ನವದೆಹಲಿ: ಹೈದರಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ (NALSAR) ವಿಶ್ವವಿದ್ಯಾಲಯದ 2026ನೇ ಬ್ಯಾಚ್ನ ಕಾನೂನು ಪದವೀಧರರು ವಕೀಲರಾಗಿ ನೋಂದಣಿ ಮಾಡುವುದಕ್ಕೆ ಹೇರಿದ್ದ ನಿರ್ಬಂಧವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಗುರುವಾರ ಸಂಜೆ ಹಿಂಪಡೆದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಅವರನ್ನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಆಹ್ವಾನಿಸುವುದನ್ನು ಕೆಲ ವಿದ್ಯಾರ್ಥಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ, ಬಿಸಿಐ ಕೆಲವೇ ಗಂಟೆಗಳ ಹಿಂದೆ ಎಲ್ಲಾ ರಾಜ್ಯ ಬಾರ್ ಕೌನ್ಸಿಲ್ಗಳಿಗೆ 2026ರಲ್ಲಿ ನಾಲ್ಸಾರ್ನಿಂದ ಪದವಿ ಪಡೆಯುವ ಯಾವುದೇ ವಿದ್ಯಾರ್ಥಿಯನ್ನು ಮುಂದಿನ ಆದೇಶದವರೆಗೆ ವಕೀಲರಾಗಿ ನೋಂದಾಯಿಸಬಾರದು ಎಂದು ಸೂಚಿಸಿತ್ತು.
ಬಿಸಿಐ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಮಾನನ್ ಕುಮಾರ ಅವರು ಗುರುವಾರ ಸಂಜೆ ನೀಡಿದ ಹೇಳಿಕೆಯಲ್ಲಿ, ನಾಲ್ಸಾರ್ಗೆ ಸಂಬಂಧಿಸಿದ ಹಿಂದಿನ ನಿರ್ದೇಶನವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
“ನಾಲ್ಸಾರ್ಗೆ ಸಂಬಂಧಿಸಿದ ಹಿಂದಿನ ನಿರ್ದೇಶನಗಳನ್ನು ವಿವರವಾದ ಚರ್ಚೆಯ ಬಳಿಕ ಪರಿಷ್ಕರಿಸಲಾಗಿದೆ. 2026ರಲ್ಲಿ ಪದವಿ ಪಡೆದ ನಾಲ್ಸಾರ್ನ ಎಲ್ಲ ವಿದ್ಯಾರ್ಥಿಗಳು ತಮಗೆ ಇಷ್ಟವಾದ ರಾಜ್ಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಈಗ ಅರ್ಹರಾಗಿರುತ್ತಾರೆ. ವಾಸ್ತವಾಂಶಗಳ ಪರಿಶೀಲನೆ ಮುಂದುವರಿಯಲಿದೆ. ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ತಪ್ಪಿಲ್ಲದ ವಿದ್ಯಾರ್ಥಿ ಅದರ ಪರಿಣಾಮವನ್ನು ಅನುಭವಿಸುವಂತಾಗಬಾರದು” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಬಿಸಿಐ, ನಾಲ್ಸಾರ್ನಿಂದ 2026ರಲ್ಲಿ ಕಾನೂನು ಪದವಿ ಪಡೆದ ಯಾವುದೇ ವಿದ್ಯಾರ್ಥಿಯನ್ನು ಕೌನ್ಸಿಲ್ನಿಂದ ಮುಂದಿನ ನಿರ್ದೇಶನ ಹೊರಬರುವವರೆಗೆ ವಕೀಲರಾಗಿ ನೋಂದಾಯಿಸಬಾರದು ಎಂದು ಸೂಚಿಸಿತ್ತು.
ಸಿಜೆಐ ಆಹ್ವಾನಕ್ಕೆ ವಿದ್ಯಾರ್ಥಿಗಳ ಆಕ್ಷೇಪ
ನಾಲ್ಸಾರ್ನ ಪದವೀಧರರ ಒಂದು ವಿಭಾಗವು ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಆಹ್ವಾನಿಸುವ ವಿಶ್ವವಿದ್ಯಾಲಯದ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದೇ ಈ ವಿವಾದಕ್ಕೆ ಕಾರಣವಾಯಿತು.
ದೆಹಲಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಸೂರ್ಯ ಕಾಂತ ಅವರು ನೀಡಿದ್ದರೆಂದು ವರದಿಯಾದ ಹೇಳಿಕೆಗಳು ವಿದ್ಯಾರ್ಥಿಗಳ ಆಕ್ಷೇಪಕ್ಕೆ ಪ್ರಮುಖ ಕಾರಣವಾಗಿದ್ದವು.
ಈ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿ, ರಿಜಿಸ್ಟ್ರಾರ್ ಮತ್ತು ಪ್ರಾಧ್ಯಾಪಕರಿಗೆ ಮನವಿ ಸಲ್ಲಿಸಿ, ಸಿಜೆಐ ಅವರ ಆಹ್ವಾನವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು. ಘಟಿಕೋತ್ಸವವು ಸಾಂವಿಧಾನಿಕ ಹಕ್ಕುಗಳು, ನ್ಯಾಯದ ಲಭ್ಯತೆ ಹಾಗೂ ತಮ್ಮ ಅಹವಾಲುಗಳ ಕುರಿತು ವಿಚಾರಬದ್ಧ ಸಂವಾದ ನಡೆಸುವ ನಾಲ್ಸಾರ್ನ ಬದ್ಧತೆಯನ್ನು ಪ್ರತಿಬಿಂಬಿಸಬೇಕು ಎಂದು ಅವರು ವಾದಿಸಿದ್ದರು.
ಜಂತರ್ ಮಂತರ್ ಪ್ರತಿಭಟನೆ ಹಿನ್ನೆಲೆ
ವಿದ್ಯಾರ್ಥಿಗಳ ಆಕ್ಷೇಪದ ಹಿನ್ನೆಲೆ ಜುಲೈ 20ರಂದು ಜಂತರ್ ಮಂತರ್ನಲ್ಲಿ ನಡೆದ ‘ಚಲೋ ಸಂಸತ್’ ಪ್ರತಿಭಟನೆಗೆ ಸಂಬಂಧಿಸಿದೆ. ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ನೀಟ್ (NEET) ಪರೀಕ್ಷೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಕಾರ್ಯವೈಖರಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಳ್ಳಲಾಗಿತ್ತು.
ಪ್ರತಿಭಟನಾಕಾರರು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆದಿತ್ತು.
ಜುಲೈ 22ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯೇ ನಾಲ್ಸಾರ್ ವಿದ್ಯಾರ್ಥಿಗಳ ಆಕ್ಷೇಪಕ್ಕೆ ಪ್ರಮುಖ ಕಾರಣವಾಯಿತು. ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ವಕೀಲರೊಬ್ಬರು ಮನವಿ ಮಾಡಿದ್ದರು. ನ್ಯಾಯಮೂರ್ತಿ ಸೂರ್ಯ ಕಾಂತ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರೂ ಇದ್ದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೂ ಪೊಲೀಸ್ ದೌರ್ಜನ್ಯ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳಿವೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಅವರು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಸಿಜೆಐ ಸೂರ್ಯ ಕಾಂತ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ನಂತರ ಸಿಜೆಐ ಸೂರ್ಯ ಕಾಂತ ಅವರು ತಮ್ಮ ಹೇಳಿಕೆಯ ಸಂದರ್ಭವನ್ನು ವಿವರಿಸಿದ್ದರು. ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
“ಸುಪ್ರೀಂ ಕೋರ್ಟ್ ಯಾವುದೇ ಪ್ರಕರಣದ ವಿಚಾರಣೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ನಾವು 24 ಗಂಟೆಯೂ ಲಭ್ಯವಿದ್ದೇವೆ ಎಂಬುದು ನನ್ನ ಬದ್ಧತೆ” ಎಂದು ಅವರು ತಿಳಿಸಿದ್ದರು. ಅರ್ಜಿಯನ್ನು ಮೊದಲು ಸರಿಯಾದ ರೀತಿಯಲ್ಲಿ ಸಲ್ಲಿಸಬೇಕಿತ್ತು. ಒಂದು ಪುಟದ ಪತ್ರವನ್ನು ನೀಡಿ ತಕ್ಷಣ ವಿಚಾರಣೆ ನಡೆಸುವಂತೆ ಕೇಳುವುದು ಸರಿಯಾದ ಪ್ರಕ್ರಿಯೆಯಲ್ಲ. ಅರ್ಜಿಯನ್ನು ಸರಿಯಾಗಿ ಸಲ್ಲಿಸುವಂತೆ ಸೂಚಿಸಿದ್ದೆ. ಆದರೆ ತಕ್ಷಣವೇ ವಿಚಾರಣೆ ಬಯಸಲಾಗಿತ್ತು. ಆದ್ದರಿಂದ ಸರಿಯಾದ ಅರ್ಜಿ ಸಲ್ಲಿಸುವಂತೆ ಸಂದೇಶ ನೀಡಬೇಕಾಯಿತು ಎಂದು ಅವರು ವಿವರಿಸಿದ್ದರು.
https://x.com/MishraManan01/status/2087920402517606719?ref_src=twsrc%5Etfw%7Ctwcamp%5Etweetembed%7Ctwterm%5E2087920402517606719%7Ctwgr%5Ebab5b94f5b21329ce4c2ad899431446cd26b3c1b%7Ctwcon%5Es1_&ref_url=https%3A%2F%2Fwww.ndtv.com%2Findia-news%2Fnalsar-chief-justice-surya-kant-bar-council-bans-2026-batch-of-top-law-college-over-chief-justice-invite-row-11906196
ವಿದ್ಯಾರ್ಥಿಗಳ ವಿವರ ಕೇಳಿದ ಬಿಸಿಐ
ನಾಲ್ಸಾರ್ನಲ್ಲಿ ನಡೆದ ಈ ಅಭಿಯಾನದ ಬಗ್ಗೆ ವಿಶ್ವವಿದ್ಯಾಲಯದಿಂದ ಮೂರು ದಿನಗಳೊಳಗೆ ದೃಢೀಕೃತ ವರದಿ ಸಲ್ಲಿಸುವಂತೆ ಬಿಸಿಐ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಅವರ ಆಹ್ವಾನ ಅಥವಾ ಅವರ ಘಟಿಕೋತ್ಸವದ ಭಾಗವಹಿಸುವಿಕೆಗೆ ವಿರೋಧವಾಗಿ ನಡೆದ ಅಭಿಯಾನ ಆರಂಭಿಸುವುದು, ಸಂಘಟಿಸುವುದು, ಸಮನ್ವಯಗೊಳಿಸುವುದು ಅಥವಾ ವಿದ್ಯಾರ್ಥಿಗಳನ್ನು ಒಗ್ಗೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾರ್ಥಿಗಳು ಹಾಗೂ ಇತರ ವ್ಯಕ್ತಿಗಳ ವಿವರಗಳನ್ನು ನೀಡುವಂತೆ ಬಿಸಿಐ ವಿಶ್ವವಿದ್ಯಾಲಯವನ್ನು ಕೇಳಿದೆ.
ಇದರ ಜೊತೆಗೆ, ಸಿಜೆಐ ಅವರ ಆಹ್ವಾನ ಅಥವಾ ಪ್ರಸ್ತಾವಿತ ಭಾಗವಹಿಸುವಿಕೆಗೆ ಸಂಬಂಧಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸಲ್ಲಿಸಲಾದ ಯಾವುದೇ ಮನವಿ, ಅರ್ಜಿ, ಮನವಿಪತ್ರ, ಮೆಮೊರೆಂಡಂ ಅಥವಾ ಇತರ ಸಂವಹನಗಳ ಪ್ರತಿಗಳನ್ನು ನೀಡುವಂತೆ ಸೂಚಿಸಲಾಗಿದೆ. ವಿಶ್ವವಿದ್ಯಾಲಯದ ಅಧಿಕೃತ ದಾಖಲೆಗಳಲ್ಲಿ ಇರುವ ಅಂತಹ ಪತ್ರಗಳ ಸಂಪೂರ್ಣ ಸಹಿದಾರರ ಪಟ್ಟಿಯನ್ನೂ ಸಲ್ಲಿಸುವಂತೆ ಬಿಸಿಐ ಹೇಳಿದೆ.
“ಕಾನೂನು ವಿದ್ಯಾರ್ಥಿಗಳು ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಗೌರವ ತೋರಬೇಕು”
ಆರಂಭಿಕ ಆದೇಶದಲ್ಲಿ ಬಿಸಿಐ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಯ ಬಗ್ಗೆ ಗೌರವ ಅಥವಾ ಮಾನ್ಯತೆ ತೋರದ ಕಾನೂನು ವಿದ್ಯಾರ್ಥಿ ಜವಾಬ್ದಾರಿಯುತ ಅಥವಾ ವಿವೇಚನೆಯುಳ್ಳ ವಕೀಲ, ಶಿಕ್ಷಕ ಅಥವಾ ನ್ಯಾಯಾಧೀಶನಾಗುವ ನಿರೀಕ್ಷೆ ಇರಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಅವರ ವರ್ತನೆಯು ಕಾನೂನು ವೃತ್ತಿಗೆ ಪ್ರವೇಶಿಸಲು ಅಥವಾ ಅದರೊಂದಿಗೆ ಸಂಬಂಧ ಹೊಂದಲು ಅಗತ್ಯವಾದ ಅರ್ಹತೆ, ವೃತ್ತಿಪರ ಘನತೆ, ಶಿಸ್ತು ಮತ್ತು ನೈತಿಕ ಮಾನದಂಡಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅದು ಅಭಿಪ್ರಾಯಪಟ್ಟಿತ್ತು.
ಶಿಕ್ಷಕರ ವಿರುದ್ಧವೂ ಬಿಸಿಐ ಆರೋಪ
ಬಿಸಿಐ ಅಧ್ಯಕ್ಷ ಮಾನನ್ ಕುಮಾರ ಅವರು, “ಕೆಲವು ವಿಶ್ವಾಸಾರ್ಹ ಮೂಲಗಳ” ಮಾಹಿತಿಯನ್ನು ಉಲ್ಲೇಖಿಸಿ, ನಾಲ್ಸಾರ್ನ ಕೆಲವು ಬೋಧಕ ಸಿಬ್ಬಂದಿಯಲ್ಲಿ ಗುಂಪುಗಾರಿಕೆ ಮತ್ತು ಆಂತರಿಕ ರಾಜಕೀಯ ಚಟುವಟಿಕೆಗಳು ನಡೆದಿವೆ ಎಂದು ಆರೋಪಿಸಿದ್ದರು.
ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು “ತಪ್ಪುದಾರಿಗೆ ಎಳೆಯುವ, ಪ್ರಚೋದಿಸುವ ಮತ್ತು ದಾರಿ ತಪ್ಪಿಸುವ” ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂಬ ಆರೋಪವನ್ನೂ ಅವರು ಮಾಡಿದ್ದರು. ಈ ಆರೋಪವನ್ನು ಗಂಭೀರ ವಿಷಯವೆಂದು ಬಿಸಿಐ ಪರಿಗಣಿಸಿದೆ.ಕಾನೂನು ಶಿಕ್ಷಣದ ನಿಯಂತ್ರಕ ಸಂಸ್ಥೆಯಾಗಿ ಇಂತಹ ಗಂಭೀರ ಪರಿಸ್ಥಿತಿಯನ್ನು ನೋಡಿಕೊಂಡು ಸುಮ್ಮನೆ “ಮೂಕ ಪ್ರೇಕ್ಷಕ”ನಾಗಿ ಉಳಿಯಲು ಸಾಧ್ಯವಿಲ್ಲ ಎಂದು ಬಿಸಿಐ ಹೇಳಿತ್ತು.
https://x.com/ajaymaken/status/2087914940699115578?ref_src=twsrc%5Etfw%7Ctwcamp%5Etweetembed%7Ctwterm%5E2087914940699115578%7Ctwgr%5Ebab5b94f5b21329ce4c2ad899431446cd26b3c1b%7Ctwcon%5Es1_&ref_url=https%3A%2F%2Fwww.ndtv.com%2Findia-news%2Fnalsar-chief-justice-surya-kant-bar-council-bans-2026-batch-of-top-law-college-over-chief-justice-invite-row-11906196
ಕಾಂಗ್ರೆಸ್ನಿಂದ ತೀವ್ರ ವಿರೋಧ
ಬಿಸಿಐನ ಆರಂಭಿಕ ಆದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಜಯ ಮಾಕನ್ ಅವರು ಈ ಕ್ರಮವನ್ನು “ದ್ವೇಷಪೂರಿತ, ಕಾನೂನುಬಾಹಿರ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಟೀಕಿಸಿದ್ದರು.
ಕೆಲವು ವಿದ್ಯಾರ್ಥಿಗಳು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಇಡೀ ನಾಲ್ಸಾರ್ ಪದವೀಧರರ ಬ್ಯಾಚ್ ವಕೀಲರಾಗಿ ನೋಂದಣಿಯಾಗುವುದನ್ನು ತಡೆಯಲಾಗಿದೆ. ಬಿಜೆಪಿ ರಾಜ್ಯಸಭಾ ಸದಸ್ಯರ ನೇತೃತ್ವದಲ್ಲಿರುವ ಶಾಸನಬದ್ಧ ಸಂಸ್ಥೆಯಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇಂತಹ ಕ್ರಮ ಕೈಗೊಂಡಿರುವುದು ಪ್ರತೀಕಾರದ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದರು.
ಆದರೆ ಇದೀಗ ಬಿಸಿಐ ತನ್ನ ಹಿಂದಿನ ನಿರ್ದೇಶನವನ್ನು ಮಾರ್ಪಡಿಸಿದ್ದು, 2026ರಲ್ಲಿ ನಾಲ್ಸಾರ್ನಿಂದ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ರಾಜ್ಯ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ವೇಳೆ, ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದಿನ ವಾಸ್ತವಾಂಶಗಳ ಕುರಿತು ಬಿಸಿಐ ನಡೆಸುತ್ತಿರುವ ವಿಚಾರಣೆ ಮುಂದುವರಿಯಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ