
ಮುಂಬೈ : ಬಾಲಿವುಡ್ ನಟ ಸೈಫ್ ಆಲಿ ಖಾನ್ (Saif Ali Khan) ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಶಂಕಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣದ ಶಂಕಿತನನ್ನು ರೈಲ್ವೆ ಸಂರಕ್ಷಣಾ ಪಡೆ ಮಧ್ಯ ಪ್ರದೇಶದಲ್ಲಿ ಬಂಧಿಸಿದೆ. ವರದಿ ಪ್ರಕಾರ, ಸೈಫ್ ಆಲಿ ಖಾನ್ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾದ ಶಂಕಿತನನ್ನು ಹೋಲುವ ವ್ಯಕ್ತಿಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆದರೆ, ಶಂಕಿತ ಉಗ್ರರು ಸೈಫ್ ಮೇಲೆ ದಾಳಿ ನಡೆಸಿದ್ದಾನೋ ಅಥವಾ ಬೇರೆ ವ್ಯಕ್ತಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾಂದ್ರಾ ಅಪಾರ್ಟ್ನಲ್ಲಿರುವ ಸೈಫ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ವ್ಯಕ್ತಿ ಈತನೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಕರೀನಾ ಕಪೂರ್ ಹೇಳಿದ್ದೇನು?
ಘಟನೆ ಬಗ್ಗೆ ಸೈಫ್ ಆಲಿ ಖಾನ್ ಅವರ ಪತ್ನಿಯೂ ಆದ ಬಾಲಿವುಡ್ ನಟಿ ಕರೀನಾ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಗುರುವಾರ (ಜ. 16) ಮುಂಜಾನೆ ಬಾಂದ್ರಾ ನಿವಾಸದಲ್ಲಿ ನಡೆದ ದಾಳಿಯನ್ನು ನೆನಪಿಸಿಕೊಂಡ ಕರೀನಾ ಕಪೂರ್ ಖಾನ್, ಮನೆ ಒಳಗೆ ನುಗ್ಗಿದ ದುಷ್ಕರ್ಮಿ, ಸೈಫ್ ಆಲಿ ಖಾನ್ ಅವರನ್ನು ಪದೇ ಪದೆ ಇರಿದಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ದಾಳಿಕೋರ ಆಕ್ರಮಣಕಾರಿಯಾಗಿದ್ದ. ಅವನು ಸೈಫ್ ಮೇಲೆ ಪದೇ ಪದೆ ದಾಳಿ ಮಾಡುವುದನ್ನು ನಾನು ನೋಡಿದ್ದೇನೆ. ಸೈಫ್ ಸುರಕ್ಷತೆಯೇ ನಮ್ಮ ಆದ್ಯತೆಯಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು” ಎಂದು ಅವರು ಪೊಲೀಸರ ಬಳಿ ತಿಳಿಸಿದ್ದಾರೆ. ಮನೆಯಿಂದ ಯಾವುದೇ ವಸ್ತು ಕಳುವಾಗಿಲ್ಲ ಎಂದು ತಿಳಿಸಿದ್ದಾರೆ. ಕರೀನಾ ಪ್ರಕಾರ ಸೈಫ್ ಅಲಿ ಖಾನ್ ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ನನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಜೆಹ್ ಬಳಿ ತೆರಳದಂತೆ ತಡೆದ ಸೈಫ್ ಮೇಲೆ ದಾಳಿಕೋರ ಹಲ್ಲೆ ನಡೆಸಿರುವುದಾಗಿ ಕರೀನಾ ವಿವರಿಸಿದ್ದಾರೆ.
ಸೈಫ್ ಆಲಿ ಖಾನ್ ಅವರಿಗೆ 6 ಕಡೆ ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ