ವಿಡಿಯೋ | ಬಂಗಾಳ ಸಿಎಂ ಪದಗ್ರಹಣ ಸಮಾರಂಭಲ್ಲಿ 98 ವರ್ಷದ ಮಖನ್‌ಲಾಲ ಸರ್ಕಾರ ಪಾದಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ : ಇವರು ಯಾರು ?

ಕೋಲ್ಕತ್ತಾ: ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಸುವೇಂದು ಅಧಿಕಾರಿ ಅವರ ನೇತೃತ್ವದ ರಾಜ್ಯದ ಮೊತ್ತಮೊದಲ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಒಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಜನಸಂಘದ ಕಾಲದ ಹಿರಿಯ ನಾಯಕ, 98 ವರ್ಷದ ಮಾಖನ್‌ಲಾಲ್ ಸರ್ಕಾರ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಐತಿಹಾಸಿಕ ಸಂದರ್ಭದ ಕುರಿತು ‘X’ (ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಈ ದಿನ, ಡಾ. ಶ್ಯಾಮಪ್ರಸಾದ ಮುಖರ್ಜಿ, ದೇಶಕ್ಕೆ ಹಾಗೂ ವಿಶೇಷವಾಗಿ ಬಂಗಾಳಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ದೂರದೃಷ್ಟಿಯನ್ನು ಈಡೇರಿಸಲು ನಾವು ಯಾವುದೇ ಶ್ರಮವನ್ನೂ ಬಾಕಿ ಉಳಿಸುವುದಿಲ್ಲ,” ಎಂದು ಬರೆದಿದ್ದಾರೆ.

ರಾಷ್ಟ್ರಭಕ್ತಿಯ ಸಾಕಾರ ರೂಪ
ಪ್ರಮಾಣ ವಚನ ಸಮಾರಂಭದಲ್ಲಿ ಮಾಖನ್‌ಲಾಲ್ ಸರ್ಕಾರ್ ಅವರನ್ನು ಭೇಟಿಯಾದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ, ಸರ್ಕಾರ್ ಅವರ ಬದುಕನ್ನು ಕೊಂಡಾಡಿದ್ದಾರೆ.
ಸರ್ಕಾರ್ ಅವರು ಡಾ. ಮುಖರ್ಜಿಯವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವರ ಜೊತೆ ಹೋಗುತ್ತಿದ್ದಾಗ ಬಂಧನಕ್ಕೊಳಗಾಗಿದ್ದರು. ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿಯ ನೆಲೆಯನ್ನು ವಿಸ್ತರಿಸಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಜನರ ನಡುವೆ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಿದ ಇಂತಹ ಪ್ರೇರಣಾದಾಯಕ ವ್ಯಕ್ತಿಗಳು ನಮ್ಮ ಪಕ್ಷದಲ್ಲಿ ಇರುವುದು ನಮಗೆ ಹೆಮ್ಮೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಸರ್ಕಾರ್ ಅವರ ಅಚಲ ಬದ್ಧತೆಯನ್ನು ನೆನಪಿಸಿಕೊಳ್ಳುತ್ತಾ, “ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶಭಕ್ತಿ ಗೀತೆ ಹಾಡಿದ್ದಕ್ಕಾಗಿ ದೆಹಲಿ ಪೊಲೀಸರು ಸರ್ಕಾರ್ ಅವರನ್ನು ಬಂಧಿಸಿದ್ದರು. ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸುವಂತೆ ಸೂಚಿಸಿದಾಗ ಅವರು ಸಾರಾಸಗಟಾಗಿ ನಿರಾಕರಿಸಿದ್ದರು,” ಎಂಬ ಸಂಗತಿಯನ್ನು ಹಂಚಿಕೊಂಡರು.

ಮಖನ್‌ಲಾಲ್ ಸರ್ಕಾರ್
ಸಿಲಿಗುರಿ ನಿವಾಸಿಯಾದ ಮಖನ್‌ಲಾಲ್ ಸರ್ಕಾರ್ ಅವರ ರಾಜಕೀಯ ಹಾದಿ ಸ್ಫೂರ್ತಿದಾಯಕವಾದುದು. ಕಾಶ್ಮೀರ ಹೋರಾಟದಲ್ಲಿ 1952ರಲ್ಲಿ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಚಳವಳಿಯ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಯವರ ಐತಿಹಾಸಿಕ ಪ್ರವಾಸದಲ್ಲಿ ಇವರು ಜೊತೆಗಿದ್ದರು ಮತ್ತು ಅಲ್ಲಿ ಬಂಧನಕ್ಕೊಳಗಾಗಿದ್ದರು.
1980 ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ, ಇವರು ಪಶ್ಚಿಮ ದಿನಾಜ್‌ಪುರ, ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳ ಸಾಂಘಿಕ ಸಂಯೋಜಕರಾಗಿ ಜವಾಬ್ದಾರಿ ವಹಿಸಿಕೊಂಡರು. ಕೇವಲ ಒಂದು ವರ್ಷದಲ್ಲಿ ಸುಮಾರು 10,000 ಸದಸ್ಯರನ್ನು ಪಕ್ಷಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಇವರು ಸಿಲಿಗುರಿ ಸಾಂಘಿಕ ಜಿಲ್ಲೆಯ ಮೊದಲ ಬಿಜೆಪಿ ಅಧ್ಯಕ್ಷರಾಗಿದ್ದರು. 1981 ರಿಂದ ಸತತ ಏಳು ವರ್ಷಗಳ ಕಾಲ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಾಮಾನ್ಯವಾಗಿ ಬಿಜೆಪಿ ನಾಯಕರು ಒಂದೇ ಸಾಂಘಿಕ ಹುದ್ದೆಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಇರದ ಆ ದಿನಗಳಲ್ಲಿ, ಇದು ಒಂದು ಅಸಾಧಾರಣ ಸಾಧನೆಯಾಗಿತ್ತು.
ಬಿಜೆಪಿಯ ಈ ಹಿರಿಯ ಚೇತನಕ್ಕೆ ಪ್ರಧಾನಿಯವರು ನೀಡಿದ ಈ ಗೌರವವು, ಪಶ್ಚಿಮ ಬಂಗಾಳದಲ್ಲಿ ಪಕ್ಷದ ದಶಕಗಳ ಹೋರಾಟ ಮತ್ತು ತಳಮಟ್ಟದ ಕಾರ್ಯಕರ್ತರ ತ್ಯಾಗಕ್ಕೆ ಸಂದ ದೊಡ್ಡ ಮಾನ್ಯತೆಯೆಂದು ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement