ಲಕ್ನೋ: ತಮ್ಮ ಪುತ್ರಿಯನ್ನು ವಿವಾಹವಾದ ವ್ಯಕ್ತಿ ಹಾಗೂ ಆತನ ಕುಟುಂಬ ತಮ್ಮನ್ನು ವಂಚಿಸಿದೆ ಎಂದು ಉತ್ತರ ಪ್ರದೇಶದ ಸೆವತಾ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ ತಿವಾರಿ ಆರೋಪಿಸಿದ್ದಾರೆ. ನಕಲಿ ಹೆಸರು ಬಳಸಿಕೊಂಡು ವಿವಿಧ ರಾಜ್ಯಗಳ ಹಲವು ಮಹಿಳೆಯರನ್ನು ವಂಚಿಸಿರುವ ತಮ್ಮ ಮಗಳ ಗಂಡ ಪ್ರಖರ್ ತ್ರಿವೇದಿ, ಸುಮಾರು 25 ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಶಾಸಕ ಜ್ಞಾನ ತಿವಾರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅನುಜ ತ್ರಿವೇದಿ ಹಾಗೂ ಆತನ ಪುತ್ರ ಪ್ರಖರ್ ತ್ರಿವೇದಿಯನ್ನು ಬಂಧಿಸಿದ್ದಾರೆ.
ಶಾಸಕ ಜ್ಞಾನ ತಿವಾರಿ ಅವರು ಆಗಸ್ಟ್ 6ರಂದು ತಮ್ಮ ಪುತ್ರಿ ಪ್ರಜ್ಞಾ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು, ತಮ್ಮ ಕುಟುಂಬ ವಂಚನೆಗೆ ಒಳಗಾಗಿದೆ ಎಂದು ಆರೋಪಿಸಿದ್ದರು. ಇದೀಗ ಅವರ ದೂರಿನ ಆಧಾರದ ಮೇಲೆ ರೇವಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕರು ನೀಡಿರುವ ದೂರಿನ ಪ್ರಕಾರ, ಅವರ ಪುತ್ರಿ ಪ್ರಜ್ಞಾ ಅವರು ಮಿಶ್ರಿಖ್ನ ಚಂದ್ರಾವಲ್ ನಿವಾಸಿ ಅನುಜ ತ್ರಿವೇದಿ ಅವರ ಪುತ್ರ ಪ್ರಖರ್ ತ್ರಿವೇದಿ ಅವರನ್ನು 2024ರಲ್ಲಿ ವಿವಾಹವಾಗಿದ್ದರು. ಮದುವೆ ನಿಶ್ಚಯಿಸುವ ಸಂದರ್ಭದಲ್ಲಿ ಅನುಜ ತ್ರಿವೇದಿ ತನ್ನನ್ನು ಮುಂಬೈ ಮೂಲದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ, ತನ್ನ ಹಿಂದಿನ ಕ್ರಿಮಿನಲ್ ಹಿನ್ನೆಲೆ ಹಾಗೂ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಮಾಹಿತಿಯನ್ನು ಮರೆಮಾಚಿದ್ದ ಎಂದು ಜ್ಞಾನ ತಿವಾರಿ ಆರೋಪಿಸಿದ್ದಾರೆ.
ವಿವಾಹ ಸಂಬಂಧವನ್ನು ಅಂತಿಮಗೊಳಿಸುವ ಮುನ್ನ ಸ್ಥಳೀಯವಾಗಿ ಕುಟುಂಬದ ಹಿನ್ನೆಲೆ ಕುರಿತು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಪ್ರಭಾವಿ ವ್ಯಕ್ತಿಗಳೆಂದು ಪರಿಗಣಿಸಲ್ಪಟ್ಟ ಕೆಲವರಿಂದ ಕುಟುಂಬದ ಬಗ್ಗೆ ಸಕಾರಾತ್ಮಕ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ವಿವಾಹವಾಗಿ ಸುಮಾರು ಎರಡೂವರೆ ವರ್ಷಗಳ ಬಳಿಕ ಸಾಮಾಜಿಕ ಜಾಲತಾಣಗಳು ಹಾಗೂ ಇತರ ಮೂಲಗಳ ಮೂಲಕ ಪ್ರಖರ್ ತ್ರಿವೇದಿ ನಡೆಸುತ್ತಿದ್ದಾನೆ ಎನ್ನಲಾದ ವಂಚನೆಗಳ ಬಗ್ಗೆ ತಮ್ಮ ಕುಟುಂಬಕ್ಕೆ ಮಾಹಿತಿ ದೊರಕಿತು ಎಂದು ಶಾಸಕರು ತಿಳಿಸಿದ್ದಾರೆ.
ಪ್ರಖರ್ ತ್ರಿವೇದಿ ನಕಲಿ ಹೆಸರು ಮತ್ತು ಐಡೆಂಟಿಟಿ ಬಳಸಿಕೊಂಡು ವಿವಿಧ ರಾಜ್ಯಗಳ ಹಲವು ಮಹಿಳೆಯರನ್ನು ಸಂಬಂಧದ ಹೆಸರಿನಲ್ಲಿ ವಂಚಿಸಿ, ಅವರಿಂದ ಕೋಟ್ಯಂತರ ರೂಪಾಯಿ ಹಣ ದೋಚಿದ್ದಾನೆ ಎಂದು ಜ್ಞಾನ ತಿವಾರಿ ಆರೋಪಿಸಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆತ ಇದೇ ರೀತಿಯ ವಂಚನೆ ನಡೆಸಿದ್ದಾನೆ ಎನ್ನಲಾಗಿದ್ದು, ಸುಮಾರು 25 ಮಹಿಳೆಯರನ್ನು ವಿವಾಹವಾಗಿದ್ದಾನೆ ಎಂಬ ಗಂಭೀರ ಆರೋಪವನ್ನೂ ಶಾಸಕರು ಮಾಡಿದ್ದಾರೆ.
ವಂಚನೆಯ ಬಗ್ಗೆ ಮಾಹಿತಿ ದೊರೆತ ಬಳಿಕ ಆರೋಪಿತ ಕುಟುಂಬದೊಂದಿಗೆ ತಮ್ಮ ಎಲ್ಲ ಸಾಮಾಜಿಕ ಹಾಗೂ ವೈಯಕ್ತಿಕ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಜ್ಞಾನ ತಿವಾರಿ ತಿಳಿಸಿದ್ದಾರೆ. ತಮ್ಮ ಪುತ್ರಿ ಪ್ರಜ್ಞಾ ಅವರನ್ನು ಆರೋಪಿತ ಕುಟುಂಬದಿಂದ ತಮ್ಮ ಮನೆಗೆ ವಾಪಸ್ ಕರೆದುಕೊಂಡು ಬಂದಿರುವುದಾಗಿಯೂ ಹೇಳಿದ್ದಾರೆ.
ಈ ಘಟನೆಯಿಂದ ತಮ್ಮ ಕುಟುಂಬಕ್ಕೆ ತೀವ್ರ ಮಾನಸಿಕ ಆಘಾತ ಉಂಟಾಗಿದೆ. ಅಲ್ಲದೆ, ಜನಪ್ರತಿನಿಧಿಯಾಗಿರುವ ತಮ್ಮ ಸಾಮಾಜಿಕ ಪ್ರತಿಷ್ಠೆಗೂ ಧಕ್ಕೆಯಾಗಿದೆ ಎಂದು ಜ್ಞಾನ ತಿವಾರಿ ಹೇಳಿದ್ದಾರೆ.
ಶಾಸಕರ ದೂರಿನ ಆಧಾರದ ಮೇಲೆ ರೇವಸಾ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ ತ್ರಿವೇದಿ ಹಾಗೂ ಅವರ ಪುತ್ರ ಪ್ರಖರ್ ತ್ರಿವೇದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 6ರಂದು ಪುತ್ರಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ ಜ್ಞಾನ ತಿವಾರಿ, ತಮ್ಮ ಕುಟುಂಬಕ್ಕೆ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅನುಜ ತ್ರಿವೇದಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದರು. ತಮ್ಮ ಅಳಿಯ ಪ್ರಖರ್ ತ್ರಿವೇದಿಯೂ ಆರೋಪಗಳಲ್ಲಿ ತಪ್ಪಿತಸ್ಥನೆಂದು ತನಿಖೆಯಲ್ಲಿ ಸಾಬೀತಾದರೆ, ಆತನ ವಿರುದ್ಧವೂ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಶಾಸಕ ಆಗ್ರಹಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ