ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಾಡಹಾಗಲೇ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬರಿಂದ 31 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ದೋಚಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಭಾನುವಾರ (ಫೆಬ್ರವರಿ 1) ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ 31 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾದ್ದಾರೆ ಎನ್ನಲಾಗಿದೆ.
ಭಾನುವಾರ ಸಂಜೆ 4:20ರ ಸುಮಾರಿಗೆ ಈ ಘಟನೆ ನಡೆದಿದ್ದು, ದರೋಡೆಗೆ ಒಳಗಾದ ವ್ಯಕ್ತಿಯನ್ನು 24 ವರ್ಷದ ಕೈಲಾಸ ಎಂದು ಗುರುತಿಸಲಾಗಿದೆ. ಖಾಸಗಿ ಇ-ಕಾಮರ್ಸ್ ಕಂಪನಿಯ ಹಲವು ಶಾಖೆಗಳಿಂದ ಹಣ ಸಂಗ್ರಹಿಸಿ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ಬನ್ನೇರುಘಟ್ಟದಲ್ಲಿ ಎರಡು ಸ್ಕೂಟರ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ನಂತರ ದರೋಡೆ ಮಾಡಿದ್ದಾರೆ.
ಕೈಲಾಸ್ ಅವರು ಉಡಾನ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಕೈಲಾಸ್ ಉಡಾನ್ನ ಮೂರು ಶಾಖೆಗಳಿಂದ ಒಟ್ಟು 31,38,625 ರುಪಾಯಿ ಸಂಗ್ರಹಿಸಿದ್ದರು. ಅವರು ಸಂಪೂರ್ಣ ಹಣವನ್ನು ತಮ್ಮ ಸ್ಕೂಟರ್ನಲ್ಲಿ ಇಟ್ಟುಕೊಂಡಿದ್ದರು.
ಕೈಲಾಸ್ ಅವರನ್ನು ಬೆನ್ನಟ್ಟಿದ ದರೋಡೆಕೋರರು ಮಚ್ಚು ಹಿಡಿದು ಬೆದರಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಆತನ ಸ್ಕೂಟರ್ ಸಮೇತ ಪರಾರಿಯಾಗಿದ್ದಾರೆ.
ವರದಿಗಳ ಪ್ರಕಾರ, ಕೈಲಾಸ್ ಅವರ ಸ್ಕೂಟರ್ ಅನ್ನು ಸುಮಾರು ಒಂದು ಕಿಲೋ ಮೀಟರ್ ವರೆಗೆ ಚಲಾಯಿಸಿಕೊಂಡುಹೋದ ನಂತರ ಆರೋಪಿಗಳು ಹಣ ಅದರಲ್ಲಿದ್ದ ಹಣ ತೆಗೆದುಕೊಂಡು ಅದನ್ನು ಬಿಟ್ಟು ಹೋಗಿದ್ದಾರೆ. ಜತೆಗೆ ಸ್ಕೂಟರ್ನಲ್ಲಿದ್ದ ಎಲ್ಲ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಬನ್ನೇರುಘಟ್ಟ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದರು. ದರೋಡೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ