ವಿಮಾನ ಅಪಘಾತ | ಮೃತ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಬಂದಿದ್ದ ಲಂಡನ್ ವ್ಯಕ್ತಿ ಸಾವು ; ಅಲ್ಲಿ ತಂದೆಗಾಗಿ ಕಾಯುತ್ತಿದ್ದಾರೆ ಇಬ್ಬರು ಕಂದಮ್ಮಗಳು

ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ವಿನಾಶಕಾರಿ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ದುಃಖಕರವಾದ ವೈಯಕ್ತಿಕ ಕಥೆಗಳು ಹೊರಬರುತ್ತಿವೆ. ಪ್ರತಿಯೊಂದೂ ಹೃದಯವಿದ್ರಾವಕವಾಗಿದೆ. ಅವುಗಳಲ್ಲಿ ಒಂದು ದುರಂತವು ವಿಧಿಯ ಕ್ರೂರ ತಿರುವುಗಳಂತೆ ಕಂಡುಬರುತ್ತಿದೆ; ಮೃತಪಟ್ಟ ಪತ್ನಿಯ ಕೊನೆಯ ಆಸೆಯನ್ನು ಪೂರೈಸಲು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಆಕೆಯ ಚಿತಾ ಭಸ್ಮವನ್ನು ವಿಸಜರ್ಜಿಸಿ ಲಂಡನ್‌ಗೆ ಹಿಂದಿರುಗುವಾಗ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಅವರ ಇಬ್ಬರು ಅನಾಥ ಚಿಕ್ಕ ಹೆಣ್ಣುಮಕ್ಕಳು ಅವರು ಬರುವುದನ್ನು ಲಂಡನ್‌ನಲ್ಲಿ ದಾರಿ ಕಾಯುತ್ತಿದ್ದಾರೆ…!
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ವಾಡಿಯಾ ಗ್ರಾಮದ ಮೂಲದ ಹಾಲಿ ಲಂಡನ್ ನಿವಾಸಿ ಅರ್ಜುನಭಾಯಿ ಮನುಭಾಯಿ ಪಟೋಲಿಯಾ ಅವರು ಕೆಲವೇ ದಿನಗಳ ಹಿಂದೆ ಅಹಮದಾಬಾದಿಗೆ ಆಗಮಿಸಿದ್ದರು. ಅವರ ಪತ್ನಿ ಭಾರತಿ ಅವರು ಕೇವಲ ಒಂದು ವಾರದ ಹಿಂದೆ ಲಂಡನ್‌ನಲ್ಲಿ ನಿಧನರಾಗಿದ್ದರು. ಅವರ ಚಿತಾಭಸ್ಮವನ್ನು ತಮ್ಮ ಪೂರ್ವಜರ ಹಳ್ಳಿಯ ನೀರಿನಲ್ಲಿ ವಿಸರ್ಜಿಸಬೇಕು ಎಂಬುದು ಪತ್ನಿ ಭಾರತಿ ಅವರ ಅಂತಿಮ ಆಸೆಯಾಗಿತ್ತು. ಅದನ್ನು ಈಡೇರಿಸಲು ಅರ್ಜುನ ಅವರು ತಮ್ಮ 8 ಮತ್ತು 4 ವರ್ಷ ವಯಸ್ಸಿನ ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಲಂಡನ್‌ನಲ್ಲಿ ಬಿಟ್ಟು ಗುಜರಾತಿನ ತಮ್ಮ ಪೂರ್ವಜರ ಹಳ್ಳಿಗೆ ಬಂದಿದ್ದರು. ಅವರು ತಮ್ಮ ಪತ್ನಿಯ ಅಂತಿಮ ವಿಧಿಗಳನ್ನು ವೈಯಕ್ತಿಕವಾಗಿ ನೆರವೇರಿಸಬಹುದು ಎಂಬ ಕಾರಣಕ್ಕೆ ಅವರು ತಾವೇ ಬಂದಿದ್ದರು.

ಪ್ರಮುಖ ಸುದ್ದಿ :-   ಅಹಮದಾಬಾದ್‌ ವಿಮಾನ ಅಪಘಾತ : ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಕುಟುಂಬದ ಮೂಲಗಳ ಪ್ರಕಾರ, ಅರ್ಜುನ್‌ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿ, ತನ್ನ ಪತ್ನಿಯ ಚಿತಾಭಸ್ಮವನ್ನು ಆಕೆಯ ಇಚ್ಛೆಯಂತೆ ಹಳ್ಳಿಯ ಕೊಳ ಮತ್ತು ನದಿಯಲ್ಲಿ ವಿಸರ್ಜಿಸಿದ ನಂತರ, ಲಂಡನ್‌ಗೆ ಮರಳಲು ದುರದೃಷಕರ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಆದರೆ ವಿಧಿ ಬೇರೆಯದೇ ಆಟವಾಡುವುದು ಅವರಿಗೆ ಗೊತ್ತಿರಲಿಲ್ಲ. ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ೨೪೧ ಜನರೊಂದಿಗೆ ಅರ್ಜುನ ಸಹ ಸಾವಿಗೀಡಾದರು.
ಲಂಡನ್‌ ನಲ್ಲಿ ಇಬ್ಬರು ಪುಟ್ಟ ಹುಡುಗಿಯರು ತಮ್ಮ ತಂದೆ ಹಿಂದಿರುಗಿ ಬರುತ್ತಾರೆ ಎಂದು ಇನ್ನೂ ಕಾಯುತ್ತಿದ್ದಾರೆ. ಈ ಪುಟ್ಟಮಕ್ಕಳಿಗೆ ಒಂದು ವಾರದೊಳಗೆ ತಾವು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದೇವೆಂದು ಬಹಶಃ ಗೊತ್ತಾಗಿದೆಯೋ ಇಲ್ಲವೋ ಗೊತ್ತಿಲ್ಲ. ತಕ್ಷಣದ ಪೋಷಕರಿಲ್ಲದ ಕಾರಣ, ಅವರ ಭವಿಷ್ಯವು ಈಗ ಅನಿಶ್ಚಿತತೆಯಲ್ಲಿದೆ.
ಅರ್ಜುನಭಾಯಿ ಅವರ ಸಾವಿನ ಸುದ್ದಿ ಅವರ ಅಮ್ರೇಲಿಯಲ್ಲಿನ ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ದಿಗ್ಭ್ರಮೆಗೊಳಿಸಿದೆ. ಭಾರತಿಬೆಹೆನ್‌ ಅವರ ಚಿತಾಭಸ್ಮವನ್ನು ವಿಸರ್ಜಿಸಲು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಸೇರಿದ್ದ ವಾಡಿಯಾ ಗ್ರಾಮದಾದ್ಯಂತ ಶೋಕ ಹರಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಅಹಮದಾಬಾದ್‌ ವಿಮಾನ ದುರಂತ ; ಇಡೀ ವಿಮಾನವೇ ಸುಟ್ಟು ಕರಕಲಾದ್ರೂ ಭಗವದ್ಗೀತೆ ಪುಸ್ತಕಕ್ಕೆ ಏನೂ ಆಗಿಲ್ಲ...!

ಅರ್ಜುನ ಅವರ ತಂದೆ ಮೊದಲೇ ನಿಧನರಾಗಿದ್ದಾರೆ. ಮತ್ತು ಸೂರತ್‌ನಲ್ಲಿ ವಾಸಿಸುವ ಅವರ ವೃದ್ಧ ತಾಯಿ ತೀವ್ರ ಆಘಾತದಲ್ಲಿದ್ದಾರೆ. ಅವರಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯೆಂದರೆ, ಅರ್ಜುನ ಅವರ ಅಂತಿಮ ವಿಧಿಗಳನ್ನು ಯಾರು ಮಾಡುತ್ತಾರೆ ಮತ್ತು ಲಂಡನ್‌ನಲ್ಲಿ ಅವರ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಕಾಲವೇ ಇದಕ್ಕೆ ಉತ್ತರಿಸಬೇಕು.
10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ 242 ಜನರನ್ನು ಹೊಂದಿದ್ದ ಏರ್ ಇಂಡಿಯಾ ವಿಮನ, ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೇವಲ 32 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನ ನಿಲ್ದಾಣಕ್ಕೆ ಬಹಳ ಹತ್ತಿರದಲ್ಲಿರುವ ಮೇಘಾನಿ ನಗರದ ಬಿಜೆ ವೈದ್ಯಕೀಯ ಕಾಲೇಜು ಸಂಕೀರ್ಣದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿತು. ವಿಮಾನದಲ್ಲಿದ್ದ ಒಬ್ಬರು ಮಾತ್ರ ಪವಾಡಸದೃಶರೀತಿಯಲ್ಲಿ ಬದುಕುಳಿದಿದ್ದಾರೆ. 241 ಜನರು ಸಾವಿಗೀಡಾಗಿದ್ದಾರೆ. ಕಾಲೇಜುಸಂಕೀರ್ಣದಲ್ಲಿದ್ದ ಕನಿಷ್ಠ ಮೂವರು ವೈದ್ಯರು ಮತ್ತು ಇನ್ನೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement