ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಇಸ್ಲಾಮಾಬಾದ್: ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 100ರಿಂದ 125 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಂಘಟನೆಗಳು, ಸ್ಥಳೀಯ ನಿವಾಸಿಗಳು ಹಾಗೂ ರಾಜಕೀಯ ಪಕ್ಷಗಳು ತನಿಖೆಗೆ ಆಗ್ರಹಿಸಿವೆ. ಅಲ್ಲದೆ ದೇವಾಲಯವನ್ನು ಮೂಲ ಸ್ವರೂಪದಲ್ಲಿ ಪುನರ್‌ನಿರ್ಮಿಸಿ, ಅದರ ಭೂಮಿಯ ಮೇಲಿನ  ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಶೆಹಬಾಜ್ ಶರೀಫ್ ನೇತೃತ್ವದ  ಸರ್ಕಾರವನ್ನು ಒತ್ತಾಯಿಸಿವೆ.
 ವರದಿಯ ಪ್ರಕಾರ, ನಿಷೇಧಿತ ಬಲಪಂಥೀಯ ಇಸ್ಲಾಮಿಕ್ ಸಂಘಟನೆ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (TLP) ಸದಸ್ಯರು ಆಗಸ್ಟ್ 21ರಂದು ದೇವಾಲಯವನ್ನು ಧ್ವಂಸಗೊಳಿಸಿ, ಅದರ ಭೂಮಿಯನ್ನು ಪಕ್ಕದಲ್ಲಿರುವ ಮದರಸಾಕ್ಕೆ ಸೇರಿಸುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಲಾಗಿದೆ.ಆದರೆ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದ್ದು, ಸುಮಾರು 100ರಿಂದ 125 ವರ್ಷ ಹಳೆಯದಾದ ದೇವಾಲಯವು ಆ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕುಸಿದುಬಿದ್ದಿದೆ ಎಂದು ಹೇಳಿದೆ.
ಸುಮಾರು 1,000 ಚದರ ಮೀಟರ್ ವಿಸ್ತೀರ್ಣದ ಭೂಮಿಯಲ್ಲಿ ಇದ್ದ ಈ ಪುರಾತನ ದೇವಾಲಯವು ಲಾಹೋರ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ನಾರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿ ನೆಲೆಗೊಂಡಿತ್ತು.
ಅಲ್ಪಸಂಖ್ಯಾತ ಪಕ್ಷದ ಆಕ್ರೋಶ
ಅಲ್ಪಸಂಖ್ಯಾತರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವ ಪಾಕಿಸ್ತಾನ್ ಮಸೀಹಾ ಮಿಲ್ಲತ್ ಪಾರ್ಟಿ (PMMP), ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್ ಶರೀಫ್ ನೇತೃತ್ವದ ಸರ್ಕಾರವು ದೇವಾಲಯ ಧ್ವಂಸದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದೇವಾಲಯವನ್ನು ಪುನರ್‌ನಿರ್ಮಿಸಬೇಕು ಎಂದು ಆಗ್ರಹಿಸಿದೆ.
ಪಕ್ಷದ ಅಧ್ಯಕ್ಷ ಅಸ್ಲಂ ಪರ್ವೇಜ್ ಸಾಹೋತ್ರಾ ಅವರು ಆಗಸ್ಟ್ 28ರಂದು ಪಂಜಾಬ್ ಹೆಚ್ಚುವರಿ ಗೃಹ ಕಾರ್ಯದರ್ಶಿಯನ್ನು ಭೇಟಿ ಮಾಡಿ, ದೇವಾಲಯವನ್ನು ರಕ್ಷಿಸಲು ವಿಫಲವಾದ ಅಧಿಕಾರಿಗಳು ಹಾಗೂ ಧ್ವಂಸಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ದೇವಾಲಯದ ಗೋಪುರ (ಶಿಖರ) ಭಾಗದಲ್ಲಿದ್ದ ಲೋಹದ ಅಲಂಕಾರಿಕ ವಸ್ತುಗಳು ಹಾಗೂ ಧ್ವಂಸಗೊಂಡ ಕಟ್ಟಡದ ಇಟ್ಟಿಗೆಗಳನ್ನು ಸಹ ನಂತರ ಸ್ಥಳದಿಂದ ತೆಗೆದುಹಾಕಲಾಗಿದೆ ಎಂದು ಸಾಹೋತ್ರಾ ಆರೋಪಿಸಿದ್ದಾರೆ.
ಮದರಸಾ ಲೀಸ್ ರದ್ದಾಗಿದ್ದರೂ ಆದೇಶ ಜಾರಿಗೆ ಬರಲಿಲ್ಲ
ದೇವಾಲಯದ ಪಕ್ಕದ ಭೂಮಿಯನ್ನು ಹಿಂದೆ ಎವಾಕ್ಯು ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ETPB) ಮದರಸಾ ಸ್ಥಾಪನೆಗಾಗಿ ಗುತ್ತಿಗೆಗೆ ನೀಡಿತ್ತು. ಆದರೆ ಹಲವು ವರ್ಷಗಳ ಕಾಲ ಬಾಡಿಗೆ ಪಾವತಿಸದಿರುವುದು ಹಾಗೂ ಉದ್ದೇಶಿತ ಬಳಕೆ ಮಾಡದಿರುವ ಕಾರಣದಿಂದ ಆ ಗುತ್ತಿಗೆಯನ್ನು ನಂತರ ರದ್ದುಗೊಳಿಸಲಾಗಿತ್ತು ಎಂದು ಸಾಹೋತ್ರಾ ತಿಳಿಸಿದ್ದಾರೆ.
ಆದಾಯ ಇಲಾಖೆ ವರದಿಯನ್ನು ಉಲ್ಲೇಖಿಸಿದ ಅವರು, ಆ ಆಸ್ತಿಯಲ್ಲಿರುವ ವಸತಿ ಕಟ್ಟಡಗಳು ಹಾಗೂ ಇತರ ಭಾಗಗಳನ್ನು ಕೆಲವು ವ್ಯಕ್ತಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜನವರಿ 29ರಂದು ಸಿಯಾಲ್ಕೋಟ್‌ನ ETPB ಉಪ ಆಡಳಿತಾಧಿಕಾರಿ ಮದರಸಾದ ಗುತ್ತಿಗೆ ಹಕ್ಕುಗಳನ್ನು ರದ್ದುಗೊಳಿಸಿ, ಅಕ್ರಮ ಆಕ್ರಮಣಕಾರರನ್ನು ತೆರವುಗೊಳಿಸಿ ಆಸ್ತಿಯನ್ನು ಸೀಲ್ ಮಾಡುವಂತೆ ಆದೇಶಿಸಿದ್ದರು. ಆದರೆ ಆ ಆದೇಶವನ್ನು ಜಾರಿಗೆ ತರಲಿಲ್ಲ ಎಂದು ಸಾಹೋತ್ರಾ ದೂರಿದ್ದಾರೆ.
ದೇವಾಲಯವನ್ನು ಅದರ ಮೂಲ ಸ್ವರೂಪದಲ್ಲೇ ಮರುನಿರ್ಮಿಸಬೇಕು. ಜೊತೆಗೆ ಪಂಜಾಬ್‌ನಾದ್ಯಂತ ಇರುವ ಹಿಂದೂ ದೇವಾಲಯಗಳು, ಸಿಖ್ ಗುರುದ್ವಾರಗಳು ಮತ್ತು ಕ್ರೈಸ್ತ ಚರ್ಚುಗಳ ಜೊತೆಗೆ ಅವುಗಳ ಆಸ್ತಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೂ ಸಮುದಾಯದ ಆತಂಕ
ಹಿಂದೂ ಸಮುದಾಯದ ಮುಖಂಡ ರತ್ತನ್ ಲಾಲ್ ಕೂಡ ಪುರಾತನ ದೇವಾಲಯ ಧ್ವಂಸವನ್ನು ತೀವ್ರವಾಗಿ ಖಂಡಿಸಿದ್ದಾರೆ. ದೇವಾಲಯವನ್ನು ಪುನಃ ನಿರ್ಮಿಸಲು ಸರ್ಕಾರ ಆದೇಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಜಿಲ್ಲಾಡಳಿತ ಮತ್ತು ಇಟಿಪಿಬಿ (ETPB) ದೇವಾಲಯವನ್ನು ರಕ್ಷಿಸಲು ಅಥವಾ ಅಕ್ರಮ ಆಕ್ರಮಣಕಾರರನ್ನು ತೆರವುಗೊಳಿಸಲು ಸಮರ್ಪಕ ಕ್ರಮ ಕೈಗೊಂಡಿಲ್ಲ. ಇದರಿಂದಲೇ ದೇವಾಲಯ ಧ್ವಂಸವಾಗಲು ಅವಕಾಶ ದೊರೆಯಿತು,” ಎಂದು ಅವರು ಆರೋಪಿಸಿದರು.
ನಾರೋವಾಲ್ ಜಿಲ್ಲಾ ಶಾಂತಿ ಸಮಿತಿ ಹಾಗೂ ಪಾಕ್ ಧರಂ ಅಸ್ತಾನ್ ಹಿಂದೂ ಸಮಿತಿಯ ಸದಸ್ಯರಾಗಿರುವ ರತ್ತನ್ ಲಾಲ್, “ದೇವಾಲಯದ ಆವರಣದಲ್ಲೇ ಮದರಸಾ ಕಾರ್ಯನಿರ್ವಹಿಸುತ್ತಿರುವ ಕಾರಣ ಸ್ಥಳೀಯ ಹಿಂದೂ ಸಮಿತಿ ಸದಸ್ಯರು ಆ ಪ್ರದೇಶಕ್ಕೆ ಭೇಟಿ ನೀಡಲು ಕೂಡ ಭಯಪಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸರ್ಕಾರದ ವಾದವೇನು?
ಪ್ರತಿಭಟನಾಕಾರರ ಆರೋಪಗಳಿಗೆ ವಿರುದ್ಧವಾಗಿ ಸರ್ಕಾರದ ವಾದ ಭಿನ್ನವಾಗಿದೆ. ಇಟಿಪಿಬಿ (ETPB)ಯ ಹಿರಿಯ ಅಧಿಕಾರಿ ರಾಣಾ ಇಫ್ತಿಖಾರ್ ಅವರು, ದೇವಾಲಯವು ಸುಮಾರು 100ರಿಂದ 125 ವರ್ಷ ಹಳೆಯದಾಗಿದ್ದು, ಭಾರೀ ಮಳೆಯಿಂದಾಗಿ ಕುಸಿದುಬಿದ್ದಿದೆ ಎಂದು ತಿಳಿಸಿದ್ದಾರೆ.
“ನಮ್ಮ ದಾಖಲೆಗಳಲ್ಲಿ ಈ ದೇವಾಲಯಕ್ಕೆ ಯಾವುದೇ ಹೆಸರು ಇಲ್ಲ. ಆದರೆ ಇದು ಅತ್ಯಂತ ಹಳೆಯ ದೇವಾಲಯವಾಗಿದ್ದು, 100ರಿಂದ 125 ವರ್ಷಗಳಷ್ಟು ಹಳೆಯದು,” ಎಂದು ಅವರು ಹೇಳಿದ್ದಾರೆ.
ಆದರೆ ಏಪ್ರಿಲ್ 11ರ ವರದಿಯೊಂದರಲ್ಲಿ, ದೇವಾಲಯದ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅದಕ್ಕೆ ಹಾನಿಯಾಗುವ ಸಾಧ್ಯತೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮೊದಲೇ ಮಾಹಿತಿ ಇತ್ತು ಎಂಬುದು ಬಹಿರಂಗವಾಗಿದೆ.
ದೇವಾಲಯದ ಪಕ್ಕದ ಭೂಮಿಯನ್ನು ಮದರಸಾ ಸ್ಥಾಪನೆಗಾಗಿ ಗುತ್ತಿಗೆಗೆ ನೀಡಲಾಗಿತ್ತು ಎಂಬುದನ್ನು ಇಫ್ತಿಖಾರ್ ಒಪ್ಪಿಕೊಂಡಿದ್ದಾರೆ. ಆದರೆ “ದೇವಾಲಯದ ಭೂಮಿಯನ್ನು ಯಾರಿಗೂ ಗುತ್ತಿಗೆಗೆ ನೀಡಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ದೇವಾಲಯದ ಪುನರ್‌ನಿರ್ಮಾಣದ ಕುರಿತು ಅಂತಿಮ ನಿರ್ಧಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ದೇವಾಲಯ ನಿಜವಾಗಿಯೂ ಧ್ವಂಸಗೊಳಿಸಲ್ಪಟ್ಟಿದೆಯೇ ಅಥವಾ ಮಳೆಯಿಂದ ಕುಸಿದಿದೆಯೇ ಎಂಬ ಪ್ರಶ್ನೆ ಪಾಕಿಸ್ತಾನದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಅಲ್ಪಸಂಖ್ಯಾತರ ಧಾರ್ಮಿಕ ತಾಣಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement