ಪ್ರೀತಿಯ ಭಾರತೀಯ ಸೇನೆ…: ವಯನಾಡಿನ ಭೂಕುಸಿತದಲ್ಲಿ ಸಂತ್ರಸ್ತರ ರಕ್ಷಣೆಗೆ ನಿಂತ ಯೋಧರಿಗೆ ಹೃದಯಸ್ಪರ್ಶಿ ಪತ್ರ ಬರೆದ 3ನೇ ತರಗತಿ ಬಾಲಕ

ತಿರುವನಂತಪುರಂ : ವಿನಾಶಕಾರಿ ಭೂಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ಅವಶೇಷಗಳಡಿ ಸಿಲುಕಿದವರು ಹಾಗೂ ಸಂತ್ರಸ್ತರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಭಾರತೀಯ ಯೋಧರಿಗೆ 3ನೇ ತರಗತಿ ಬಾಲಕನೊಬ್ಬ ಹೃದಯಸ್ಪರ್ಶಿ ಪತ್ರ ಬರೆದಿದ್ದಾನೆ ಹಾಗೂ ಮುಂದೊಂದು ದಿನ ತಾನೂ ಭಾರತೀಯ ಸೇನೆ ಸೇರಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾನೆ.
ಮಂಗಳವಾರ ಬೆಳಗಾಗುವ ಮುನ್ನ ವಯನಾಡು ಜಿಲ್ಲೆಯಲ್ಲಿ ಅವಳಿ ಭೂಕುಸಿತಗಳು ಸಂಭವಿಸಿ 200 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.ರಕ್ಷಣಾ ಸಿಬ್ಬಂದಿಯಲ್ಲಿ 500 ಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಸೇನಾ ತಂಡಗಳು, ಭೂಕುಸಿತದಿಂದ ಹಾನಿಗೊಳಗಾದ ಚಹಾ ತೋಟಗಳು ಮತ್ತು ಹಳ್ಳಿಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ.
ರಕ್ಷಣಾ ಕಾರಯದಲ್ಲಿ ತೊಡಗಿರುವ ಭಾರತೀಯ ಸೇನೆಗೆ ಹೃದಯಸ್ಪರ್ಶಿ ಪತ್ರ ಬರೆದಿರುವ 3ನೇ ತರಗತಿ ವಿದ್ಯಾರ್ಥಿಯಾಗಿರುವ ಮಾಸ್ಟರ್ ರಾಯನ್ ಎಂಬ ಬಾಲಕ, ಸೈನಿಕರ ರಕ್ಷಣಾ ಕಾರ್ಯಾಚರಣೆ ಮೆಚ್ಚಿ ಮುಂದೊಂದು ದಿನ ತಾನೂ ಸೇನೆಗೆ ಸೇರುತ್ತೇನೆ ಎಂದು ಭಾರತೀಯ ಸೇನೆಗೆ ಮಲಯಾಳಂ ಭಾಷೆಯಲ್ಲಿ ಪತ್ರ ಬರೆದಿದ್ದಾನೆ.

“ಆತ್ಮೀಯ ಭಾರತೀಯ ಸೇನೆ, ನನ್ನ ಪ್ರೀತಿಯ ವಯನಾಡು ಭಾರಿ ಭೂಕುಸಿತದಿಂದ ಹಾನಿಗೊಳಗಾಗಿದೆ ಮತ್ತು ವಿನಾಶವನ್ನು ಸೃಷ್ಟಿಸಿದೆ. ನೀವು ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ” ಎಂದು ಮಲಯಾಳಂನಲ್ಲಿ ಎಎಂಎಲ್‌ಪಿ ಶಾಲೆಯ 3ನೇ ತರಗತಿ ವಿದ್ಯಾರ್ಥಿ ರಾಯನ್ ಬರೆದಿದ್ದಾನೆ.
ನೀವು ಸಂತ್ರಸ್ತರ ಹಸಿವು ನೀಗಿಸುವ ಮತ್ತು ಸೇತುವೆಯನ್ನು ನಿರ್ಮಿಸುವ ವೀಡಿಯೊವನ್ನು ನಾನು ನೋಡಿದೆ. ಆ ದೃಶ್ಯವು ನನ್ನ ಎದೆಯಾಳಕ್ಕೆ ಇಳಿದಿದೆ. ನಾನು ಮುಂದೊಂದು ದಿನ ಭಾರತೀಯ ಸೇನೆಗೆ ಸೇರಲು ಮತ್ತು ನನ್ನ ರಾಷ್ಟ್ರವನ್ನು ರಕ್ಷಿಸಲು ಆಶಿಸುತ್ತೇನೆ ಎಂದು ಬಾಲಕ ಪತ್ರದಲ್ಲಿ ಬರೆದಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆ “ಯುವ ಯೋಧನಿಗೆ” ಧನ್ಯವಾದಗಳನ್ನು ತಿಳಿಸಿದೆ. ” ನಿಮ್ಮ ಮನದಾಳದ ಮಾತುಗಳು ನಮ್ಮನ್ನು ಆಳವಾಗಿ ಮುಟ್ಟಿವೆ. ಪ್ರತಿಕೂಲ ಸಮಯದಲ್ಲಿ, ನಾವು ಭರವಸೆಯ ದಾರಿದೀಪವಾಗುವ ಗುರಿಯನ್ನು ಹೊಂದಿದ್ದೇವೆ ಮತ್ತು ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸುತ್ತದೆ. ನಿಮ್ಮಂತಹ ವೀರರು ನಮ್ಮ ಕೈಲಾದಷ್ಟು ಮಾಡಲು ನಮಗೆ ಸ್ಫೂರ್ತಿ ನೀಡುತ್ತಾರೆ. ನೀವು ಸಮವಸ್ತ್ರವನ್ನು ಧರಿಸುವ ದಿನಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ ಮತ್ತು ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ನಾವು ಒಟ್ಟಾಗಿ ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡುತ್ತೇವೆ. ಯುವ ಯೋಧರೇ, ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು ಎಂದು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ ಈ ಪುಟ್ಟ ಬಾಲಕನ ಪತ್ರಕ್ಕೆ ಉತ್ತರಿಸಿದೆ.
ಭಾರತೀಯ ಸೇನೆ ಭೂಕುಸಿತಗಳು ಸಂಪರ್ಕಕ್ಕೆ ಅಡ್ಡಿಪಡಿಸಿದ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಹಲವಾರು ತಾತ್ಕಾಲಿಕ ಸೇತುವೆಗಳನ್ನು ಸೇನೆ ನಿರ್ಮಿಸಿದೆ. ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ 190 ಅಡಿ ಉದ್ದದ ಬೈಲಿ ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ, ಇದು ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲಾ ಅತ್ಯಂತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಸೇತುವೆ ನಿರ್ಮಾಣ ಕಾಮಗಾರಿ ಬುಧವಾರ ರಾತ್ರಿ 9:30ಕ್ಕೆ ಆರಂಭವಾಗಿ ಗುರುವಾರ ಸಂಜೆ 5:30ಕ್ಕೆ ಪೂರ್ಣಗೊಂಡಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement