30 ನಿಮಿಷದಲ್ಲಿ 9 ಮೀಟರ್‌ ಏರಿದ ನದಿ ನೀರಿನ ಮಟ್ಟ: ಹಿಮ-ಬಂಡೆ ಕುಸಿತ ನೇಪಾಳದಲ್ಲಿ ಮಾರಕ ಪ್ರವಾಹವಾಗಿದ್ದು ಹೇಗೆ ?

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹ (ಫ್ಲ್ಯಾಶ್ ಫ್ಲಡ್) ಭಾರೀ ದುರಂತಕ್ಕೆ ಕಾರಣವಾಗಿದ್ದು, ಇದುವರೆಗೆ 162 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಇನ್ನೂ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರವಾಹಕ್ಕೆ ಹಿಮನದಿಯ ಕುಸಿತ (Glacier Collapse) ಕಾರಣ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ನೇಪಾಳ-ಟಿಬೆಟ್ ಗಡಿಯ ಸಮೀಪ ಭೋಟೆಕೋಶಿ ನದಿಯ ಉಪನದಿಯಾದ ಲ್ಹೆಂಡೆ (Lhende) ನದಿಯಲ್ಲಿ ಸಂಭವಿಸಿದ ಭಾರಿ ಹಿಮ ಹಾಗೂ ಬಂಡೆ ಕುಸಿತದಿಂದ ನದಿಯ ಹರಿವು ತಡೆಗಟ್ಟಲ್ಪಟ್ಟು, ನಂತರ ನಿಂತ ನೀರು ಮಿತಿ ಮೀರಿದ ನಂತರ, ಮಣ್ಣು, ಕಲ್ಲುಗಳ ಭಾರೀ ಪ್ರವಾಹ ರೂಪುಗೊಂಡು ಟಿಬೆಟ್ ಗಡಿಯ ಸಮೀಪದ ಟಿಮುರೆ (Timure) ಪ್ರದೇಶಕ್ಕೆ ಮೊದಲಿಗೆ ಅಪ್ಪಳಿಸಿತು.
ನೂರಾರು ಜನರು ವಾಸಿಸುತ್ತಿದ್ದ ವಸತಿ ಪ್ರದೇಶದ ಬಹುಭಾಗ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಸ್ಥಳೀಯವಾಗಿ ಯಾವುದೇ ಮಳೆಯಾಗದ ಕಾರಣ ಜನರಿಗೆ ಮುನ್ನೆಚ್ಚರಿಕೆ ದೊರಕದೆ, ತಮ್ಮ ದೈನಂದಿನ ಕೆಲಸಗಳಲ್ಲಿ ನಿರತರಾಗಿದ್ದಾಗಲೇ ದುರಂತ ಸಂಭವಿಸಿದೆ.
 ಏನಾಯಿತು?
ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಭಾರೀ ಹಿಮ ಹಾಗೂ ಬಂಡೆ ಕುಸಿತವು ನೀರು, ಮಣ್ಣು ಮತ್ತು ದೊಡ್ಡ ಕಲ್ಲುಗಳನ್ನು ಹೊತ್ತೊಯ್ಯುವ ಪ್ರಬಲ ಪ್ರವಾಹಕ್ಕೆ ಕಾರಣವಾಯಿತು. ಕೇವಲ ಅರ್ಧ ಗಂಟೆಯೊಳಗೆ ನದಿಯ ನೀರಿನ ಮಟ್ಟ ಸುಮಾರು 9 ಮೀಟರ್‌ಗಳಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಹಿಮನದಿಗೆ ಅಪಾರ ಪ್ರಮಾಣದ ಕಲ್ಲುಗಳು ಹರಿದುಬಂದವು, ಇದು ಭೋಟೆ ಕೋಶಿ ಮತ್ತು ನಂತರ ತ್ರಿಶೂಲಿ ನದಿ ವ್ಯವಸ್ಥೆಗೆ ಪ್ರಬಲವಾದ ಹರಿವನ್ನು ಕಳುಹಿಸಿತು.
ನದಿ ಹರಿಯುವಿಕೆಯ ತೀವ್ರ ವೇಗವು ವಿಪತ್ತಿನ ಬಲವನ್ನು ವಿವರಿಸುತ್ತದೆ. ಕೆಳಭಾಗದ ಗಾಲ್ಚಿ ಪ್ರದೇಶದಲ್ಲಿ, ನೀರಿನ ಮಟ್ಟವು ಕೇವಲ ಅರ್ಧ ಗಂಟೆಯೊಳಗೆ ಒಂಬತ್ತು ಮೀಟರ್‌ಗಳಷ್ಟು, ಸುಮಾರು 30 ಅಡಿಗಳಷ್ಟು ಏರಿದೆ ಎಂದು ವರದಿಯಾಗಿದೆ. ಪ್ರವಾಹವು ಮಣ್ಣು ಮತ್ತು ಬಂಡೆಗಳನ್ನು ಕೆಳಕ್ಕೆ ಸಾಗಿಸಿತು, ಮೂಲಸೌಕರ್ಯಗಳನ್ನು ನಾಶಮಾಡಿತು ಮತ್ತು ಅದರ ಹಾದಿಯಲ್ಲಿನ ಮನೆ-ಮಠಗಳನ್ನು ಮುಳುಗಿಸಿತು.
ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ರಸುವಾ ಮತ್ತು ಧಾಡಿಂಗ್ ಸೇರಿವೆ, ಪ್ರವಾಹದ ನೀರು ನಂತರ ನುವಾಕೋಟ್, ಚಿತವಾನ್, ಗೂರ್ಖಾ, ತನಹು ತಲುಪಿತು.
ರಕ್ಷಣಾ ಕಾರ್ಯಾಚರಣೆಗಳ ವೈಮಾನಿಕ ದೃಶ್ಯಾವಳಿಗಳು ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳು ಮುಚ್ಚಿಹೋಗಿವೆ ಅಥವಾ ಕೊಚ್ಚಿಹೋಗಿವೆ, ದೊಡ್ಡ ಪ್ರದೇಶಗಳು ಮಣ್ಣು ಮತ್ತು ಭಗ್ನಾವಶೇಷಗಳಿಂದ ಆವೃತವಾಗಿವೆ ಎಂದು ತೋರಿಸಿದೆ.
19 ಸೇತುವೆಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನುವಾಕೋಟ್‌ನ ಬೆತ್ರಾವತಿಯನ್ನು ರಸುವಾದಲ್ಲಿನ ರಸುವಾಗಧಿ ಗಡಿ ದಾಟುವಿಕೆಯೊಂದಿಗೆ ಸಂಪರ್ಕಿಸುವ 42 ಕಿ.ಮೀ ರಸ್ತೆಯೂ ನಾಶವಾಗಿದೆ.
ರಾಷ್ಟ್ರೀಯ ವಿಪತ್ತು ಅಪಾಯ ಶಮನ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ನೀಡಿರುವ ಮಾಹಿತಿ ಪ್ರಕಾರ, ನೇಪಾಳ-ಚೀನಾ ಗಡಿಯಲ್ಲಿರುವ ರಸುವಾಗಢಿಯಿಂದ (Rasuwagadhi) ಈಶಾನ್ಯ ದಿಕ್ಕಿನಲ್ಲಿ ಸುಮಾರು 20 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ ಹಿಮ-ಬಂಡೆ ಕುಸಿತದ ಪರಿಣಾಮ ಲ್ಹೆಂಡೆ ನದಿಯಲ್ಲಿ ಕಲ್ಲು ಮಣ್ಣಿನಿಂದ ಕೂಡಿದ ಭಾರೀ  ಪ್ರವಾಹ ಉಂಟಾಯಿತು. ಈ ಪ್ರವಾಹ ಟಿಮುರೆ ಪ್ರದೇಶವನ್ನು ದಾಟಿ ತ್ರಿಶೂಲಿ (Trishuli) ನದಿಗೆ ಸೇರಿರುವಂತೆ ಕಾಣುತ್ತಿದೆ ಎಂದು ಪ್ರಾಧಿಕಾರ ತಿಳಿಸಿದೆ.
https://x.com/Panic_creaqc/status/2092879381874319440
ನೂರಾರು ಮಂದಿ ನಾಪತ್ತೆ
ಈ ದುರಂತದ ಬಳಿಕ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಕನಿಷ್ಠ 300 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಸುಮಾರು 50 ಮಂದಿ ಕೈಲಾಸ ಮಾನಸರೋವರ ಯಾತ್ರೆಗೆ ತೆರಳಿದ್ದ ಭಕ್ತರು ಎಂದು ತಿಳಿದುಬಂದಿದೆ.
ಅದೇ ರೀತಿ, 81 ಭದ್ರತಾ ಸಿಬ್ಬಂದಿಯೂ ಇನ್ನೂ ಪತ್ತೆಯಾಗಿಲ್ಲ. ಇವರಲ್ಲಿ 44 ಮಂದಿ ನೇಪಾಳ ಸೇನೆಯ ಸೈನಿಕರು, 28 ಮಂದಿ ನೇಪಾಳ ಪೊಲೀಸ್ ಸಿಬ್ಬಂದಿ ಹಾಗೂ 9 ಮಂದಿ ಸಶಸ್ತ್ರ ಪೊಲೀಸ್ ಪಡೆಯ ಸದಸ್ಯರು ಸೇರಿದ್ದಾರೆ. ಇವರು ರಸುವಾಗಢಿ, ಸ್ಯಾಫ್ರುಬೆಸಿ, ಬೆಟ್ರಾವತಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಸ್ತೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತ
ಪ್ರವಾಹ ಹಾಗೂ ಭೂಕುಸಿತಗಳಿಂದ ನೇಪಾಳದ ಒಂಬತ್ತು ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಮಣ್ಣು ಹಾಗೂ ಅವಶೇಷಗಳಡಿ ರಸ್ತೆಗಳು ಮುಚ್ಚಿಹೋಗಿವೆ. ಕೆಲವು ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಮುಂದುವರಿದಿರುವುದರಿಂದ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ನೇಪಾಳದಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಲು ಕಾರಣವೇನು?
ಭಾರತೀಯ ಮತ್ತು ಯುರೇಷಿಯನ್ (Eurasian) ಭೂಫಲಕಗಳು (Tectonic Plates) ಪರಸ್ಪರ ಎದುರಾಗುವ ಪ್ರದೇಶದಲ್ಲೇ ನೇಪಾಳ ನೆಲೆಗೊಂಡಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಈ ಎರಡು ಭೂಫಲಕಗಳು ವರ್ಷಕ್ಕೆ ಸುಮಾರು 40ರಿಂದ 50 ಮಿಲಿಮೀಟರ್ ವೇಗದಲ್ಲಿ ಪರಸ್ಪರ ಒತ್ತಡ ಹೇರುತ್ತಿವೆ. ಇದರಿಂದ ಹಿಮಾಲಯ ಪ್ರದೇಶವು ಭೂಕಂಪ ಹಾಗೂ ಇತರೆ ಭೂವೈಜ್ಞಾನಿಕ ಚಟುವಟಿಕೆಗಳಿಗೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.
ಇದರ ನಿರಂತರ ಚಲನೆಯಿಂದ ಅಪಾರ ಭೂಗರ್ಭ ಒತ್ತಡ ಸೃಷ್ಟಿಯಾಗುತ್ತದೆ. ಭೂಕಂಪದ ರೂಪದಲ್ಲಿ ಈ ಶಕ್ತಿ ಬಿಡುಗಡೆಯಾದಾಗ, ಅದರ ಪರಿಣಾಮ ಕೇವಲ ಭೂಕಂಪಕ್ಕೆ ಸೀಮಿತವಾಗದೆ, ಭೂಕುಸಿತ, ಹಿಮಪಾತ ಮತ್ತು ಪ್ರವಾಹಗಳಂತಹ ಸರಣಿ ದುರಂತಗಳಿಗೆ ಕಾರಣವಾಗುತ್ತದೆ.
2015ರ ಗೋರಖಾ ಭೂಕಂಪದ ನೆನಪು
2015ರಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಗೋರಖಾ (Gorkha) ಭೂಕಂಪವು ಸುಮಾರು 9,000 ಜನರ ಜೀವ ಬಲಿತೆಗೆದುಕೊಂಡಿತ್ತು. ಈ ಭೂಕಂಪದ ನಂತರ ಸಾವಿರಾರು ಭೂಕುಸಿತಗಳು ಮತ್ತು ಹಿಮಪಾತಗಳು ಸಂಭವಿಸಿ ದೇಶಾದ್ಯಂತ ಭಾರೀ ಹಾನಿ ಉಂಟಾಗಿತ್ತು.
ನೇಪಾಳದ ಪರ್ವತಮಯ ಭೂಪ್ರದೇಶದಲ್ಲಿ ಒಂದು ಪ್ರಕೃತಿ ವಿಕೋಪ ಮತ್ತೊಂದು ವಿಕೋಪಕ್ಕೆ ಕಾರಣವಾಗುವ ಸರಣಿ ಪರಿಣಾಮ ಸಾಮಾನ್ಯವಾಗಿದೆ. ಭೂಕಂಪಗಳು ಬೆಟ್ಟಗಳ ಇಳಿಜಾರುಗಳನ್ನು ದುರ್ಬಲಗೊಳಿಸುತ್ತವೆ. ಬಳಿಕ ಭೂಕುಸಿತಗಳು ನದಿಗಳ ಹರಿವನ್ನು ತಡೆಗಟ್ಟುತ್ತವೆ. ಆ ತಡೆಗಳು ಏಕಾಏಕಿ ಒಡೆದಾಗ, ಅಪಾರ ಪ್ರಮಾಣದ ನೀರು, ಮಣ್ಣು ಹಾಗೂ ಕಲ್ಲುಗಳು ಕೆಳಭಾಗದ ಪ್ರದೇಶಗಳತ್ತ ಧಾವಿಸಿ ಭೀಕರ ಪ್ರವಾಹವನ್ನು ಸೃಷ್ಟಿಸುತ್ತವೆ. ಇದೇ ಕಾರಣದಿಂದ ನೇಪಾಳವು ವಿಶ್ವದ ಅತ್ಯಂತ ಪ್ರಕೃತಿ ವಿಕೋಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement