ವಧು-ವರರು ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ತಾನು ನಂಬಿದಂತೆ ಮದುಮಗ ಸರ್ಕಾರಿ ನೌಕರಿಯಲ್ಲಿ ಇಲ್ಲ, ಬದಲಾಗಿ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದ ಮದುಮಗಳು ನಂತರ ಮದುವೆ ಬೇಡ ಎಂದು ಹಠ ಹಿಡಿದು ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ…! ವರನ ಕುಟುಂಬ ಪ್ರಕರಣ ಸುಖಾಂತ್ಯವಾಗಬಹುದು ಎಂದು ನಿರೀಕ್ಷಿಸಿ ದೀರ್ಘ ಸಮಯದ ವರೆಗೆ ಕಾಯ್ದು ನಿರೀಕ್ಷೆ ಹುಸಿಯಾದ ನಂತರ ಅಲ್ಲಿಂದ ತೆರಳಿದೆ ಎಂದು ಹೇಳಲಾಗಿದೆ.
ವಧುವಿನ ಮನೆಯವರು ಛತ್ತೀಸ್ಗಢದ ಬಲರಾಮಪುರದ ಇಂಜಿನಿಯರ್ ಜೊತೆ ಮದುವೆ ನಿಶ್ಚಯಿಸಿದ್ದರು. ವರನ ಕುಟುಂಬವು ಕನೌಜ್ನಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದೆ ಮತ್ತು ವರ ಸ್ವತಃ ಸರ್ಕಾರಿ ಇಂಜಿನಿಯರ್ ಆಗಿದ್ದು, ಅವರು ಆರು ಪ್ಲಾಟ್ಗಳು ಮತ್ತು 20 ಬಿಘಾ ಜಮೀನು ಹೊಂದಿದ್ದಾರೆ ಎಂದು ಮಧ್ಯವರ್ತಿ ಹೇಳಿಕೊಂಡಿದ್ದ.
ಮದುವೆಯ ಮೆರವಣಿಗೆಯು ಮದುವೆಯ ದಿನ ರಾತ್ರಿ ಅತಿಥಿ ಗೃಹಕ್ಕೆ ಬಂದು ತಂಗಿತು. ರಾತ್ರಿ ಮದುವೆಯ ಮೆರವಣಿಗೆಯೊಂದಿಗೆ ವಿಧಿವಿಧಾನ ನೆರವೇರಿತು. ತಡರಾತ್ರಿ ಪರಸ್ಪರ ಹಾರ ಬದಲಾಯಿಸುವ ಸಮಾರಂಭವೂ ನಡೆಯಿತು. ಈ ಮಧ್ಯೆ ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ವಧುವಿಗೆ ವರನಿಗೆ ಸರ್ಕಾರಿ ನೌಕರಿ ಇಲ್ಲ, ಆತ ಖಾಸಗಿ ನೌಕರಿಯಲ್ಲಿದ್ದಾನೆ ಎಂಬ ಸುದ್ದಿ ಬಂತು. ನಂತರ ಆಕೆ ಮದುವೆಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲು ನಿರಾಕರಿಸಿ ಮದುವೆ ರದ್ದುಪಡಿಸುವಂತೆ ಹಠ ಹಿಡಿದಿದ್ದಾಳೆ…!
ಸರ್ಕಾರಿ ನೌಕರಿ ಇರುವ ವರನನ್ನೇ ಗೊತ್ತುಪಡಿಸುವುದಾಗಿ ತನಗೆ ಭರವಸೆ ನೀಡಲಾಗಿತ್ತು. ತಾನು ಯಾವುದೇ ಕಾರಣಕ್ಕೂ ಖಾಸಗಿ ವಲಯದ ಯಾವುದೇ ಯದ್ಯೋಗಿಯನ್ನೂ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.
ವಧುವಿನ ಈ ನಿರ್ಧಾರವು ಎರಡೂ ಕುಟುಂಬಗಳನ್ನು ಮೂಕವಿಸ್ಮಿತರನ್ನಾಗಿಸಿತು ಅವಳನ್ನು ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗದೇ ಹೋಯಿತು.
ಏತನ್ಮಧ್ಯೆ, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಸಂಬಂಧಪಟ್ಟವರು ಜಮಾಯಿಸಿ ಕುಟುಂಬಗಳ ನಡುವೆ ಸಂಧಾನಕ್ಕೆ ಪ್ರಯತ್ನಿಸಿದರು. ಎಲ್ಲವನ್ನೂ ಸರಿದಾರಿಗೆ ತರುವ ಪ್ರಯತ್ನದಲ್ಲಿ ಮದುಮಗ ದೂರವಾಣಿ ಮೂಲಕ ವಿನಂತಿಸಿ ತನ್ನ ವೇತನದ ಸ್ಲಿಪ್ ತರಿಸಿ ಅದನ್ನು ವಧುವಿನ ಕುಟುಂಬಕ್ಕೆ ನೀಡಿದ್ದಾನೆ. ಸಂಬಳದ ಸ್ಲಿಪ್ ಆತನಿಗೆ ತಿಂಗಳಿಗೆ 1,20,000 ರೂ. ವೇತನ ಇದೆ ಎಂಬುದನ್ನು ಬಹಿರಂಗಪಡಿಸಿದೆ.
ಆದರೂ ವಧು ಆತನನ್ನು ಮದುವೆಯಾಗಲು ನಿರಾಕರಿಸಿದಳು. ನಂತರ ಮದುವೆ ರದ್ದಾಯಿತು. ವರ ಮದುವೆಯಿಲ್ಲದೆ ಮರಳಿ ಊರಿಗೆ ತೆರಳಿದ್ದಾನೆ. ಆದರೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ