ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿ: ಅಂಪೈರ್ ಸಾವು, ಹಲವು ಆಟಗಾರರಿಗೆ ಗಾಯ

ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ನಡೆಸಿದ ಪರಿಣಾಮ 65 ವರ್ಷದ ಅಂಪೈರ್ ಮೃತಪಟ್ಟಿದ್ದು, ಹಲವು ಆಟಗಾರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಈ ಪಂದ್ಯವು ಶುಕ್ಲಾಗಂಜ್ ಪ್ರದೇಶದ ಸಪ್ರು ಮೈದಾನದಲ್ಲಿ ನಡೆಯುತ್ತಿತ್ತು. ಕಾನ್ಪುರ ಮೂಲದ ಮಾಣಿಕ್ ಗುಪ್ತಾ ಎಂಬುವವರು ಪಂದ್ಯದ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಯ ವಿವರ:
ಪಂದ್ಯ ನಡೆಯುತ್ತಿದ್ದಾಗ ದಿಢೀರನೆ ಜೇನುನೊಣಗಳ ಹಿಂಡು ಮೈದಾನದಲ್ಲಿದ್ದ ಆಟಗಾರರು ಮತ್ತು ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಇದರಿಂದ ಗಾಬರಿಗೊಂಡ ಆಟಗಾರರು ಮತ್ತು ಪ್ರೇಕ್ಷಕರು ಜೇನು ನೊಣಗಳ ದಾಳಿಯಿಂದ ಪಾರಾಗಲು ದಿಕ್ಕಾಪಾಲಾಗಿ ಓಡಿದ್ದಾರೆ. ಹೆಚ್ಚಾಗಿ ಬಿಳಿ ಟಿ-ಶರ್ಟ್ ಧರಿಸಿದ್ದವರ ಮೇಲೆಯೇ ಜೇನುನೊಣಗಳು ದಾಳಿ ನಡೆಸಿದವು ಎಂದು ಹೇಳಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೇನುನೊಣಗಳ ತೀವ್ರವಾದ ದಾಳಿಯಿಂದಾಗಿ ಮಾಣಿಕ್ ಗುಪ್ತಾ ಅವರು ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದರು.
ಕೂಡಲೇ ಅವರನ್ನು ಶುಕ್ಲಾಗಂಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಕಾನ್ಪುರದ ಲಾಲಾ ಲಜಪತ ರಾಯ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಮಾಣಿಕ್ ಗುಪ್ತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೂ ಅವರ ಮುಖ ಮತ್ತು ದೇಹದ ಮೇಲೆ ಜೇನುನೊಣಗಳು ಅಂಟಿಕೊಂಡಿದ್ದವು ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್.ಎನ್. ಸಿಂಗ್ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಮತ್ತೊಬ್ಬ ಅಂಪೈರ್ ಸೇರಿದಂತೆ ಸುಮಾರು 15 ರಿಂದ 20 ಆಟಗಾರರು ಜೇನುನೊಣದ ಕಡಿತದಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತಾಪ: ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬದೊಂದಿಗೆ ತಾವು ಇರುವುದಾಗಿ ತಿಳಿಸಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement