ಕೋಟಾ: ರಾಜಸ್ಥಾನದ ಕೋಟಾ ನಗರದಲ್ಲಿರುವ ವರ್ಧಮಾನ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಗುರುವಾರ (ಡಿಸೆಂಬರ್ 11) ಮಧ್ಯಾಹ್ನ ಸುಮಾರು 1:58 ರ ಸುಮಾರಿಗೆ ಹೃದಯ ಕಲಕುವ ಘಟನೆಯೊಂದು ನಡೆದಿದೆ. ಜೈಪುರ ಮೂಲದ ರತ್ನ ವ್ಯಾಪಾರಿ ರಾಜಕುಮಾರ ಸೋನಿ (60) ಅವರು ರಾಂಪುರ ಬಜಾರ್ನಲ್ಲಿರುವ ಈ ಆಭರಣ ಮಳಿಗೆಯಲ್ಲಿ ವಹಿವಾಟು ನಡೆಸುವಾಗ ಆಕಸ್ಮಿಕವಾಗಿ ಹೃದಯಾಘಾತಕ್ಕೊಳಗಾಗಿದ್ದಾರೆ.
ಕೌಂಟರ್ ಬಳಿ ಕುಳಿತು ವ್ಯವಹಾರದ ಬಗ್ಗೆ ಚರ್ಚಿಸುತ್ತಿದ್ದ ರಾಜಕುಮಾರ ಸೋನಿ ಅವರು ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಅನುಭವಿಸಿ, ಮುಂದಕ್ಕೆ ಬಾಗಿ ಅರಿವಿಲ್ಲದೇ ಬಿದ್ದುಬಿಟ್ಟರು. ಅಂಗಡಿಯ ಸಿಬ್ಬಂದಿ ಮತ್ತು ಇತರರು ಆತಂಕಕ್ಕೊಳಗಾದರು. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
2.5 ನಿಮಿಷಗಳಲ್ಲಿ ಪ್ರಾಣ ಉಳಿಸಿದ ಸಿಪಿಆರ್ (CPR)
ಅಂಗಡಿಯ ಮಾಲೀಕ ವಿಮಲಕುಮಾರ ಜೈನ್ ಅವರ ಪುತ್ರ ವರುಣ ಜೈನ್ (37) ತಕ್ಷಣ ಕಾರ್ಯಪ್ರವೃತ್ತರಾದರು. ಸಮುದಾಯ ಕಾರ್ಯಕ್ರಮಗಳಲ್ಲಿ ಸಿಪಿಆರ್ ಕುರಿತು ತಿಳಿದಿದ್ದ ವರುಣ ಅವರು, ತಕ್ಷಣ ರಾಜಕುಮಾರ್ ಅವರನ್ನು ಸರಿಯಾದ ಸ್ಥಾನದಲ್ಲಿ ಅಂಗಾತ ಮಲಗಿಸಿ, ಸುಮಾರು 2.5 ನಿಮಿಷಗಳ ಕಾಲ ನಿರಂತರವಾಗಿ ಎದೆಗೆ ಒತ್ತಡವನ್ನು (Chest Compressions) ನೀಡಿದರು. ಜೊತೆಗೆ ತುರ್ತು ಇಂಜೆಕ್ಷನ್ ಕೂಡ ನೀಡಲಾಯಿತು.
ಚಿಕಿತ್ಸೆ ಫಲಿಸಿತು:
ವರುಣ ಅವರ ಸತತ ಪ್ರಯತ್ನದ ನಂತರ, ರಾಜಕುಮಾರ ಪ್ರಜ್ಞೆ ಮರಳಿ ಪಡೆದು ಉಸಿರಾಡಲು ಪ್ರಾರಂಭಿಸಿದರು. ಸುತ್ತಮುತ್ತಲಿದ್ದವರೆಲ್ಲರೂ ನಿಟ್ಟುಸಿರು ಬಿಟ್ಟರು. ಶುಕ್ರವಾರ (ಡಿಸೆಂಬರ್ 12) ಬಿಡುಗಡೆಯಾದ ಇದರ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒತ್ತಡದ ಪರಿಸ್ಥಿತಿಯಲ್ಲೂ ವರುಣ ಜೈನ್ ತೋರಿದ ಸಮಯಪ್ರಜ್ಞೆಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.
ಜೈಪುರದ ಝೋಟ್ವಾರಾದಲ್ಲಿ ವಾಸಿಸುವ ರಾಜಕುಮಾರ ಸೋನಿ ಅವರು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕೋಟಾಗೆ ಬಂದು ವ್ಯಾಪಾರ ನಡೆಸುತ್ತಿದ್ದರು. ಪ್ರಜ್ಞೆ ಮರಳಿ ಬಂದ ನಂತರ ಮಾತನಾಡಿದ ಅವರು, “ನನಗೆ ಎದೆಯಲ್ಲಿ ನೋವು ಕಾಣಿಸಿತು, ಆ ನಂತರ ಏನೂ ನೆನಪಿಲ್ಲ – ಎಲ್ಲವೂ ಕತ್ತಲೆ ಆಯಿತು,” ಎಂದು ಅವರು ಘಟನೆಯನ್ನು ನೆನಪಿಸಿಕೊಂಡರು. ತಮ್ಮ ನಿಯಮಿತ ಗ್ರಾಹಕರಾದ ರಾಜಕುಮಾರ ಅವರಿಗೆ ಈ ಮೊದಲು ಯಾವುದೇ ಆರೋಗ್ಯ ತೊಂದರೆಗಳು ಇರಲಿಲ್ಲ ಎಂದು ವಿಮಲ್ ಜೈನ್ ದೃಢಪಡಿಸಿದರು. ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು ಅಂಗಡಿಯಲ್ಲೇ ನೀಡಿದ ತ್ವರಿತ ವೈದ್ಯಕೀಯ ನೆರವಿನಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಸಮಯಪ್ರಜ್ಞೆ:
ತಾವು ಕಲಿತಿದ್ದ ಮೂಲಭೂತ ಸಿಪಿಆರ್ ಜ್ಞಾನದಿಂದಾಗಿ ಈ ‘ಸುವರ್ಣ ನಿಮಿಷಗಳಲ್ಲಿ’ ಜೀವ ಉಳಿಸಲು ಸಾಧ್ಯವಾಯಿತು ಎಂದು ವರುಣ ಜೈನ್ ಹೇಳಿದರು. “ನೌಕರರು ಭಯಭೀತರಾದರು, ಆದರೆ ವರುಣ ಅವರು ಜವಾಬ್ದಾರಿ ತೆಗೆದುಕೊಂಡರು,” ಎಂದು ಅಂಗಡಿ ಮಾಲೀಕ ವಿಮಲ್ಜೈನ್ ಅವರು ತಮ್ಮ ಮಗನ ಸಮಯಪ್ರಜ್ಞೆಯನ್ನು ಹೊಗಳಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಭಾರತದಾದ್ಯಂತ ಸಿಪಿಆರ್ ತರಬೇತಿಯ ಅಗತ್ಯವನ್ನು ಇದು ಮತ್ತೊಮ್ಮೆ ನೆನಪಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ