2025 ರ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ನಿರ್ಣಾಯಕ ರಾಜತಾಂತ್ರಿಕ ತೊಡಗಿಕೊಳ್ಳುವಿಕೆ ಮತ್ತು ನಾಯಕತ್ವ”ವನ್ನು ಗುರುತಿಸಿ ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಅವರನ್ನು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಸಂಭಾವ್ಯ ವಿನಾಶಕಾರಿ ಸಂಘರ್ಷವನ್ನು ತಪ್ಪಿಸುವಲ್ಲಿ ಟ್ರಂಪ್ ಅವರ ಮಧ್ಯಸ್ಥಿಕೆಗೆ ಪಾಕಿಸ್ತಾನ ಮನ್ನಣೆ ನೀಡಿದೆ.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ತೀವ್ರವಾದ ಸೇನಾ ಸಂಘರ್ಷದ ನಂತರ, ಜೂನ್ 20ರಂದು ಶುಕ್ರವಾರ ಪಾಕಿಸ್ತಾನವು ಈ ಶಿಫಾರಸನ್ನು ಬಿಡುಗಡೆ ಮಾಡಿದೆ.
ಪಾಕಿಸ್ತಾನದ ಹೇಳಿಕೆಯ ಪ್ರಕಾರ, ಬಿಕ್ಕಟ್ಟು ಪಾಕಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿದ ಮತ್ತು ನಾಗರಿಕ ಸಾವುನೋವುಗಳಿಗೆ ಕಾರಣವಾದ “ಅಪ್ರಚೋದಿತ ಮತ್ತು ಕಾನೂನುಬಾಹಿರ” ಭಾರತೀಯ ಆಕ್ರಮಣದೊಂದಿಗೆ ಸಂಘರ್ಷ ಪ್ರಾರಂಭವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು “ಆಪರೇಷನ್ ಬನ್ಯನ್-ಅನ್-ಮರ್ಸೂಸ್” ಅನ್ನು ಪ್ರಾರಂಭಿಸಿತು. ಎರಡೂ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾದಂತೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬ್ಯಾಕ್-ಚಾನೆಲ್ ರಾಜತಾಂತ್ರಿಕತೆ ಮತ್ತು ಕಾರ್ಯತಂತ್ರದ ದೂರದೃಷ್ಟಿಯು ಮೇ 10 ರಂದು ಕದನ ವಿರಾಮ ಒಪ್ಪಂದವನ್ನು ಸುಗಮಗೊಳಿಸಿತು. ಇದು ವಿಸ್ತೃತ ಯುದ್ಧವನ್ನು ತಡೆದಿದೆ ಎಂದು ಹೇಳಿಕೆ ಹೇಳುತ್ತದೆ. ಪಾಕಿಸ್ತಾನ ಸರ್ಕಾರವು ಟ್ರಂಪ್ ಅವರ ಪ್ರಯತ್ನಗಳನ್ನು ಪ್ರಾದೇಶಿಕ ಶಾಂತಿಗೆ ಒಂದು ಮಹತ್ವದ ಕ್ಷಣವೆಂದು ಶ್ಲಾಘಿಸಿದೆ, ಇದು ನಿಜವಾದ ಶಾಂತಿಪ್ರಿಯರಾಗಿ ಅವರ ಪಾತ್ರವನ್ನು ಒತ್ತಿಹೇಳಿದೆ.
ಜೂನ್ 18 ರ ಬುಧವಾರದಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನಡುವಿನ ಅಪರೂಪದ ಸಭೆಯ ನಂತರ ಪಾಕಿಸ್ತಾನವು 2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧಯಕ್ಷ ಟ್ರಂಪ್ ಹೆಸರನ್ನು ನಾಮನಿರ್ದೇಶನ ಮಾಡಿತು. ಟ್ರಂಪ್ ಅವರ ನೊಬೆಲ್ ನಾಮನಿರ್ದೇಶನಕ್ಕಾಗಿ ವಕಾಲತ್ತು ವಹಿಸಿದ ನಂತರ ಅಧ್ಯಕ್ಷ ಟ್ರಂಪ್ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಅವರಿಗೆ ಔತಣ ಕೂಟ ಆಯೋಜಿಸಿದ್ದಾರೆ ಎಂದು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ದೃಢಪಡಿಸಿದರು. ಪರಮಾಣು ಸಂಘರ್ಷವನ್ನು ತಪ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಭಾರತ-ಪಾಕಿಸ್ತಾನ ಸೇನಾ ಸಂಘರ್ಷದ ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಯಾವುದೇ ಪಾತ್ರವನ್ನು ಭಾರತ ನಿರಂತರವಾಗಿ ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ, ಜೂನ್ 17 ರ ಮಂಗಳವಾರ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದೂರವಾಣಿ ಕರೆಯಲ್ಲಿ, ಯಾವುದೇ ಬಾಹ್ಯ ಮಧ್ಯಸ್ಥಿಕೆ ಇಲ್ಲದೆ, ಭಾರತ ಮತ್ತು ಪಾಕಿಸ್ತಾನಿ ಮಿಲಿಟರಿಗಳ ನಡುವಿನ ನೇರ ಸಂವಹನ ಮಾರ್ಗಗಳ ಮೂಲಕ ಕದನ ವಿರಾಮ ಒಪ್ಪಂದಕ್ಕೆ ತಲುಪಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಅವರು ಭಾರತದ ನಿಲುವನ್ನು ಪುನರುಚ್ಚರಿಸಿದರು, ಪಾಕಿಸ್ತಾನದೊಂದಿಗಿನ ಸಂಬಂಧಗಳಲ್ಲಿ ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಈ ಬಿಕ್ಕಟ್ಟು ಭುಗಿಲೆದ್ದಿತು, ಇದಕ್ಕೆ ಭಾರತವು “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಭಾಗವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಸ್ಥಾಪನೆಗಳ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸಿತು.
ನಿಮ್ಮ ಕಾಮೆಂಟ್ ಬರೆಯಿರಿ