
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ವಿರುದ್ಧ ಅತ್ಯಂತ ಕಠಿಣ ನಿಲುವು ತಳೆದಿರುವ ಸಿಖ್ ಧರ್ಮದ ಅತ್ಯುನ್ನತ ಧಾರ್ಮಿಕ ಪೀಠವಾದ ‘ಅಕಾಲ ತಖ್ತ್’, ಭಗವಂತ ಮಾನ್ ಅವರನ್ನು ‘ಗುರು ವಿರೋಧಿ’ ಎಂದು ಘೋಷಿಸಿದೆ. ಅಲ್ಲದೆ, ಸಿಖ್ ಸಮುದಾಯವು (ಪಂಥ) ಅವರ ಜೊತೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ಕರೆ ನೀಡಿದೆ.
ಸಿಖ್ ಭಕ್ತರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ಭಗವಂತ ಮಾನ್ ಜನವರಿ 15 ರಂದು ಅಕಾಲ ತಖ್ತ್ ಮುಂದೆ ಹಾಜರಾಗಿದ್ದರು. ಇದರೊಂದಿಗೆ, ಸಿಖ್ ಗುರುಗಳ ಚಿತ್ರಗಳ ಮೇಲೆ ಮದ್ಯವನ್ನು ಚಿಮುಕಿಸುತ್ತಿರುವ ಭಗವಂತ್ ಮಾನ್ ಅವರನ್ನು ಹೋಲುವ ವ್ಯಕ್ತಿಯ ವಿಡಿಯೋವೊಂದರ ಬಗ್ಗೆಯೂ ಅವರನ್ನು ಅಕಾಲಿ ತಖ್ತ್ ಪ್ರಶ್ನಿಸಿತ್ತು.
ಆಗ ಈ ಆರೋಪವನ್ನು ನಿರಾಕರಿಸಿದ್ದ ಮಾನ್, ಆ ವಿಡಿಯೋ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋ ಎಂದು ವಾದಿಸಿದ್ದರು. ಆದರೆ, ಈ ವಿಡಿಯೋದ ಫೋರೆನ್ಸಿಕ್ ತನಿಖೆಯ ವರದಿ ಸೋಮವಾರ ಹೊರಬಿದ್ದಿದ್ದು, ವಿಡಿಯೋ ಅಸಲಿ ಎಂದು ಸಾಬೀತಾಗಿದೆ. ತಕ್ಷಣವೇ ಜಾಗರೂಕರಾದ ಆಮ್ ಆದ್ಮಿ ಪಾರ್ಟಿ (AAP), “ಫೋರೆನ್ಸಿಕ್ ವರದಿಯಲ್ಲಿ ವಿಡಿಯೋ ಅಸಲಿ ಎಂದು ಬಂದಿದೆಯಾದರೂ, ಅದರಲ್ಲಿರುವ ವ್ಯಕ್ತಿ ಮುಖ್ಯಮಂತ್ರಿ ಭಗವಂತ ಮಾನ್ ಅವರೇ ಎಂದು ಖಚಿತವಾಗಿ ಹೇಳಿಲ್ಲ” ಎಂದು ಪ್ರತಿವಾದ ಮಂಡಿಸಿದೆ.

ಅಕಾಲ ತಖ್ತ್ ಜತ್ಹೇದಾರ್ ನೀಡಿದ ತೀರ್ಪು:
ಐದು ಮಂದಿ ಸಿಂಗ್ ಸಾಹಿಬ್ಗಳ (ಮುಖ್ಯ ಅರ್ಚಕರು) ಸಭೆಯ ನಂತರ ಅಕಾಲ ತಖ್ತ್ನ ಜತ್ಹೇದಾರ್ ಕುಲದೀಪ್ ಸಿಂಗ್ ಗರ್ಗಜ್ ಅವರು ಮಾಧ್ಯಮಗಳಿಗೆ ತೀರ್ಪನ್ನು ಪ್ರಕಟಿಸಿದರು.
“ನಾವು ಮುಖ್ಯಮಂತ್ರಿಯವರನ್ನು ವಿಡಿಯೋ ಕುರಿತು ಪ್ರಶ್ನಿಸಿದಾಗ ಅವರು ಅದು ಎಐ (AI) ತಂತ್ರಜ್ಞಾನದಿಂದ ಸೃಷ್ಟಿಸಿದ್ದೆಂದು ಹೇಳಿದ್ದರು. ಇದಕ್ಕೆ ಪುರಾವೆ ನೀಡುವಂತೆ ನಾವು ಕೇಳಿದ್ದರೂ ಕಳೆದ ಆರು ತಿಂಗಳಿನಿಂದ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ನಾವು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಎರಡು ಪ್ರಮುಖ ಪ್ರಯೋಗಾಲಯಗಳಲ್ಲಿ ಈ ವಿಡಿಯೋವನ್ನು ಪರೀಕ್ಷೆಗೊಳಪಡಿಸಿದ್ದೆವು. ಈ ಪರೀಕ್ಷೆಯಲ್ಲಿ ವಿಡಿಯೋ ನಕಲಿಯೂ ಅಲ್ಲ, ಎಐನಿಂದ ಸೃಷ್ಟಿಸಿದ್ದೂ ಅಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಇಂದು ಪಂಥವು ಈ ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಂಡಿದೆ” ಎಂದು ಗರ್ಗಜ್ ತಿಳಿಸಿದರು.
ಮುಖ್ಯಮಂತ್ರಿ ಮಾನ್ ಅವರು ಪವಿತ್ರ ಅಕಾಲ ತಖ್ತ್ನಲ್ಲಿ ನಿಂತು ಸುಳ್ಳು ಹೇಳಿದ್ದಾರೆ. ಹೀಗಾಗಿ ಅವರನ್ನು ಗುರುಗಳ ಮುಂದೆ ಅಪರಾಧಿ ಅಥವಾ ‘ಗುರು ವಿರೋಧಿ’ ಎಂದು ಘೋಷಿಸಲಾಗಿದೆ. ಇನ್ನು ಮುಂದೆ ಸಿಖ್ ಸಮುದಾಯಕ್ಕೆ ಮುಖ್ಯಮಂತ್ರಿಯವರ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ ಮತ್ತು ಸಿಖ್ ಧರ್ಮದ ಅನುಯಾಯಿಗಳು ಅವರಿಂದ ದೂರವಿರಬೇಕು ಎಂದು ಜತ್ಹೇದಾರ್ ಕರೆ ನೀಡಿದ್ದಾರೆ.
ಪಂಜಾಬ್ ಸಂಪುಟಕ್ಕೆ ಸಮನ್ಸ್:
ಮುಂದಿನ ವರ್ಷ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಅಕಾಲ ತಖ್ತ್ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಪಂಜಾಬ್ ಸರ್ಕಾರ ಜಾರಿಗೆ ತಂದ ‘ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕಾರ್ (ತಿದ್ದುಪಡಿ) ಕಾಯ್ದೆ-2026’ ರ ಕುರಿತಾಗಿ, ಜೂನ್ 29 ರಂದು ಧಾರ್ಮಿಕ ಪೀಠದ ಮುಂದೆ ಹಾಜರಾಗುವಂತೆ ಇಡೀ ಪಂಜಾಬ್ ಸಚಿವ ಸಂಪುಟಕ್ಕೆ ಸಮನ್ಸ್ ಜಾರಿ ಮಾಡಿದೆ. ಸಿಖ್ ಧರ್ಮದ ಪವಿತ್ರ ಗ್ರಂಥಕ್ಕೆ ಅಪಚಾರ ಎಸಗುವ ಕೃತ್ಯಗಳಿಗೆ ಈ ಕಾಯ್ದೆಯಡಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ತರಲಾಗಿತ್ತು.
ಈ ಬಗ್ಗೆ ಮಾತನಾಡಿದ ಜತ್ಹೇದಾರ್ ಗರ್ಗಜ್, “ಗುರುಗಳ ಪೀಠಕ್ಕೆ ಯಾರು ಸವಾಲು ಹಾಕಿದರೂ ಅದನ್ನು ಸಹಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಪಂಜಾಬ್ ಸರ್ಕಾರ ಸಿಖ್ ಸಮುದಾಯ, ಸಿಖ್ ಧಾರ್ಮಿಕ ಸಂಸ್ಥೆಗಳು ಅಥವಾ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯನ್ನು (SGPC) ಸಂಪರ್ಕಿಸದೆ, ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಭಗವಂತ ಮಾನ್ ಸರ್ಕಾರ ಹಠಮಾರಿ ಧೋರಣೆ ಪ್ರದರ್ಶಿಸಿ ವಿಧಾನಸಭೆ ಮತ್ತು ರಾಜ್ಯಪಾಲರಿಂದ ಇದಕ್ಕೆ ಅನುಮೋದನೆ ಪಡೆದುಕೊಂಡಿದೆ. ಈ ಕಾನೂನು ಸಿಖ್ ಸಮುದಾಯದ (ಪಂಥ) ಒಳಗೇ ಬಿರುಕು ಮೂಡಿಸುತ್ತದೆ. ಸಿಖ್ ಪಂಥಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ರೂಪಿಸುವ ಯಾವುದೇ ಅಧಿಕಾರ ಸರ್ಕಾರಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ:
ಅಕಾಲ ತಖ್ತ್ನ ಈ ಕಠಿಣ ತೀರ್ಪಿನ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ ಸಿಂಗ್ ರಾಜಾ ವಾರಿಂಗ್ ಅವರು ಮುಖ್ಯಮಂತ್ರಿ ಭಗವಂತ ಮಾನ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಶ್ರೀ ಅಕಾಲ ತಖ್ತ್ ಸಾಹಿಬ್ ನಡೆಸಿದ ಫೋರೆನ್ಸಿಕ್ ತನಿಖೆಯ ನಂತರ ಭಗವಂತ್ ಮಾನ್ ಅವರನ್ನು ‘ತಂಖೈಯಾ’ (ಧಾರ್ಮಿಕ ದುರಾಚಾರದ ಅಪರಾಧಿ) ಎಂದು ಘೋಷಿಸಲಾಗಿದೆ ಮತ್ತು ಸಿಖ್ ಸಮುದಾಯಕ್ಕೆ ಅವರಿಂದ ದೂರವಿರಲು ಸೂಚಿಸಲಾಗಿದೆ. ಇಂತಹ ಗಂಭೀರ ನಿರ್ಧಾರದ ನಂತರ ಭಗವಂತ ಮಾನ್ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಅಕಾಲ ತಖ್ತ್ ಸಾಹಿಬ್ನ ಸರ್ವೋಚ್ಚ ಸ್ಥಾನ ಮತ್ತು ಸಿಖ್ ಭಾವನೆಗಳಿಗೆ ಗೌರವ ನೀಡಿ ಭಗವಂತ್ ಮಾನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ