ಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ನವದೆಹಲಿ/ಒಡೆಸಾ : ಉಕ್ರೇನ್‌ನ ಒಡೆಸಾ (Odesa) ಬಂದರಿನಿಂದ ಜುಲೈ 19ರ ಸಂಜೆ ಹೊರಟಿದ್ದ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯ ಪ್ರಜೆಗಳು ಮೃತಪಟ್ಟಿದ್ದು, ಮತ್ತೊಬ್ಬ ಭಾರತೀಯ ನಾವಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ದಾಳಿಗೆ ಒಳಗಾದ ಎಂವಿ ಗೋಲ್ಡನ್ ಲಿಯೋ (MV Golden Leo) ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದರು. ಅವರಲ್ಲಿ ಐವರು ಭಾರತೀಯ ಪ್ರಜೆಗಳಾಗಿದ್ದರು. ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯವು, “ಉಕ್ರೇನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲು ಪ್ರಯತ್ನಿಸುತ್ತಿದೆ” ಎಂದು ತಿಳಿಸಿದೆ. ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ಸಚಿವಾಲಯ ಸಂತಾಪ ಸೂಚಿಸಿದ್ದು, ಗಾಯಗೊಂಡಿರುವ ಸಿಬ್ಬಂದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.

ಇದೇ ವೇಳೆ, ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು, ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ಸಮುದ್ರ ಮಾರ್ಗದ ಸಂಚಾರ ಮತ್ತು ವ್ಯಾಪಾರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು “ಖಂಡನೀಯವಾಗಿದ್ದು, ಇಂತಹ ಕೃತ್ಯಗಳನ್ನು ತಪ್ಪಿಸಬೇಕು” ಎಂದು ಭಾರತ ತೀವ್ರವಾಗಿ ಈ ದಾಳಿಯನ್ನು ಖಂಡಿಸಿದೆ.
ಉಕ್ರೇನ್ ಅಧಿಕಾರಿಗಳ ಪ್ರಕಾರ, ರಷ್ಯಾ ಉಡಾಯಿಸಿದ ಕ್ರೂಸ್ ಕ್ಷಿಪಣಿಗಳು ಹಡಗಿಗೆ ತಗುಲಿದ್ದು, ಇತ್ತೀಚಿನ ವಾರಗಳಲ್ಲಿ ಕಪ್ಪು ಸಮುದ್ರ ಪ್ರದೇಶದಲ್ಲಿ ಉಲ್ಬಣಗೊಂಡಿರುವ ಹಿಂಸಾಚಾರದ ನಡುವೆ ನಡೆದ ಅತ್ಯಂತ ಮಾರಕ ದಾಳಿಯಾಗಿದೆ.
ಉಕ್ರೇನ್ ನೌಕಾಪಡೆಯ ಮಾಹಿತಿ ಪ್ರಕಾರ, ಗಿನಿ-ಬಿಸ್ಸಾವು (Guinea-Bissau) ಧ್ವಜವನ್ನು ಹೊತ್ತಿದ್ದ ಗೋಲ್ಡನ್ ಲಿಯೋ ಹಡಗು ಜೋಳ (Corn) ಸಾಗಿಸುತ್ತಿತ್ತು. ಭಾರತೀಯರು ಮತ್ತು ಸಿರಿಯಾದ ನಾವಿಕರು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಷ್ಯಾ ಮೂರು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿ ಹಡಗನ್ನು ಗುರಿಯಾಗಿಸಿದ್ದು, ಪರಿಣಾಮವಾಗಿ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.

ಪ್ರಮುಖ ಸುದ್ದಿ :-   ದಾಂಪತ್ಯ ಜಗಳದಲ್ಲಿ ಉದ್ಯೋಗದಾತರಿಗೆ ಹೆಂಡತಿ ದೂರು ನೀಡುವುದು ಏಕೆ..? ಈ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಳವಳ

ಉಕ್ರೇನ್ ಸಮುದ್ರ ಬಂದರುಗಳ ಪ್ರಾಧಿಕಾರದ ಪ್ರಕಾರ, ರಾತ್ರಿಯಿಡೀ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಈ ದಾಳಿಯಲ್ಲಿ ಒಟ್ಟು ಒಂಬತ್ತು ಸಿಬ್ಬಂದಿ ಹಾಗೂ ಒಬ್ಬ ಸಮುದ್ರ ಮಾರ್ಗದರ್ಶಕ (Maritime Pilot) ಮೃತಪಟ್ಟಿದ್ದು, 17 ಮಂದಿಯಲ್ಲಿನ ಎಂಟು ಮಂದಿಯನ್ನು ರಕ್ಷಿಸಲಾಗಿದೆ.
ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು, ಅವರಲ್ಲಿ ಐವರು ಭಾರತೀಯರು ಎಂಬುದು ದೃಢಪಟ್ಟಿದೆ. ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್ (LSEG) ಮಾಹಿತಿಯಂತೆ, ಈ ಹಡಗಿನ ಮಾಲೀಕತ್ವ ಮುಂಬೈ ಮೂಲದ ಓಷನ್ ಗ್ರೇಸ್ ಶಿಪ್ಪಿಂಗ್ ಲಿಮಿಟೆಡ್ (Ocean Grace Shipping Ltd.) ಸಂಸ್ಥೆಯದ್ದಾಗಿದೆ.
ಇನ್ನೊಂದೆಡೆ, ಒಡೆಸಾ ಪ್ರದೇಶದ ಉಕ್ರೇನ್ ಗವರ್ನರ್ ಮಾಹಿತಿ ಪ್ರಕಾರ, ಈ ತಿಂಗಳಲ್ಲಿ ರಷ್ಯಾದ ಕ್ಷಿಪಣಿ ದಾಳಿಗಳಿಂದ ಒಟ್ಟು 28 ಮಂದಿ ಮೃತಪಟ್ಟಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ, ರಷ್ಯಾದ ಬೆಲ್ಗೊರೋಡ್ (Belgorod) ಪ್ರದೇಶದಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಿಂದ ಬಸ್‌ಗೆ ಹೊಡೆತ ಬಿದ್ದು, ಮಗು ಸೇರಿ ಐವರು ಮೃತಪಟ್ಟಿದ್ದಾರೆ. ಅಲ್ಲದೆ, ರಷ್ಯಾವು ಉಕ್ರೇನ್‌ನ ಹಲವು ನಗರಗಳ ಮೇಲೆ ನಡೆಸಿದ ಮತ್ತಷ್ಟು ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಕೆಲವು ವಾರಗಳಿಂದ ಉಭಯ ರಾಷ್ಟ್ರಗಳು ತಮ್ಮ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಿವೆ.

ಪ್ರಮುಖ ಸುದ್ದಿ :-   ವಿಡಿಯೊ | ಪ್ರಧಾನಿ ಮೋದಿ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ : ರಾಹುಲ್, ಪ್ರಿಯಾಂಕಾ ಗಾಂಧಿ ವಶಕ್ಕೆ, ಬಸ್‌ನಲ್ಲಿ ಕರೆದೊಯ್ದ ಪೊಲೀಸರು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement