
ನವದೆಹಲಿ/ವಾಷಿಂಗ್ಟನ್ : ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಪಡೆಗಳು ಒಮಾನ್ ಕೊಲ್ಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ತೈಲ ಹಡಗಿನ ಮೇಲೆ ದಾಳಿ ನಡೆಸಿವೆ. ಗಿನಿ-ಬಿಸೌ ಧ್ವಜ ಹೊತ್ತ ‘ಎಂಟಿ ಜಲವೀರ್’ (M/T Jalveer) ಹಡಗಿನ ಮೇಲೆ ಅಮೆರಿಕದ ಯುದ್ಧವಿಮಾನವು ಎರಡು ‘ಹೆಲ್ಫೈರ್’ (Hellfire) ಕ್ಷಿಪಣಿಗಳನ್ನು ಉಡಾಯಿಸಿದೆ. ನೌಕೆಯಲ್ಲಿದ್ದ 20 ಭಾರತೀಯ ನಾವಿಕರನ್ನು ರಕ್ಷಿಸಲಾಗಿದೆ.
ಅಮೆರಿಕದ ಫ್ಲೋರಿಡಾದಲ್ಲಿರುವ ಅಮೆರಿಕ ಸೆಂಟ್ರಲ್ ಕಮಾಂಡ್ (CENTCOM) ಬುಧವಾರ ಪ್ರಕಟಣೆ ಹೊರಡಿಸಿದ್ದು, ಇರಾನ್ನಿಂದ ತೈಲವನ್ನು ಸಾಗಿಸಲು ಯತ್ನಿಸುತ್ತಿದ್ದ ‘ಎಂಟಿ ಜಲವೀರ್’ ನೌಕೆಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ದೃಢಪಡಿಸಿದೆ.
“ಅಮೆರಿಕ ಪಡೆಗಳು ನೀಡಿದ ಸರಣಿ ಎಚ್ಚರಿಕೆಗಳು ಮತ್ತು ಸೂಚನೆಗಳನ್ನು ಪಾಲಿಸಲು ಹಡಗಿನ ಸಿಬ್ಬಂದಿ ಪಾಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ಯುದ್ಧವಿಮಾನದಿಂದ ಹಡಗಿನ ಇಂಜಿನ್ ಕೋಣೆಯನ್ನು (Engine Room) ಗುರಿಯಾಗಿಸಿ ಎರಡು ಹೆಲ್ಫೈರ್ ಕ್ಷಿಪಣಿಗಳನ್ನು ಉಡಾಯಿಸಲಾಯಿತು ಎಂದು ಸೆಂಟಕಾಮ್ ತಿಳಿಸಿದೆ.
ಹೆಲ್ಫೈರ್ ಕ್ಷಿಪಣಿಯು ಅಮೆರಿಕದ ಅತ್ಯಂತ ನಿಖರವಾದ, ಗಾಳಿಯಿಂದ ಭೂಮಿಗೆ ಚಿಮ್ಮುವ ಗೈಡೆಡ್ ಕ್ಷಿಪಣಿಯಾಗಿದ್ದು, ಶತ್ರುಗಳ ಶಸ್ತ್ರಸಜ್ಜಿತ ವಾಹನಗಳು ಹಾಗೂ ಉನ್ನತ ಮಟ್ಟದ ಗುರಿಗಳನ್ನು ಧ್ವಂಸಗೊಳಿಸಲು ಬಳಸಲಾಗುತ್ತದೆ. ಇದನ್ನು ಅಪಾಚೆ ಹೆಲಿಕಾಪ್ಟರ್ಗಳು, ಪ್ರಿಡೇಟರ್ ಡ್ರೋನ್ಗಳು, ಯುದ್ಧನೌಕೆಗಳು ಹಾಗೂ ನೆಲದ ಮೇಲಿನ ವಾಹನಗಳಿಂದ ಉಡಾಯಿಸಬಹುದಾಗಿದೆ. ಹಡಗನ್ನು ಮುಳುಗಿಸುವ ಬದಲು, ಅದನ್ನು ನಿಷ್ಕ್ರಿಯಗೊಳಿಸಲು ಇಂಜಿನ್ ಕೋಣೆಗೆ ಮಾತ್ರ ನಿಖರ ದಾಳಿ ಮಾಡಲಾಗಿದೆ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ.
ನಾಲ್ಕು ದಿನಗಳಲ್ಲಿ ಮೂರು ಹಡಗುಗಳ ಮೇಲೆ ದಾಳಿ
ಒಮಾನ್ ಕೊಲ್ಲಿಯ ಮೂಲಕ ಇರಾನ್ನ ತೈಲ ಹಡಗುಗಳು ಹೊರಹೋಗದಂತೆ ತಡೆಯಲು ಅಮೆರಿಕ ಕಠಿಣ ಕಡಲ ದಿಗ್ಬಂಧನವನ್ನು ಹೇರಿದೆ. ಇದರ ಭಾಗವಾಗಿ ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ನಾವಿಕರಿದ್ದ ಮೂರು ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದೆ.
ಸೋಮವಾರ ‘ಎಂಟಿ ಮಾರಿವ್ಯಾಕ್ಸ್’ (M/T Marivax) ಹಡಗಿನ ಮೇಲೆ ದಾಳಿ ನಡೆಸಿತ್ತು. ಮಂಗಳವಾರ ‘ಎಂಟಿ ಸೆಟ್ಟೆಬೆಲ್ಲೊ’ (M/T Settebello) ಹಡಗಿನ ಮೇಲೆ ದಾಳಿ ನಡೆಸಿತ್ತು. ಈ ಹಡಗಿನಲ್ಲಿದ್ದ 24 ಭಾರತೀಯ ನಾವಿಕರ ಪೈಕಿ ಮೂವರು ನಾವಿಕರು ಸಾವಿಗೀಡಾಗಿದ್ದಾರೆ.
‘ಎಂಟಿ ಜಲವೀರ್’ (M/T Jalveer) ಹಡಗಿನ ಮೇಲೆ ಹೆಲ್ಫೈರ್ ಕ್ಷಿಪಣಿ ದಾಳಿ ನಡೆಸಿದೆ.
ಪ್ರಸ್ತುತ ‘ಎಂಟಿ ಜಲವೀರ್’ ಹಡಗಿನಲ್ಲಿದ್ದ ಎಲ್ಲಾ 20 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಒಮಾನ್ನ ‘ಶಿನಾಸ್’ ಬಂದರಿಗೆ ತಲುಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ವಿಶೇಷವೆಂದರೆ, ಮೊದಲು ದಾಳಿಗೊಳಗಾದ ‘ಮಾರಿವ್ಯಾಕ್ಸ್’ ನೌಕೆಯನ್ನು ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಕಪ್ಪುಪಟ್ಟಿಗೆ ಸೇರಿಸಿತ್ತು, ಆದರೆ ‘ಸೆಟ್ಟೆಬೆಲ್ಲೊ’ ಹಡಗು ಅಂತಹ ಯಾವುದೇ ಕಪ್ಪುಪಟ್ಟಿಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಭಾರತದ ತೀವ್ರ ಆಕ್ರೋಶ: ಅಮೆರಿಕ ರಾಯಭಾರಿಗೆ ಸಮನ್ಸ್
ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲಿನ ಸರಣಿ ದಾಳಿಯನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ‘ಸೆಟ್ಟೆಬೆಲ್ಲೊ’ ಹಡಗಿನ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಬುಧವಾರ ನವದೆಹಲಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿ (Charge d’affaires) ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ ಈ ದಾಳಿಯ ಕುರಿತು ತೀವ್ರ ಆಕ್ಷೇಪಣೆಯ ‘ಡೆಮಾರ್ಷೆ’ (Demarche) ಪತ್ರವನ್ನು ಹಸ್ತಾಂತರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಭಾರತವು ಅಮೆರಿಕದ ವಿರುದ್ಧ ಕೈಗೊಂಡ ಅತ್ಯಂತ ಕಠಿಣ ರಾಜತಾಂತ್ರಿಕ ಹೆಜ್ಜೆ ಇದಾಗಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ನಿರಂತರ ದಾಳಿಗಳು ಅತ್ಯಂತ ಕಳವಳಕಾರಿಯಾಗಿವೆ. ವಾಣಿಜ್ಯ ನೌಕೆಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು. ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಮುಕ್ತ ಮತ್ತು ಅಡೆತಡೆಗಳಿಲ್ಲದ ನೌಕಾಯಾನ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಜಲಮಾರ್ಗಗಳಲ್ಲಿ ತಕ್ಷಣವೇ ಪುನಃಸ್ಥಾಪಿಸಬೇಕು” ಎಂದು ಆಗ್ರಹಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ