ದುಬೈ: ಮುಂಬರುವ ಟಿ20 ವಿಶ್ವಕಪ್ನ ತನ್ನ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಮನವಿಯನ್ನು ಅಂರಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿರಸ್ಕರಿಸಿದೆ ಹಾಗೂ ಐಸಿಸಿ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ಬಾಂಗ್ಲಾದೇಶದ ಪ್ರಸ್ತಾವನೆಯು 14-2 ಮತಗಳ ಅಂತರದಿಂದ ಸೋಲನುಭವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಹೇಳಿದೆ.
ಒಂದು ವೇಳೆ ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲು ಸತತವಾಗಿ ನಿರಾಕರಿಸಿದರೆ, 2026ರ ಟಿ20 ವಿಶ್ವಕಪ್ನಿಂದ ತಂಡವನ್ನು ಕೈಬಿಟ್ಟು ಅದರ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡುವುದಾಗಿ ಐಸಿಸಿ ಕಠಿಣ ಎಚ್ಚರಿಕೆ ನೀಡಿದೆ ಎಂದು ವರದಿ ಹೇಳಿದೆ.
ಮತದಾನದ ನಂತರ, ಈ ಬಗ್ಗೆ ಬಾಂಗ್ಲಾದೇಶ ಸರ್ಕಾರಕ್ಕೆ ಔಪಚಾರಿಕವಾಗಿ ತಿಳಿಸಲು ಐಸಿಸಿಯು ಬಿಸಿಬಿಗೆ ಸೂಚಿಸಿದೆ. ಬಾಂಗ್ಲಾದೇಶ ಪ್ರಯಾಣಿಸಲು ಇಷ್ಟವಿಲ್ಲದಿದ್ದರೆ, ಅದನ್ನು ಪಂದ್ಯಾವಳಿಯಿಂದ ತೆಗೆದುಹಾಕಿ ಸ್ಕಾಟ್ಲೆಂಡ್ನಿಂದ ಬದಲಾಯಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ. ತನ್ನ ಅಂತಿಮ ನಿರ್ಧಾರವನ್ನು ತಿಳಿಸಲು ಬಿಸಿಬಿಗೆ (BCB) ಕೇವಲ ಒಂದು ದಿನದ ಕಾಲಾವಕಾಶ ನೀಡಲಾಗಿದೆ.
ಪ್ರಸ್ತುತ, ಬಾಂಗ್ಲಾದೇಶ ವೆಸ್ಟ್ ಇಂಡೀಸ್, ಇಟಲಿ, ಇಂಗ್ಲೆಂಡ್ ಮತ್ತು ನೇಪಾಳದೊಂದಿಗೆ ಗ್ರೂಪ್ ಸಿ ನಲ್ಲಿದೆ. ಬಾಂಗ್ಲಾದೇಶ ಹಿಂದೆ ಸರಿದರೆ, ಯುರೋಪಿಯನ್ ಕ್ವಾಲಿಫೈಯರ್ನಲ್ಲಿ ಸ್ವಲ್ಪದರಲ್ಲೇ ಅವಕಾಶ ವಂಚಿತವಾಗಿದ್ದ ಸ್ಕಾಟ್ಲೆಂಡ್ ತಂಡವು ಗ್ರೂಪ್ ‘ಸಿ’ ಸೇರಲಿದೆ. ಐಸಿಸಿಯ ತೀರ್ಮಾನದ ಬಗ್ಗೆ ಬಾಂಗ್ಲಾದೇಶ ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ನೀಡುವಂತೆ ಐಸಿಸಿ ಸೂಚಿಸಿದೆ.
ವಿವಾದಕ್ಕೆ ಕಾರಣವೇನು?
ಫೆಬ್ರವರಿ 7 ರಿಂದ ಆರಂಭವಾಗಲಿರುವ ವಿಶ್ವಕಪ್ನಲ್ಲಿ ಬಾಂಗ್ಲಾದೇಶವು ಕೋಲ್ಕತ್ತಾದಲ್ಲಿ ಮೂರು ಮತ್ತು ಮುಂಬೈನಲ್ಲಿ ಒಂದು ಲೀಗ್ ಪಂದ್ಯವನ್ನು ಆಡಬೇಕಿದೆ. ಆದರೆ, ಸುರಕ್ಷತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಸರ್ಕಾರವು ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿದೆ. ಬದಲಾಗಿ, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಅಥವಾ ಗ್ರೂಪ್ ಬದಲಾವಣೆ ಮಾಡಲು ಒತ್ತಾಯಿಸಿತ್ತು.
ಐಪಿಎಲ್ ಮತ್ತು ರಾಜಕೀಯ ನಂಟು?
ವರದಿಗಳ ಪ್ರಕಾರ, ಐಪಿಎಲ್ 2026ರ ಸೀಸನ್ನಿಂದ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಡುವಂತೆ ಬಿಸಿಸಿಐ (BCCI), ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೂಚಿಸಿದ ನಂತರ ಈ ಬಿಕ್ಕಟ್ಟು ಶುರುವಾಗಿದೆ ಎನ್ನಲಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜಕೀಯ ಸಂಬಂಧಗಳು ಹದಗೆಟ್ಟಿರುವುದು ಈ ಕ್ರೀಡಾ ವಿವಾದಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಂಗ್ಲಾದೇಶ ಕ್ರಿಕೆಟ್ನಲ್ಲಿ ಆಂತರಿಕ ಅಶಾಂತಿ:
ಈ ವಿವಾದವು ಕೇವಲ ಅಂತರಾಷ್ಟ್ರೀಯ ಮಟ್ಟಕ್ಕೆ ಸೀಮಿತವಾಗದೆ, ಬಾಂಗ್ಲಾದೇಶದ ದೇಶೀಯ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಹಿರಿಯ ಆಟಗಾರರ ಬಗ್ಗೆ ಬಿಸಿಬಿ ಉನ್ನತ ಅಧಿಕಾರಿಯೊಬ್ಬರು ನೀಡಿದ ಅವಹೇಳನಕಾರಿ ಹೇಳಿಕೆಯಿಂದಾಗಿ ಆಟಗಾರರು ಪ್ರತಿಭಟನೆ ನಡೆಸುತ್ತಿದ್ದು, ಇದು ಪ್ರಸ್ತುತ ನಡೆಯುತ್ತಿರುವ ಬಿಪಿಎಲ್ (BPL) ಟೂರ್ನಿಯ ಮೇಲೂ ಪ್ರಭಾವ ಬೀರಿದೆ.
ಬಾಂಗ್ಲಾದೇಶಕ್ಕೆ ಅಂತಿಮ ತೀರ್ಮಾನಕ್ಕೆ ಒಂದು ದಿನದ ಅವಕಾಶ ನೀಡಲಾಗಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ