ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಸೋಮವಾರ ಉತ್ತರಪ್ರದೇಶದ ಲಖಿಂಪುರ ಖೇರಿಯ ಧೌರಪುರ ಅರಣ್ಯ ಪ್ರದೇಶದ ಜುಗ್ನುಪುರದ ಇಟ್ಟಂಗಿ ತಯಾರಿಕೆ ಘಟಕದ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ನಡೆಸಿದೆ. ನಾಟಕೀಯ ಹಾಗೂ ಅಪರೂಪದ ವಿದ್ಯಮಾನದಲ್ಲಿ ಹೆದರದ ಯುವಕನೊಬ್ಬ ಚಿರತೆಯನ್ನು ಕೆಡವಿ ಬಾಯಿಯನ್ನು ಹಿಡಿದು ನೆಲಕ್ಕೆ ಒತ್ತಿ ಹಿಡಿದು ಅದನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾನೆ. ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಚಿರತೆಯ ಮೇಲೆ ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಈ ಘಟನೆಯ ವೀಡಿಯೊ ದೃಶ್ಯಗಳಲ್ಲಿ ಚಿರತೆ ಯುವಕನ ಹಿಡಿತದಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ತೋರಿಸುತ್ತದೆ. ಗ್ರಾಮಸ್ಥರು ಚಿರತೆಯ ಮೇಲೆ ಇಟ್ಟಿಗೆಗಳನ್ನು ಎಸೆಯುತ್ತಿರುವುದನ್ನು ತೋರಿಸಲಾಗಿದೆ. ವರದಿಗಳ ಪ್ರಕಾರ, ಗಾಯಗೊಂಡ ಚಿರತೆ ಅಂತಿಮವಾಗಿ ತಪ್ಪಿಸಿಕೊಂಡಿದೆ, ಆದರೆ ಯುವಕನಿಗೆ ಈ ಎನ್ಕೌಂಟರ್‌ನಲ್ಲಿ ಗಾಯಗಳಾಗಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇತರರ ಮೇಲೆ ಗಾಯಗೊಂಡ ಚಿರತೆ ದಾಳಿ ಮಾಡಿದೆ. ಇದರಿಂದ ಐವರು ಗಾಯಗೊಂಡಿದ್ದಾರೆ. ಸಾಕಷ್ಟು ಪ್ರಯತ್ನದ ನಂತರ, ಅರಣ್ಯ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಜುಗ್ನುಪುರ ಗ್ರಾಮದಲ್ಲಿರುವ ಮೆದೈಲಾಲ್ ವರ್ಮಾ ಅವರ ಇಟ್ಟಿಗೆ ಗೂಡುಗಳ ಚಿಮಣಿಯಲ್ಲಿ ಅಡಗಿಕೊಂಡಿದ್ದ ಚಿರತೆ, ಗಿರ್ಧಾರಿ ಪೂರ್ವಾದ 35 ವರ್ಷದ ಮಿಹಿಲಾಲ ಎಂಬರ ಮೇಲೆ ದಾಳಿ ಮಾಡಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಸುತ್ತಮುತ್ತಲಿನವರು ಬಂದು ಚಿರತೆಯನ್ನು ಓಡಿಸಲು ಇಟ್ಟಿಗೆ ಮತ್ತು ಕಲ್ಲುಗಳಿಂದ ಅದಕ್ಕೆ ಹೊಡೆಯ ತೊಡಗಿದರು. ಈ ಮಧ್ಯೆ ಮಿಹಿಲಾಲ ಎಂಬವರು ಚಿರತೆಯನ್ನು ಗಟ್ಟಿಯಾಗಿ ನೆಲಕ್ಕೆ ಒತ್ತಿ ಹಿಡಿದು ಅದು ಏಳದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಚಿರತೆ ಜನರು ಎಸೆದ ಇಟ್ಟಂಗಿ ಹಾಗೂ ಕಲ್ಲಿನ ಹೊಡೆತಕ್ಕೆ ಕಂಗಾಲಾಗಿತ್ತು. ಅಂತಿಮವಾಗಿ ಚಿರತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ ಗ್ರಾಮಸ್ಥರು ತಕ್ಷಣ ಪ್ರಾದೇಶಿಕ ಅರಣ್ಯ ಅಧಿಕಾರಿ ನೃಪೇಂದ್ರ ಚತುರ್ವೇದಿಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆ ತಂಡವು ಬಲೆಗಳೊಂದಿಗೆ ಸ್ಥಳಕ್ಕೆ ಬರುತ್ತಿದ್ದಂತೆಯೇ ಗಾಯಗೊಂಡಿದ್ದ ಚಿರತೆ ಮತ್ತೆ ದಾಳಿ ನಡೆಸಿತು, ಅರಣ್ಯ ರಕ್ಷಕ ರಾಜೇಶಕುಮಾರ ದೀಕ್ಷಿತ್, ರೇಂಜರ್ ನೃಪೇಂದ್ರ ಚತುರ್ವೇದಿ, ಪಿಆರ್‌ವಿ ಗಾರ್ಡ್ ರಾಮ ಸಜೀವನ್ ಮತ್ತು ಗ್ರಾಮಸ್ಥ ಇಕ್ಬಾಲ್ ಖಾನ್ ಗಾಯಗೊಂಡರು.

ಗಾಯಾಳುಗಳಿಗೆ ಆರಂಭದಲ್ಲಿ ಸಿಎಚ್‌ಸಿ ಧೌರ್ಹರಾದಲ್ಲಿ ಚಿಕಿತ್ಸೆ ನೀಡಲಾಯಿತು, ನಂತರ ಮಿಹಿಲಾಲ್, ಇಕ್ಬಾಲ್ ಖಾನ್ ಮತ್ತು ಅರಣ್ಯ ರಕ್ಷಕ ರಾಜೇಶ ದೀಕ್ಷಿತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಖಿಂಪುರಕ್ಕೆ ಕಳುಹಿಸಲಾಯಿತು. ರೇಂಜರ್ ಚತುರ್ವೇದಿ ಮತ್ತು ಪಿಆರ್‌ವಿ ಗಾರ್ಡ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಇನ್‌ಸ್ಪೆಕ್ಟರ್ ಸುರೇಶಕುಮಾರ ಮಿಶ್ರಾ ಮತ್ತು ಸಿಒ ಶಂಶೇರ್ ಬಹದ್ದೂರ್ ಸಿಂಗ್ ನೇತೃತ್ವದ ಹೆಚ್ಚುವರಿ ಪೊಲೀಸ್ ಪಡೆಗಳು ಅರಣ್ಯ ಅಧಿಕಾರಿಗಳಿಗೆ ಬೆಂಬಲ ನೀಡಲು ಆಗಮಿಸಿದವು. ಗ್ರಾಮಸ್ಥರು ಪ್ರದೇಶವನ್ನು ಸುತ್ತುವರೆದಿದ್ದರಿಂದ, ಅರಣ್ಯ ಸಿಬ್ಬಂದಿ ಅಂತಿಮವಾಗಿ ಚಿರತೆಯನ್ನು ಶಾಂತಗೊಳಿಸಲು ಕಷ್ಟವಾದರೂ ಅಂತಿಮವಾಗಿ ಅದನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ದಾಳಿಯಲ್ಲಿ ಅರಣ್ಯ ಸಿಬ್ಬಂದಿ ಮತ್ತು ಯುವ ಗ್ರಾಮಸ್ಥರು ಸೇರಿದಂತೆ ನಾಲ್ಕರಿಂದ ಐದು ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ನೃಪೇಂದ್ರ ಚತುರ್ವೇದಿ ದೃಢಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement