ಬೆಂಗಳೂರು : ಪಂಜಾಬಿನ ಪಟಿಯಾಲ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ ಅವರನ್ನು ಭಾನುವಾರ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆ ತರಲಾಗಿದೆ.
ಚಿಕಿತ್ಸೆಗಾಗಿ ಶಾಂತಕುಮಾರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಕುರುಬೂರು ಶಾಂತಕುಮಾರ ಪಟಿಯಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಾಂತಕುಮಾರ ಬೆನ್ನು ಮೂಳೆಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರ್ ಆಂಬುಲೆನ್ಸ್ ಮೂಲಕ ಶಾಂತಕುಮಾರ ಅವರನ್ನು ಬೆಂಗಳೂರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳು ನಿನ್ನೆ ಏರ್ ಆಂಬುಲೆನ್ಸ್ ಸಜ್ಜುಗೊಳಿಸಿದ್ದರು. ಇಬ್ಬರು ಸಹಾಯಕರು ಹಾಗೂ ವೈದ್ಯರ ತಂಡದೊಂದಿಗೆ ಶಾಂತಕುಮಾರ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ.
ಎಂ ಎಸ್ ಪಿ ಗ್ಯಾರಂಟಿ ಸಭೆಗೆ ಹೋಗಿದ್ದ ಕುರುಬೂರು….
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಕಾರಿನಲ್ಲಿ ಚಂಡಿಗಡಕ್ಕೆ , ಕೇಂದ್ರ ಸರ್ಕಾರ ಕೃಷಿ ಬೆಳೆಗಳಿಗೆ ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿ ಬಗ್ಗೆ ಕೇಂದ್ರ ಸರ್ಕಾರದ ಸಭೆಯಲ್ಲಿ ಭಾಗವಹಿಸಲು ಜಗಜಿತ್ ಸಿಂಗ್ ದಲೈ ವಾಲರ ಕಾರಿನ ಹಿಂಭಾಗದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಪಾಟಿಯಾಲದಲ್ಲಿರುವ ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಂಜಾಬಿನ ಕನೋರಿ ಬಾರ್ಡರ್ ನಲ್ಲಿ ಕಳೆದ ಒಂದು ವರ್ಷದಿಂದ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ) ಖಾತ್ರಿಗಾಗಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ ಹಾಗೂ ಸಂಘಟನೆಯ ಪದಾಧಿಕಾರಿಗಳನ್ನು ಹಾಗೂ ರೈತ ಮುಖಂಡರನ್ನು ಚಂಡೀಗಢದಲ್ಲಿ ಕರೆದ ಸಭೆಗೆ ಕೇಂದ್ರ ಸರ್ಕಾರ ಕರೆದಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಸಂಯುಕ್ತ ಕಿಸಾನ್ ಮೋರ್ಚಾದ ದಕ್ಷಿಣ ಭಾರತದ ಸಂಚಾಲಕರಾದ ಕುರುಬೂರು ಶಾಂತಕುಮಾರ ಹಾಗೂ ತಮಿಳುನಾಡಿನ ರೈತ ಸಂಘದ ಅಧ್ಯಕ್ಷರಾದ ಟಿ ಆರ್ ಪಾಂಪಾಂಡಿಯನ್ ಹೋಗುತಿದ್ದ ಕಾರು ಮಾರ್ಗ ಮಧ್ಯ ಪಂಜಾಬಿನ ಪಟಿಯಾಲದ ಹತ್ತಿರ ಫೆ.14 ರಂದು ಅಪಘಾತವಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ