ರದೇಶಗಳಿಗೆ ಹರಡಿತು.

ಪ್ರಮುಖ ಸುದ್ದಿ :-   ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ...

ಪ್ರತಿಸ್ಪರ್ಧಿ ಪಂಗಡಗಳು ಪರಸ್ಪರ ವಿರುದ್ಧವಾಗಿ ಮಾರ್ಟರ್ ಶೆಲ್‌ಗಳು ಮತ್ತು ರಾಕೆಟ್ ಲಾಂಚರ್‌ಗಳು ಸೇರಿದಂತೆ ಭಾರೀ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಕುರ್ರಂ ಬುಡಕಟ್ಟು ಜಿಲ್ಲೆಯ ಪ್ರಮುಖ ನಗರಗಳಾದ ಪರಚಿನಾರ್ ಮತ್ತು ಸದ್ದಾ ಮೇಲೆಯೂ ಮಾರ್ಟರ್ ಮತ್ತು ರಾಕೆಟ್ ಶೆಲ್‌ಗಳನ್ನು ಹಾರಿಸಲಾಗಿದೆ ಎಂದು ಅವರು ಹೇಳಿದರು.
“ಕಳೆದ ರಾತ್ರಿ ನಡೆದ ಗುಂಡಿನ ಚಕಮಕಿ ಹೆಚ್ಚಿನ ಸಾವುನೋವುಗಳಿಗೆ ಕಾರಣವಾಯಿತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು, ಮುಖ್ಯ ರಸ್ತೆಗಳಲ್ಲಿ ಹಗಲಿನಲ್ಲಿಯೇ ಸಂಚಾರ ಸ್ಥಗಿತಗೊಂಡಿತು. ಪೀಡಿತ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement