ರಾಯ್ಪುರ: ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಲೈಟರ್ ಮೂಲಕ ಮೋಟಾರ್ ಸೈಕಲ್ಗೆ ಬೆಂಕಿ ಹಚ್ಚಲು ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಬಂಕ್ ಉದ್ಯೋಗಿಯೊಬ್ಬರು ತಕ್ಷಣವೇ ಬೆಂಕಿಯನ್ನು ನಂದಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ರಾಯ್ಪುರದ ಉರ್ಲಾ ಪ್ರದೇಶದ ಕರ್ಮ ಚೌಕ್ ಬಳಿಯ ‘ಸಂಗೀತ ಫ್ಯುಯೆಲ್ಸ್’ ಪೆಟ್ರೋಲ್ ಬಂಕ್ನಲ್ಲಿ ಫೆಬ್ರವರಿ 18 ರ ರಾತ್ರಿ ಸುಮಾರು 7:40ಕ್ಕೆ ಈ ಘಟನೆ ನಡೆದಿದೆ. ಧರ್ಮೇಂದ್ರ ಸಿಂಗ್ ಮತ್ತು ಇಮ್ರಾನ್ ಖುರೇಷಿ ಎಂಬ ಇಬ್ಬರು ಯುವಕರು ತಮ್ಮ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. ಈ ವೇಳೆ ಬೈಕ್ನ ಹಿಂಬದಿ ಕುಳಿತಿದ್ದ ಯುವಕ ಇಳಿದು ಲೈಟರ್ನಿಂದ ಸಿಗರೇಟ್ ಹಚ್ಚಲು ಯತ್ನಿಸಿದ್ದಾನೆ.
ಪೆಟ್ರೋಲ್ ಬಂಕ್ ಉದ್ಯೋಗಿ ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಹಚ್ಚದಂತೆ ಆತನಿಗೆ ಸೂಚಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕ ತನ್ನ ಕೈಯಲ್ಲಿದ್ದ ಲೈಟರ್ ಅನ್ನು ಬೈಕಿನ ಪೆಟ್ರೋಲ್ ಟ್ಯಾಂಕಿಗೆ ಎಸೆದಿದ್ದಾನೆ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಮತ್ತು ಪೆಟ್ರೋಲ್ ನಳಿಕೆಗೆ (Nozzle) ವ್ಯಾಪಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆರೋಪಿಗಳು ಹಾಗೂ ಬಂಕ್ ಸಿಬ್ಬಂದಿ ಗಾಬರಿಯಿಂದ ದೂರ ಓಡಿದ್ದಾರೆ.
ಸಮಯಪ್ರಜ್ಞೆ ಮೆರೆದ ಸಿಬ್ಬಂದಿ:
ಬಳಿಕ ಎಚ್ಚೆತ್ತುಕೊಂಡ ಬಂಕ್ ಕೆಲಸಗಾರನೊಬ್ಬ, ಕೂಡಲೇ ಇಂಧನ ಪೂರೈಕೆಯ ಮೆನ್ ಸ್ವಿಚ್ ಆಫ್ ಮಾಡಿ, ಪೆಟ್ರೋಲ್ ಪೈಪ್ ಅನ್ನು ದೂರ ಎಳೆದಿದ್ದಾನೆ. ತಕ್ಷಣವೇ ಅಗ್ನಿಶಾಮಕ ಉಪಕರಣವನ್ನು (Fire Extinguisher) ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ಪ್ರಕ್ರಿಯೆಯಲ್ಲಿ ಪೆಟ್ರೋಲ್ ಇಬ್ಬರು ಆರೋಪಿಗಳ ಮೇಲೂ ಸಿಡಿದಿದೆ ಎಂದು ವರದಿಯಾಗಿದೆ.
ಬೆಂಕಿ ನಂದಿಸಿದ ನಂತರ ಓಡಿಹೋಗಲು ಯತ್ನಿಸಿದ ಇವರನ್ನು ಬಂಕ್ ಸಿಬ್ಬಂದಿ ಹಿಡಿದು ಪೊಲೀಸರಿ ಒಪ್ಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರನ್ನು ಬಿರಗಾಂವ್ ನಿವಾಸಿ ಧರ್ಮೇಂದ್ರ ಸಿಂಗ್ ಮತ್ತು ಇಮ್ರಾನ್ ಖುರೇಷಿಯನ್ನು ಗುರುತಿಸಲಾಗಿದೆ.
“ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡುವುದು ಮತ್ತು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲು ಯತ್ನಿಸಿದ ಪ್ರಕರಣಗಳನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ. ಬೈಕ್ ಮತ್ತು ಲೈಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ