ಅಹಮದಾಬಾದ್ನಲ್ಲಿ ಸಂಭವಿಸಿದ ವಿನಾಶಕಾರಿ ಏರ್ ಇಂಡಿಯಾ ವಿಮಾನ ಅಪಘಾತವು ಲಂಡನ್ನಲ್ಲಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದ ರಾಜಸ್ಥಾನದ ಬನ್ಸ್ವಾರಾದ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತು.
ಈ ವಿಮಾನ ಅಪಘಾತದಲ್ಲಿ ರಾಜಸ್ತಾನದವರು 10 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಐವರು ಡಾ. ಪ್ರತೀಕ್ ಜೋಶಿ ಕುಟುಂಬದವರು.
ಪ್ರತೀಕ್ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್ನಲ್ಲಿ ವಾಸಿಸುತ್ತಿದ್ದರು. ಜೋಶಿ ತಮ್ಮ ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳಿಗೆ ವಿದೇಶದಲ್ಲಿ ಭವಿಷ್ಯವನ್ನು ನಿರ್ಮಿಸುವ ಕನಸು ಕಂಡಿದ್ದರು. ಈ ವಾರ ಅಂತಿಮವಾಗಿ ಅದನ್ನು ವಾಸ್ತವ ಮಾಡಲು ಹೊರಟಿದ್ದರು. ಆದರೆ ಕ್ರೂರ ವಿಧಿಯಾಟವೇ ಬೇರೆಯಾಗಿತ್ತು.
ಪ್ರತೀಕ್ ಅವರೊಂದಿಗೆ ಈ ದುರದೃಷ್ಟಕರ ವಿಮಾನದಲ್ಲಿ ಅವರ ಪತ್ನಿ ಡಾ. ಕೋಮಿ ವ್ಯಾಸ್ ಇದ್ದರು, ವೈದ್ಯಕೀಯ ವೃತ್ತಿಪರರಾದ ಅವರು ಲಂಡನ್ಗೆ ಶಾಶ್ವತವಾಗಿ ಸ್ಥಳಾಂತರ ಮಾಡಲು ಕೇವಲ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಐದು ವರ್ಷದ ಅವಳಿ ಗಂಡುಮಕ್ಕಳು ಸೇರಿದಂತೆ ಅವರ ಮೂವರು ಮಕ್ಕಳು ವಿಮಾನದಲ್ಲಿ ಅವರೊಂದಿಗೆ ಇದ್ದರು. ವಿಮಾನ ಅಪಘಾತದಲ್ಲಿ ಈಗ ಕುಟುಂಬಕ್ಕೆ ಕುಟುಂಬವೇ ಇಲ್ಲವಾಗಿದೆ.
ಉದಯಪುರದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಕೋಮಿ ವ್ಯಾಸ್ ತಮ್ಮ ಕೆಲಸವನ್ನು ತ್ಯಜಿಸಿ ತಮ್ಮ ಮೂವರು ಮಕ್ಕಳೊಂದಿಗೆ ಲಂಡನ್ನಲ್ಲಿರುವ ತಮ್ಮ ಪತಿ ಡಾ. ಪ್ರತೀಕ್ ಜೋಶಿ ಜೊತೆ ನೆಲೆಸಲು ಅವರೊಟ್ಟಿಗೆ ತೆರಳುತ್ತಿದ್ದರು.
ಡಾ. ಕೋಮಿ ವ್ಯಾಸ್ ಮತ್ತು ಡಾ. ಪ್ರತೀಕ್ ಜೋಶಿ ಇಬ್ಬರೂ ಉದಯಪುರದ ಪೆಸಿಫಿಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕುಟುಂಬದ ಆಪ್ತರು ಹೇಳಿದ್ದಾರೆ. ಡಾ. ಜೋಶಿ ಸ್ವಲ್ಪ ಸಮಯದ ಹಿಂದೆ ಲಂಡನ್ಗೆ ತೆರಳಿದ್ದರು ಮತ್ತು ಈ ವಾರದ ಆರಂಭದಲ್ಲಿ ಕುಟುಂಬವನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ರಾಜಸ್ಥಾನದ ಬನ್ಸ್ವಾರಾಕ್ಕೆ ಆಗಮಿಸಿದ್ದರು. ದಂಪತಿಯ ಅವಳಿ ಗಂಡು ಮಕ್ಕಳಾದ ನಕುಲ್ ಮತ್ತು ಪ್ರದ್ಯುತ್ ಐದು ವರ್ಷ ವಯಸ್ಸಿನವರಾಗಿದ್ದರು ಮತ್ತು ಅವರ ಮಗಳು ಮಿರಾಯಾ ಎಂಟು ವರ್ಷ ವಯಸ್ಸಿನವಳಾಗಿದ್ದಳು.
ಪ್ರತೀಕ್ ಜೋಶಿ ಕುಟುಂಬದ ಹೊರತಾಗಿ, ರಾಜಸ್ಥಾನದ ಉದಯಪುರ ಜಿಲ್ಲೆಯ ಐವರು ನಿವಾಸಿಗಳು ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ, ಅವರಲ್ಲಿ ಪ್ರಸಿದ್ಧ ಅಮೃತಶಿಲೆಯ ಉದ್ಯಮಿ ಪಿಂಕು ಮೋದಿ ಅವರ ಮಕ್ಕಳಾದ ಶುಭ ಮೋದಿ (24) ಮತ್ತು ಶಗುನ್ ಮೋದಿ (22) ಸೇರಿದ್ದಾರೆ. ಸಹೋದರರು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದರು ಮತ್ತು ಒಟ್ಟಿಗೆ ಪ್ರಯಾಣಿಸುತ್ತಿದ್ದರು.
ಮೃತರಲ್ಲಿ ಉದಯಪುರ ಜಿಲ್ಲೆಯ ರುಂಡೆಡಾ ಗ್ರಾಮದ ವರ್ದಿಚಂದ ಮೆನಾರಿಯಾ ಮತ್ತು ಪ್ರಕಾಶ ಮೆನಾರಿಯಾ ಮತ್ತು ಮಹಿಳಾ ಶಿಕ್ಷಣದಲ್ಲಿ ಸ್ವಯಂಸೇವಕ ಕೆಲಸಕ್ಕೆ ಹೆಸರುವಾಸಿಯಾದ ಬಲೋತ್ರಾದ 27 ವರ್ಷದ ಖುಷ್ಬೂ ರಾಜಪುರೋಹಿತ ಸೇರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ