ಬೀದರಿನಲ್ಲಿ ಹಣದ ವ್ಯಾನ್ ಸಿಬ್ಬಂದಿ ಕೊಂದ ಗಂಟೆಗಳ ನಂತರ ಹೈದರಾಬಾದಿನಲ್ಲಿ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸಿದ ಶಂಕಿತ ದರೋಡೆಕೋರರು…!

ಹೈದರಾಬಾದ್: ಗುರುವಾರ ಕರ್ನಾಟಕದ ಬೀದರಿಲ್ಲಿ ಎಟಿಎಂ ನಗದು ವಾಹನದ ಸಿಬ್ಬಂದಿಗೆ ಗುಂಡು ಹಾರಿಸಿ 93 ಲಕ್ಷ ರೂ. ನಗದು ದರೋಡೆ ಮಾಡಿ ಪರಾರಿಯಾದ ಇಬ್ಬರು ದರೋಡೆಕೋರರು ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿ ಇನ್ನೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ.
ಖಾಸಗಿ ಟ್ರಾವೆಲ್ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯ್ಪುರಕ್ಕೆ ತೆರಳಲು ದರೋಡೆಕೋರರು ಬಸ್ ಹತ್ತಲು ಸಿದ್ಧತೆ ನಡೆಸುತ್ತಿದ್ದಾಗ ಅಫ್ಜಲ್ ಗುಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಬೀದರಿನಲ್ಲಿ ಹತ್ಯೆ ಮತ್ತು ದರೋಡೆ ನಡೆಸಿದ ನಂತರ ಇಬ್ಬರು ವ್ಯಕ್ತಿಗಳು ಹೈದರಾಬಾದಿಗೆ ಬೈಕ್‌ನಲ್ಲಿ ತೆರಳಿದ್ದಾರೆ ಮತ್ತು ನಂತರ ರಾಯ್‌ಪುರಕ್ಕೆ ಹೋಗುವ ಬಸ್‌ಗೆ ಟಿಕೆಟ್ ಕಾಯ್ದಿರಿಸಲು ಖಾಸಗಿ ಟ್ರಾವೆಲ್ ಏಜೆನ್ಸಿಯ ಕಚೇರಿಗೆ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ಇಬ್ಬರು ವ್ಯಕ್ತಿಗಳು ಗುರುವಾರ ಮಧ್ಯಾಹ್ನ 3 ರಿಂದ 4 ಗಂಟೆಯ ನಡುವೆ ತಮ್ಮ ಕಚೇರಿಗೆ ಭೇಟಿ ನೀಡಿದ್ದರು ಎಂದು ಏಜೆನ್ಸಿಯ ಮಾಲೀಕ ರೈಸ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದರು.
ಅವರಲ್ಲಿ ಒಬ್ಬರು ತಮ್ಮನ್ನು ಅಮಿತಕುಮಾರ ಎಂದು ಪರಿಚಯಿಸಿಕೊಂಡಿದ್ದಾನೆ. ಬಸ್ ಸಂಜೆ 7 ಗಂಟೆಗೆ ಹೊರಡಲಿದೆ ಎಂದು ತಿಳಿಸಲಾಯಿತು. ನಮಗೆ ಅನುಮಾನಾಸ್ಪದವಾಗಿ ಕಂಡುಬಂದರೆ ನಾವು ಸಾಮಾನ್ಯವಾಗಿ ವ್ಯಕ್ತಿಗಳ ಸಾಮಾನುಗಳನ್ನು ಪರಿಶೀಲಿಸುತ್ತೇವೆ. ನಮ್ಮ ಮ್ಯಾನೇಜರ್ ಜಹಾಂಗೀರ್ ಮೊದಲಿಗೆ, ತಾನು ಪೊಲೀಸ್ ಎಂದು ಹೇಳಿಕೊಂಡ ಒಬ್ಬ ಪ್ರಯಾಣಿಕರನ್ನು ಪರಿಶೀಲಿಸಿದ್ದಾರೆ. ಅವರಿಗೆ ಅನುಮಾನ ಬಂದ ಕಾರಣ ಇವರಿಬ್ಬರ ಬಳಿ ಹೋಗಿ ಬ್ಯಾಗ್ ತೆರೆಯಲು ಹೇಳಿದ್ದಾರೆ. ಆಗ ಆರೋಪಿಗಳು ಕೆಲವು ನೋಟುಗಳ ಬಂಡಲ್‌ಗಳನ್ನು ಹೊರತೆಗೆದರು.. ಮತ್ತು ಲಂಚ ನೀಡಲು ಪ್ರಯತ್ನಿಸಿದಾಗ ಜಹಾಂಗೀರ್ ಬ್ಯಾಗ್‌ನಲ್ಲಿರುವ ವಸ್ತುಗಳನ್ನು ತೋರಿಸುವಂತೆ ಹೇಳಿದರು. ಆಗ ಆರೋಪಿಗಳು ಆತನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಹಾಂಗೀರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಗುರುವಾರ ಬೀದರಿನಲ್ಲಿ ಈ ಇಬ್ಬರು ದರೋಡೆಕೋರರು ಎಟಿಎಂಗೆ ನಗದು ತುಂಬಿಸುವ ವಾಹನದ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು ಮತ್ತೊಬ್ಬನನ್ನು ಗಾಯಗೊಳಿಸಿ 93 ಲಕ್ಷ ರೂ.ಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು. ಬೀದರ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಮುಖ್ಯ ಶಾಖೆಯ ಮುಂಭಾಗದಲ್ಲಿ ಎಟಿಎಂಗೆ ಹಣ ತುಂಬಲು ಮಾಡಲು ವ್ಯಾನ್ ನಿಲ್ಲಿಸಿದ ವೇಳೆ ಘಟನೆ ನಡೆದಿದೆ.
ವಾಹನದಲ್ಲಿದ್ದ ಗಾರ್ಡ್ ಗಿರಿ ವೆಂಕಟೇಶ ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಸಿಬ್ಬಂದಿ ಶಿವಕುಮಾರ ಗಾಯಗೊಂಡಿದ್ದಾರೆ. ಶಿವಕುಮಾರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗುಂಡು ಹಾರಿಸುವ ಮುನ್ನ ದರೋಡೆಕೋರರು ಕಾವಲುಗಾರರ ಮೇಲೆ ಮೆಣಸಿನ ಪುಡಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಅವರ ಮೇಲೆ ಕಲ್ಲು ಎಸೆದು ಹಿಡಿಯಲು ಯತ್ನಿಸಿದರಾದರೂ ದರೋಡೆಕೋರರು ಪರಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement