ಕಠ್ಮಂಡು: ಚೀನಾ–ನೇಪಾಳ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವ ನಡುವೆಯೇ, ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕಳವು ಮಾಡಿದ ಆರೋಪದಡಿ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯ ದೇಹದಿಂದ ಇಬ್ಬರು ವ್ಯಕ್ತಿಗಳು ಚಿನ್ನದ ಕಿವಿಯೋಲೆಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಬಂಧನ ನಡೆದಿದೆ. ಪ್ರವಾಹದಲ್ಲಿ ನಾರಾಯಣಿ ನದಿಗೆ ಕೊಚ್ಚಿಹೋಗಿದ್ದ ಮಹಿಳೆಯ ಮೃತದೇಹದಿಂದ ಕಿವಿಯೋಲೆಗಳನ್ನು ಕದ್ದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಆ ವಿಡಿಯೊವನ್ನು ಮರುಹಂಚಿಕೊಂಡ ನೇಪಾಳ ಪೊಲೀಸರು ತಿಳಿಸಿದ್ದಾರೆ.
ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಮರದ ಹಲಗೆಗಳು ಮತ್ತು ಕೂದಲನ್ನು ಜಗ್ಗಿ ಮಹಿಳೆಯ ಮೃತದೇಹವನ್ನು ನೀರಿನಿಂದ ಎಳೆದು, ನಂತರ ಆಕೆಯ ಎರಡೂ ಕಿವಿಗಳಲ್ಲಿದ್ದ ಕಿವಿಯೋಲೆಗಳನ್ನು ತೆಗೆದು ಪಕ್ಕಕ್ಕೆ ಇಡುವುದು ಕಾಣಿಸುತ್ತದೆ. ಈ ವೇಳೆ ಸುತ್ತಮುತ್ತ ನಿಂತಿದ್ದ ಹಲವರು ತಮ್ಮ ಮೊಬೈಲ್ಗಳಲ್ಲಿ ಘಟನೆಯನ್ನು ಚಿತ್ರೀಕರಿಸುತ್ತಿರುವ ದೃಶ್ಯವೂ ದಾಖಲಾಗಿದೆ. ನಂತರ ಈ ಪ್ರಕರಣದ ಕುರಿತು ತನಿಖೆ ನಡೆಸಿದ ಚಿತ್ವನ್ ಪೊಲೀಸರು, ಈ ಮೃತದೇಹವು ಭಾರೀ ಪ್ರವಾಹದ ಪರಿಣಾಮ ನಾರಾಯಣಿ ನದಿಗೆ ಕೊಚ್ಚಿಹೋಗಿದ್ದ ಮಹಿಳೆಯದ್ದು ಎಂಬುದನ್ನು ದೃಢಪಡಿಸಿದ್ದಾರೆ.
ವೈರಲ್ ವಿಡಿಯೊ ಆಧರಿಸಿ ಆರೋಪಿಗಳನ್ನು ಗುರುತಿಸಿದ ಪೊಲೀಸರು, 25 ವರ್ಷದ ಮದನ್ ಗುರುಂಗ್ ಹಾಗೂ 38 ವರ್ಷದ ಉಮೇಶ ಚೌಧರಿ ಎಂಬವರನ್ನು ಗುರುವಾರ ಭರತಪುರ ಮಹಾನಗರ ಪಾಲಿಕೆಯ ವಾರ್ಡ್–1ರ ಪೋಖರಾ ಬಸ್ ಪಾರ್ಕ್ ಸಮೀಪ ಬಂಧಿಸಿದ್ದಾರೆ. ಈ ಮಾಹಿತಿಯನ್ನು ನೇಪಾಳದ ಮಾಧ್ಯಮ ಸಂಸ್ಥೆ ಖಬರ್ಹಬ್ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ದುರಂತದಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ನಡೆಯುವ ದರೋಡೆ ಅಥವಾ ಯಾವುದೇ ಅಮಾನವೀಯ ಕೃತ್ಯವನ್ನು ಸಹಿಸುವುದಿಲ್ಲ ಎಂದು ನೇಪಾಳ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ನೇಪಾಳದ ಹಠಾತ್ ಪ್ರವಾಹದಿಂದ ಸಂಭವಿಸಿದ ಭೀಕರ ದುರಂತವು ಇತ್ತೀಚಿನ ವರ್ಷಗಳಲ್ಲಿ ನೇಪಾಳ ಕಂಡ ಅತ್ಯಂತ ಮಾರಕ ಪ್ರವಾಹ ದುರಂತಗಳಲ್ಲೊಂದಾಗಿದೆ. ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಆಕಸ್ಮಿಕ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ನಾಪತ್ತೆಯಾಗಿರುವ 1,400ಕ್ಕೂ ಹೆಚ್ಚು ಜನರಿಗಾಗಿ ರಕ್ಷಣಾ ತಂಡಗಳು ಕೆಸರು ತುಂಬಿದ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿಸಿವೆ.
ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದ್ದು, ಅನೇಕ ಗ್ರಾಮಗಳು ಸಂಪೂರ್ಣವಾಗಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.
ಇದೇ ವೇಳೆ ಟಿಬೆಟ್ನಲ್ಲಿ ಬುಧವಾರ ಸಂಭವಿಸಿದ ಭಾರೀ ಕೆಸರುಪ್ರವಾಹವು ಗ್ಯಿರೋಂಗ್ ಪೋರ್ಟ್ ಗಡಿ ದಾಟುವ ಕೇಂದ್ರದಲ್ಲಿದ್ದ ಬಹುಮಹಡಿ ಬಂದರು ಕಟ್ಟಡವನ್ನು ಆವರಿಸಿದ್ದು, ಬಸ್ ನಿಲುಗಡೆ ಪ್ರದೇಶವನ್ನೂ ಸಂಪೂರ್ಣವಾಗಿ ನುಂಗಿದೆ. ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ ವರದಿ ಪ್ರಕಾರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಸರಿ 1.5 ಮೀಟರ್ (ಸುಮಾರು 5 ಅಡಿ) ಆಳದಷ್ಟು ಕೆಸರು ಆವರಿಸಿಕೊಂಡಿದೆ.
ಗಡಿ ದಾಟುವ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹಾನಿಗೊಳಗಾಗಿದ್ದು, ಮಳೆ ಮುಂದುವರಿದಿರುವ ಕಾರಣ ಮತ್ತಷ್ಟು ಭೂಕುಸಿತಗಳು ಅಥವಾ ದ್ವಿತೀಯ ಹಂತದ ಭೂ ಕುಸಿತಗಳ ಸಂಭವವಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ