ಬಿಹಾರದ ಭೋಜಪುರ ಜಿಲ್ಲೆಯ ಜೀಪ್ ಚಾಲಕನೊಬ್ಬ ಅಸಾಧಾರಣ ಶೌರ್ಯ ಮತ್ತು ಸಾಹಸ ಪ್ರದರ್ಶನದಲ್ಲಿ, ಹೊಟ್ಟೆಗೆ ಗುಂಡೇಟು ತಗುಲಿದ ನಂತರವೂ ಹಲವಾರು ಕಿಲೋಮೀಟರ್ಗಳಷ್ಟು ಜೀಪ್ ಓಡಿಸುವ ಮೂಲಕ 14-15 ಪ್ರಯಾಣಿಕರ ಜೀವಗಳನ್ನು ಉಳಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗಂಭೀರ ಗಾಯದ ನಡುವೆಯೂ ಅವರ ಅಚಲ ಧೈರ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ.
ರಾತ್ರಿಯ ವೇಳೆ ಈ ಭಯಾನಕ ಘಟನೆ ನಡೆದಿದ್ದು, ಸ್ಥಳೀಯ ಜೀಪ್ ಚಾಲಕ ಸಂತೋಷ ಸಿಂಗ್ ಅವರುಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ 14-15 ಪ್ರಯಾಣಿಕರೊಂದಿಗೆ ವಾಪಸ್ ಬರುತ್ತಿದ್ದಾಗ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಯಿತು. ಝೌನ್ ಗ್ರಾಮದ ಬಳಿ ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಜೀಪನ್ನು ಹಿಂಬಾಲಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ನೇರವಾಗಿ ಸಿಂಗ್ ಅವರ ಹೊಟ್ಟೆಗೆ ತಗುಲಿತು. ಇದರಿಂದಾಗಿ ಅವರು ತೀವ್ರ ರಕ್ತಸ್ರಾವಕ್ಕೆ ಒಳಗಾದರು.
ಅಸಹನೀಯ ನೋವಿನ ಮಧ್ಯೆಯೂ ಸಂತೋಷ ಸಿಂಗ್ ಅವರು ವಾಹನವನ್ನು ನಿಲ್ಲಿಸಲಿಲ್ಲ. ಅಪಾರವಾದ ನೋವು ಮತ್ತು ರಕ್ತಸ್ರಾವ ಆಗುತ್ತಿದ್ದರೂ ಸಹ, ಅವರು ಜೀಪ್ ಚಾಲನೆ ಮಾಡಿದರು. ರಾತ್ರಿಯ ವೇಳೆ ದುಷ್ಕರ್ಮಿಗಳು ವಾಹನವನ್ನು ಹಲವಾರು ಕಿಲೋಮೀಟರ್ಗಳವರೆಗೆ ಹಿಂಬಾಲಿಸಿದ್ದಾರೆ ಎಂದು ವರದಿಯಾಗಿದೆ. ಅಪಾರ ನೋವಿನ ಮಧ್ಯೆಯೂ ಸಿಂಗ್ ಅವರು ವಿಶ್ವಾಸ ಹಾಗೂ ಧೈರ್ಯ ಕಳೆದುಕೊಳ್ಳಲಿಲ್ಲ. ಒಂದು ಘೋರ ಪ್ರಯಾಣದ ನಂತರ, ಅಂತಿಮವಾಗಿ ಅವರು ಜೀಪ್ ಅನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿದರು ಹಾಗೂ ವಾಹನ ಬೆನ್ನಟ್ಟಿದ ದುಷ್ಕರ್ಮಿಗಳಿಂದ ಜೀಪ್ ಪ್ರಯಾಣಿಕರನ್ನು ಪಾರು ಮಾಡಿದರು.
ತಕ್ಷಣವೇ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಂಗ್ ಅವರನ್ನು ಒಯ್ದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಧೈರ್ಯಶಾಲಿ ಚಾಲಕನನ್ನು ಅರಾ ಆಸ್ಪತ್ರೆಯಲ್ಲಿ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು, ಅಲ್ಲಿ ವೈದ್ಯರು ದೇಹದೊಳಗಿದ್ದ ಬುಲೆಟ್ ಅನ್ನು ಯಶಸ್ವಿಯಾಗಿ ತೆಗೆದುಹಾಕಿದರು. ಸಂತೋಷ ಸಿಂಗ್ ಈಗ “ಅಪಾಯದಿಂದ ಪಾರಾಗಿದ್ದಾರೆ” ಆದರೆ ಹಲವಾರು ದಿನಗಳವರೆಗೆ ನಿಕಟ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರುತ್ತಾರೆ ಎಂದು ಜಗದೀಶಪುರದ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ರಾಜೀವಚಂದ್ರ ಸಿಂಗ್ ತಿಳಿಸಿದ್ದಾರೆ.
ಆಘಾತಕಾರಿ ದಾಳಿಯ ತನಿಖೆ ಈಗಾಗಲೇ ಪ್ರಾರಂಭವಾಗಿದೆ. ಸಂತ್ರಸ್ತ ಚಾಲಕನ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರಿಬ್ಬರ ಸೆರೆಗೆ ಶೋಧ ಕಾರ್ಯ ಆರಂಭಿಸಲಾಗಿದೆ. ಪೊಲೀಸ್ ವರದಿಗಳ ಪ್ರಕಾರ, ದಾಳಿಕೋರರು ಅದೇ ದಿನ ಅದೇ ಪ್ರದೇಶದಲ್ಲಿ ಮತ್ತೊಂದು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಸ್ಥಳೀಯ ಪೊಲೀಸರು ದಾಳಿಕೋರರಿಗಾಗಿ ಶೋಧ ಆರಂಭಿಸಿದ್ದು, ಫೋರೆನ್ಸಿಕ್ ತಜ್ಞರು ತನಿಖೆಯಲ್ಲಿ ಸಹಾಯ ಮಾಡುತ್ತಿದ್ದಾರೆ ಮತ್ತು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಜೀಪ್ ಚಾಲಕ ದುಷ್ಕರ್ಮಿಗಳ ಗುಂಡೇಟಿಗೆ ತುತ್ತಾದರೂ ತನ್ನ ಜೀಪಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಚಾಲಕನ ಸಾಹಸಕ್ಕೆ ಇದೀಗ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ