
ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಕೀಯ ಕಳೆಗಟ್ಟಿದೆ. ಈ ನಡುವೆ, “ನೈಜ ಶಿವಸೇನೆ” ಕಳೆದ 30 ವರ್ಷಗಳಿಂದ ಮುಂಬೈನಲ್ಲಿ ತನ್ನ ಹಿಡಿತ ಸಾಧಿಸಿದ್ದು, ಈ ಬಾರಿಯೂ ಜಯಭೇರಿ ಬಾರಿಸಲಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಆನಂದ ದುಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಸ್ತುತತೆಯನ್ನು ತಳ್ಳಿಹಾಕಿದ ದುಬೆ, “ಮುಂಬೈನಲ್ಲಿ ಕಾಂಗ್ರೆಸ್ ಪಕ್ಷವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಸತತವಾಗಿ ಸೋಲುತ್ತಾ ಬಂದಿದೆ. ಮುಂಬೈನಲ್ಲಿ ಕಾಂಗ್ರೆಸ್ ಕೇವಲ ಪ್ರವಾಸಿಗನಂತೆ ಬಂದು, ಹೋರ್ಡಿಂಗ್ ಹಾಕಿ ಪ್ರಚಾರ ಮಾಡಿ, ಸೋತ ನಂತರ ಮನೆಗೆ ಹೋಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.
ಮುಂಬರುವ ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
“ಜನವರಿ 16, 2026 ರಂದು ನಾವು ಗೆಲ್ಲುವುದು ಖಚಿತ. ರಾಜ್ ಠಾಕ್ರೆ ಅವರ ಪಕ್ಷ, ಶರದ್ ಪವಾರ್ ಅವರ ಪಕ್ಷ ಹಾಗೂ ನಮ್ಮ ಮೈತ್ರಿಕೂಟದ ಇತರ ಮಿತ್ರಪಕ್ಷಗಳು ಒಟ್ಟಾಗಿ ಈ ಚುನಾವಣೆಯನ್ನು ಎದುರಿಸಲಿದ್ದೇವೆ” ಎಂದು ಶಿವಸೇನೆ ಯುಬಿಟಿ ನಾಯಕ ದುಬೆ ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಕ್ರಿಯೆ…
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, “ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಮತ್ತು ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ತನ್ನದೇ ಆದ ಮೇಲೆ ಮುಂದುವರಿಯಲು ಬಯಸುತ್ತದೆ ಮತ್ತು ಇದರ ಹಿಂದೆ ಒಂದು ಸೈದ್ಧಾಂತಿಕ ಆಧಾರವಿದೆ. ಇದು ಆತುರದ ನಿರ್ಧಾರವಲ್ಲ; ಇದು ಇಡೀ ಪಕ್ಷದ ಸರ್ವಾನುಮತದ ಅಭಿಪ್ರಾಯವಾಗಿತ್ತು. ಧರ್ಮ, ಜಾತಿ, ಪ್ರದೇಶ ಅಥವಾ ಭಾಷೆಯ ಹೆಸರಿನಲ್ಲಿ ಸಂಘರ್ಷವನ್ನು ಸೃಷ್ಟಿಸುವ ಯಾವುದೇ ಪಕ್ಷದ ವಿರುದ್ಧ ನಾವು ಹೋರಾಡಲಿದ್ದೇವೆ. ಸಂಘರ್ಷವಲ್ಲ, ಅಭಿವೃದ್ಧಿಯ ವಿಷಯದ ಮೇಲೆ ಚುನಾವಣೆಯನ್ನು ಎದುರಿಸಬೇಕೆಂದು ನಾವು ಬಯಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಹೇಳಿದ್ದಾರೆ.
2017ರ ಬಿಎಂಸಿ ಚುನಾವಣೆಯಲ್ಲಿ ಅವಿಭಜಿತ ಶಿವಸೇನೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 2022ರಲ್ಲಿ ಶಿವಸೇನೆ ಇಭ್ಭಾಗವಾದ ನಂತರ ನಡೆಯುತ್ತಿರುವ ಮೊದಲ ಪಾಲಿಕೆ ಚುನಾವಣೆ ಇದಾಗಿರುವುದರಿಂದ ತೀವ್ರ ಕುತೂಹಲ ಕೆರಳಿಸಿದೆ.
ಮಹಾರಾಷ್ಟ್ರದಾದ್ಯಂತ ಇತ್ತೀಚೆಗೆ ನಡೆದ 286 ನಗರ ಪಾಲಿಕೆ ಮತ್ತು ನಗರ ಪಂಚಾಯತ ಚುನಾವಣೆಗಳಲ್ಲಿ ಆಡಳಿತಾರೂಢ ಮೈತ್ರಿಕೂಟವು ನಿರ್ಣಾಯಕ ಜಯ ಸಾಧಿಸಿದೆ. ಮುಂಬೈ (ಬಿಎಂಸಿ), ಪುಣೆ ಸೇರಿದಂತೆ ಹಲವು ಮಹಾನಗರ ಪಾಲಿಕೆಗಳಿಗೆ ಜನವರಿ 15 ರಂದು ಮತದಾನ ನಡೆಯಲಿದ್ದು, ಜನವರಿ 16 ರಂದು ಫಲಿತಾಂಶ ಪ್ರಕಟವಾಗಲಿದೆ.



ನಿಮ್ಮ ಕಾಮೆಂಟ್ ಬರೆಯಿರಿ