ನವದೆಹಲಿ: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಅರೆಸೈನಿಕ ಸಿಬ್ಬಂದಿ ಸಾವಿಗೀಡಾದ ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಪಾತ್ರವಿದೆ ಎಂಬುದನ್ನು ಪಾಕಿಸ್ತಾನಿ ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಹಲವು ವರ್ಷಗಳಿಂದ ನಬಂದ ಪಾಕಿಸ್ತಾನವು ಈಗ ಅನಿರೀಕ್ಷಿತವಾಗಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಕೈವಾಡವಿದೆ ಎಂಬುದನ್ನು ಒಪ್ಪಿಕೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನ ವಾಯುಪಡೆಯ ಸಾರ್ವಜನಿಕ ಸಂಪರ್ಕ ಮಹಾನಿರ್ದೇಶಕರಾದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್, ಪುಲ್ವಾಮಾ ಬಾಂಬ್ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಪಾತ್ರವಿದೆ ಎಂಬುದನ್ನು ಒಪ್ಪಿಕೊಳ್ಳುತ್ತ ಇದು ಪಾಕಿಸ್ತಾನ ಸೇನೆಯ “ಯುದ್ಧತಂತ್ರದ ಪ್ರತಿಭೆ”ಯ ಕೃತ್ಯ ಎಂದು ಹೇಳಿಕೊಂಡಿದ್ದಾರೆ.
ಈ ತಪ್ಪೊಪ್ಪಿಗೆಯು ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವು ತಾನು ಮುಗ್ಧ ಎಂದು ಸುಳ್ಳು ಹೇಳುತ್ತ ಬಂದಿದ್ದನ್ನು ಬಯಲಿಗೆ ಎಳೆದಿದ್ದು, ಭಯೋತ್ಪಾದನೆಯಲ್ಲಿ ತನ್ನ ಕೈವಾಡವಿದೆ ಎಂಬುದನ್ನು ಜಾಗತಿಕವಾಗಿ ಒಪ್ಪಿಕೊಂಡಂತಾಗಿದೆ ಅಲ್ಲದೆ, ಪಹಲ್ಗಾಮ್ ಭಯೋತ್ಪಾದಕ ಘಟನೆಗೆ ಸಂಬಂಧಿಸಿದಂತೆ ಭಾರತದಿಂದ ಪುರಾವೆಗಳನ್ನು ಕೇಳಿರುವ ಅದರ ಬೇಡಿಕೆಗಳು ಮಹತ್ವವನ್ನು ಕಳೆದುಕೊಂಡಿವೆ.
ಪುಲ್ವಾಮಾದಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ತಮ್ಮ “ಯುದ್ಧತಂತ್ರದ ಪ್ರತಿಭೆ” ಮತ್ತು ಆಪರೇಷನ್ ಸಿಂಧೂರ ನಂತರ ತನ್ನ “ಕಾರ್ಯಾಚರಣೆಯ ಪ್ರಗತಿ ಮತ್ತು ಕಾರ್ಯತಂತ್ರದ ಕುಶಾಗ್ರಮತಿ”ಯನ್ನು ಪ್ರದರ್ಶಿಸಿವೆ ಎಂದು ಡಿಜಿ ಐಎಸ್ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮತ್ತು ನೌಕಾಪಡೆಯ ವಕ್ತಾರರ ಜೊತೆ ಔರಂಗಜೇಬ್ ಅಹ್ಮದ್ ಹೇಳಿದರು.
“ಪಾಕಿಸ್ತಾನದ ವಾಯುಪ್ರದೇಶ, ಭೂಮಿ, ಜಲಪ್ರದೇಶ ಅಥವಾ ಅದರ ಜನರಿಗೆ ಬೆದರಿಕೆಯೊಡ್ಡಿದರೆ, ಯಾವುದೇ ರಾಜಿ ಸಾಧ್ಯವಿಲ್ಲ. ಅದನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ನಾವು ನಮ್ಮ ರಾಷ್ಟ್ರಕ್ಕೆ ಋಣಿಯಾಗಿದ್ದೇವೆ. ಪಾಕಿಸ್ತಾನಿ ಜನರು ತಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ನಂಬಿಕೆಯನ್ನು ನಾವು ಯಾವಾಗಲೂ ಎತ್ತಿಹಿಡಿಯುತ್ತೇವೆ, ಯಾವುದೇ ಬೆಲೆ ತೆತ್ತಾದರೂ. ಪುಲ್ವಾಮಾದಲ್ಲಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಮೂಲಕ ನಾವು ಅದನ್ನು ತಿಳಿಸಲು ಪ್ರಯತ್ನಿಸಿದ್ದೇವೆ; ಈಗ, ನಾವು ನಮ್ಮ ಕಾರ್ಯಾಚರಣೆಯ ಪ್ರಗತಿ ಮತ್ತು ಕಾರ್ಯತಂತ್ರದ ಕುಶಾಗ್ರಮತಿಯನ್ನು ಪ್ರದರ್ಶಿಸಿದ್ದೇವೆ ಎಂದು ಅವರು ಹೇಳಿದರು.
ಜೈಶ್-ಎ-ಮೊಹಮ್ಮದ್ (ಜೆಇಎಂ) ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ತಾನು ಭಾಗಿಯಾಗಿರುವುದನ್ನು ನಿರಾಕರಿಸಿತ್ತ ಬಂದಿತ್ತು. ಭಾರತವು ಆತ್ಮಾಹುತಿ ಬಾಂಬರ್ ಮತ್ತು ಬವಾಹಲ್ಪುರದಲ್ಲಿರುವ ಜೆಇಎಂ ಕೇಂದ್ರ ಕಚೇರಿಗೆ ಸಂಪರ್ಕ ಕಲ್ಪಿಸುವ ದಾಖಲೆಗಳನ್ನು ಒದಗಿಸಿದ್ದರೂ, ಪಾಕಿಸ್ತಾನವು ನಿರಂತರವಾಗಿ ಮತ್ತಷ್ಟು ಪುರಾವೆಗಳನ್ನು ನೀಡುವಂತೆ ಕೇಳುತ್ತ ಬಂದಿತ್ತು ಮತ್ತು ಭಾರತದ ಆರೋಪಗಳನ್ನು ತಿರಸ್ಕರಿಸುತ್ತ ಬಂದಿತ್ತು. ಆದರೆ ಈಗ ಪಾಕಿಸ್ತಾನದ ವಾಯುಪಡೆಯ ಉನ್ನತ ಅಧಿಕಾರಿಯೊಬ್ಬರು ಪುಲ್ವಾಮಾ ಭಯೋತ್ಪಾದನಾ ಕೃತ್ಯಗಳಲ್ಲಿ ತನ್ನ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಭಯೋತ್ಪಾದನೆಯಲ್ಲಿ ಅದರ ಪಾತ್ರವಿದೆ ಎಂದು ಭಾರತ ಹೇಳುತ್ತ ಬಂದಿರುವುದನ್ನು ಸಾಬೀತುಪಡಿಸಿದೆ.
ಪುಲ್ವಾಮಾ ದಾಳಿಯ ನಂತರ, ಭಾರತವು ಬಾಲಕೋಟ್ನಲ್ಲಿರುವ ಜೆಇಎಂ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಮರುದಿನ ಇಸ್ಲಾಮಾಬಾದ್ನ ಪ್ರತಿಕ್ರಿಯೆಯಲ್ಲಿ ಅದರ ವಾಯುಪಡೆಯು ಭಾರತೀಯ ವಿಮಾನಗಳನ್ನು ಎದುರಿಸಿತು, ಇದು ವೈಮಾನಿಕ ಯುದ್ಧಕ್ಕೆ ಕಾರಣವಾಯಿತು. ಈ ಕಾರ್ಯಾಚರಣೆಯ ಸಮಯದಲ್ಲಿ, ವಿಂಗ್ ಕಮಾಂಡರ್ ಅಭಿನಂದನ ವರ್ಧಮಾನ ಪೈಲಟ್ ಆಗಿದ್ದ ಭಾರತೀಯ ವಾಯುಪಡೆಯ ಮಿಗ್ -21 ಬೈಸನ್ ಅನ್ನು ಪಾಕಿಸ್ತಾನಿ ಪ್ರದೇಶದೊಳಗೆ ಹೊಡೆದುರುಳಿಸಲಾಯಿತು. ಅಭಿನಂದನ್ ವರ್ಧಮಾನ ಸುರಕ್ಷಿತವಾಗಿ ಹೊರಬಂದಾಗ ಪಾಕಿಸ್ತಾನಿ ಪಡೆಗಳು ಅವರನ್ನು ಬಂಧಿಸಿದ್ದು. ನಂತರ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು.
ನಿಮ್ಮ ಕಾಮೆಂಟ್ ಬರೆಯಿರಿ