ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಸಮೀಪದ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಕೊಲೆ ಮಾಡಿರುವ ಘಟನೆ ನಡೆದಿದೆ.
ವಸಂತ ನಾಯ್ಕ( ೪೩) ಎಂಬವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಆತನ ತಮ್ಮ ಮಹೇಶ ನಾಯ್ಕ(೩೭) ಹಾಗೂ ಜಗಳ ಬಿಡಿಸಲು ಬಂದ ಕುಮಾರ ನಾಯ್ಕ(೩೫) ಅವರಿಗೂ ಸಹ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
ಈ ಕುರಿತು ಮೃತ ವಸಂತ ನಾಯ್ಕಪತ್ನಿ ಸೋಮವಾರ ರಾತ್ರಿ ದೂರು ನೀಡಿದ್ದು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೊದಲ ಆರೋಪಿ ಸುಚಿತ್ರಾ ನಾಯ್ಕ ಸೇರಿದಂತೆ ಜ್ಯೋತಿಷಿ ಕಮಲಾಕರ, ಸುಚಿತ್ರಾಳ ತಂದೆ ಏಕನಾಥ ನಾಯ್ಕ ಹೊಸೂರು ಹಾಗೂ ಶಿವಮೊಗ್ಗ ಮೂಲದ ನಾಲ್ವರು ಅಪರಿಚಿತರನ್ನು ಬಂಧಿಸಿದ್ದಾರೆ.
ಅವರಗುಪ್ಪದ ಮಹೇಶ ನಾಯ್ಕ ಹಾಗೂ ಪಟ್ಟಣದ ಹೊಸೂರಿನ ಸುಚಿತ್ರಾ ನಾಯ್ಕ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಮಹೇಶ ನಾಯ್ಕ ಅವರನ್ನು ತೊರೆದು ಸುಚಿತ್ರಾ ಕೆಲವು
ದಿನಗಳ ಹಿಂದೆ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಶಿವಮೊಗ್ಗದ ಕಮಲಾಕರ ಅವರ ಬಳಿ ಕೆಲಸ ಮಾಡುತ್ಮತಿದ್ನೆದಳು, ಹಾಗೂ ಅಲ್ಲಿಯೇ ವಾಸಮಾಡುತ್ತಿದ್ದಳು ಎಂದು ಹೇಳಲಾಗಿದೆ. ಮಹೇಶ ನಾಯ್ಕ ಬಳ್ಳಟ್ಟೆ ಸಮೀಪ ಮನೆ ಕಟ್ಟಿಕೊಂಡಿದ್ದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಣ್ಣನ ಜೊತೆ ಅವರಗುಪ್ಪದಲ್ಲಿ ವಾಸವಾಗಿದ್ದ. ಶಿವಮೊಗ್ಗದಲ್ಲಿ ಸುಚಿತ್ರಾ ಜೊತೆಗಿದ್ದ ಮಗಳು ಸುಮಶ್ರೀ ತಾಯಿ ಸುಚಿತ್ರಾ ಹಾಗೂ ಕಮಲಾಕರ ಕಿರುಕುಳಕ್ಕೆ ನೊಂದು ಅಮರಗುಪ್ಪಕ್ಕೆ ಬಂದಿದ್ದಳು. ಮಾಹಿತಿ ತಿಳಿದ ಸುಚಿತ್ರಾ, ಕಮಲಾಕರ ಹಾಗೂ ಏಕನಾಥ ನಾಯ್ಕ ಅವರುಗಳು ನಾಲ್ವರೊಂದಿಗೆ ಮಂಗಳವಾರ ರಾತ್ರಿ ೯:೩೦ರ ವೇಳೆಗೆ
ಮಹೇಶ ನಾಯ್ಕ ಅವರ ಮನೆಗೆ ನುಗ್ಗಿ ಸುಮಶ್ರೀಯನ್ನು ಕರೆದೊಯ್ಯಲು ಯತ್ನಿಸಿದ್ದಾರೆ.
ಆಗ ವಾಗ್ವಾದ, ತಳ್ಳಾಟ ನಡೆದಿದ್ದು, ಗಲಾಟೆ ಕೇಳಿ ಬಂದ ಪಕ್ಕದ ಮನೆಯ ಕುಮಾರ ನಾಯ್ಕ ಬಂದು ಪ್ರಶ್ನೆ ಮಾಡಿದಾಗ ಆತನಿಗೆ ಸುಚಿತ್ರಾ ಜೊತೆ ಬಂದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಅದನ್ನು ತಡೆಯಲು ಬಂದ ಮಹೇಶ ನಾಯ್ಕ ಅವರಿಗೂ ಚಾಕುವಿನಿಂದ ಇರಿಯಲಾಗಿದೆ. ಇದಾದ ನಂತರ ಆರೋಪಿಗಳು ಬಂದಿದ್ದ ಇನ್ನೊವಾ ಕಾರಿನ ಬಳಿ ವಸಂತ ನಾಯ್ಕ ಬಂದಾಗ ಅವರ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ತಕ್ಷಣ ಮೂವರನ್ನು ಖಾಸಗಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವಸಂತ ನಾಯ್ಕ
ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಪತ್ರಕರ್ತರೊಂದಿಗೆ ಮಾತನಾಡಿ ಈ ಪ್ರಕರಣಕ್ಕೆ ಸಂಬಂಧಿಸಿ ೭ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದು ಪೂರ್ವಯೋಜಿತ ಕೃತ್ಯ ಆಗಿರುವ ಸಾಧ್ಯತೆಯೂ ಸೇರಿದಂತೆ ಎಲ್ಲ ಹಂತದಲ್ಲೂ ತನಿಖೆ ನಡೆಯುತ್ತಿದೆ. ಅಪರಿಚಿತ ವ್ಯಕ್ತಿಗಳು ಶಿವಮೊಗ್ಗದವರು ಎನ್ನುವ ಮಾಹಿತಿ ದೊರಕಿದ್ದು ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಐ.ಜಿ.ಪಿ.ಅಮಿತಸಿಂಗ್, ಅಡಿಷನಲ್ ಎಸ್.ಪಿ.ಜಗದೀಶ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ