ವಸಾಯಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಕೈಗಾರಿಕೋದ್ಯಮಿ ಹಾಗೂ ಜಿಎಸ್ಎಂ ಫಾಯಿಲ್ಸ್ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮೋಹನ ಸಿಂಗ್ ಪರಮಾರ್ ಅವರ ಮೇಲಿನ ಗುಂಡಿನ ದಾಳಿಯ ಹಿಂದಿನ ಸಂಚಿನ ಬೆಚ್ಚಿಬೀಳಿಸುವ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ಸುಮಾರು ₹32 ಕೋಟಿ ಹಣಕಾಸಿನ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಹಾಗೂ ಕಂಪನಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕಂಪನಿಯ ಸಹ ಅಧ್ಯಕ್ಷನೇ ಈ ಹತ್ಯೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಸಂಚುಕೋರನೆಂದು ಗುರುತಿಸಲಾದ ಕಂಪನಿಯ ಸಹ ಅಧ್ಯಕ್ಷ 33 ವರ್ಷದ ಸಾಗರ ಭಾನುಶಾಲಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ವಸಾಯಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 26ರಂದು ವಸಾಯಿಯ ನಾಯಕ್ಪಾಡಾ ಪ್ರದೇಶದಲ್ಲಿ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮೋಹನ ಸಿಂಗ್ ಪರಮಾರ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಒಂದು ಗುಂಡು ಪರಮಾರ್ ಅವರ ಭುಜಕ್ಕೆ ತಗುಲಿತ್ತು. ಬಳಿಕ ಎರಡನೇ ಗುಂಡು ಹಾರಿಸಲು ಯತ್ನಿಸಿದಾಗ ಪಿಸ್ತೂಲ್ ಜಾಮ್ ಆಗಿದ್ದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. 46 ವರ್ಷದ ಪರಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ತನಿಖೆಯ ಪ್ರಕಾರ, ಸಾಗರ ಭಾನುಶಾಲಿ ಷೇರು ಮಾರುಕಟ್ಟೆಯಲ್ಲಿ ಸುಮಾರು ₹55 ಕೋಟಿ ನಷ್ಟ ಅನುಭವಿಸಿದ್ದ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ ಹಲವರಿಗೆ ಹಣ ನೀಡಬೇಕಾಗಿತ್ತು. ಇದೇ ವೇಳೆ ತನ್ನ ಕಂಪನಿಯ ಪಾಲನ್ನು ಸುಮಾರು ₹32 ಕೋಟಿಗೆ ಖರೀದಿಸುವಂತೆ ಪರಮಾರ್ ಅವರ ಮೇಲೆ ಒತ್ತಡ ಹೇರಿದ್ದ ಎನ್ನಲಾಗಿದೆ.
ಆದರೆ, ಆ ಹಣವನ್ನು ಹಿಂದಿರುಗಿಸುವ ಬದಲು ಪರಮಾರ್ ಅವರನ್ನು ಹತ್ಯೆ ಮಾಡಲು ಭಾನುಶಾಲಿ ಸಂಚು ರೂಪಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪರಮಾರ್ ಮೃತಪಟ್ಟರೆ ಆತನಿಗೆ ನೀಡಬೇಕಾದ ₹32 ಕೋಟಿ ಹಣಕಾಸಿನ ಬಾಧ್ಯತೆಯಿಂದ ಮುಕ್ತನಾಗುವುದರ ಜೊತೆಗೆ ಕಂಪನಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದು ಎಂಬ ಉದ್ದೇಶದಿಂದ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪರಮಾರ್ ಹತ್ಯೆಗಾಗಿ ಭಾನುಶಾಲಿ ₹40 ಲಕ್ಷಕ್ಕೆ ಸುಪಾರಿ ನೀಡಿದ್ದು, ಅದರಲ್ಲಿ ₹5 ಲಕ್ಷವನ್ನು ಮುಂಗಡವಾಗಿ ನೀಡಿದ್ದು, ಸ್ಥಳೀಯ ಮೂಲಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ವಿಶೇಷ ಪೊಲೀಸ್ ತಂಡ ಉತ್ತರ ಪ್ರದೇಶದಲ್ಲಿ ಅಡಗಿದ್ದ ಸಾಗರ ಭಾನುಶಾಲಿಯನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಆರೋಪಿಗಳನ್ನು ವಿವಿಧ ಸ್ಥಳಗಳಿಂದ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ತನಿಖೆಯನ್ನು ವೈಜ್ಞಾನಿಕ, ತಾಂತ್ರಿಕ, ಡಿಜಿಟಲ್ ಹಾಗೂ ಹಣಕಾಸು ಸಂಬಂಧಿತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದುವರಿಸಲಾಗಿದೆ. ಈ ಸಂಚಿನಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ