ಚಾಮರಾಜನಗರ: ಕೆಲವೇ ತಾಸುಗಳ ಅಂತರದಲ್ಲಿ ಇಬ್ಬರ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ದಾಳಿಯಲ್ಲಿ ಮಹಿಳೆ ಸಾವಿಗೀಡಾಗಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ನಡೆದಿದೆ. ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಹುಲಿ ದಾಳಿಗೆ ಅಸುನೀಗಿದ್ದಾರೆ.
ರಂಗಮ್ಮ ಎಂಬವರ ಮೇಲೆ ಮಂಗಳವಾರ ಬೆಳಗ್ಗೆ ಹುಲಿ ದಾಳಿ ಮಾಡಿದ್ದು ತಲೆ ಮತ್ತು ಹೊಟ್ಟೆ ಭಾಗವನ್ನು ತಿಂದಿತ್ತು. ಇದಕ್ಕೂ ಮುನ್ನ, ಸೋಮವಾರ ರಾತ್ರಿ ಬಹಿರ್ದೆಸೆಗೆಂದು ಬಂದಿದ್ದ ರಾಮಯ್ಯನಪೋಡಿನ ನಿವಾಸಿ ರವಿ(35) ಎಂಬಾತನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿತ್ತು.
ಹುಲಿ ದಾಳಿ ಮಾಡಿದಾಗ ರವಿ ಕಿರುಚಿದ್ದು, ಆಗ ಸ್ಥಳೀರು ಬೊಬ್ಬೆ ಹಾಕಿದ ನಂತರ ಹುಲಿ ಹೆಸರಿ ಓಡಿ ಹೋಗಿತ್ತು. ರವಿ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ. ಇದಾದ ಬಳಿಕ, ಮಂಗಳವಾರ ಬೆಳಗ್ಗೆ ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಮೇಲೆ ಹುಲಿ ದಾಳಿ ಮಾಡಿದ್ದು, ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಸೆರೆ…
ರವಿ ಹಾಗೂ ರಂಗಮ್ಮ ಮೇಲೆ ದಾಳಿ ನಡೆಸಿದ ಹುಲಿ ಒಂದೇ ಎಂದು ಹೇಳಲಾಗಿದೆ. ಹುಲಿ ದಾಳಿಯಿಂದ ಎಚ್ಚೆತ್ತ ಬಿಆರ್ಟಿ ಅರಣ್ಯಾಧಿಕಾರಿಗಳು, ಭೀಮ ಮತ್ತು ಗಜೇಂದ್ರ ಎಂಬ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ