ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ನಲ್ಲಿರುವ ಮೋಟೆಲ್ನಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬನ ಶಿರಚ್ಛೇದನ ಮಾಡಲಾಗಿದೆ. ಡೌನ್ಟೌನ್ನ ಪೂರ್ವದಲ್ಲಿರುವ ಸ್ಯಾಮ್ಯುಯೆಲ್ ಬೌಲೆವಾರ್ಡ್ನಲ್ಲಿರುವ ಡೌನ್ಟೌನ್ ಸೂಟ್ಸ್ ಮೋಟೆಲ್ ಅನ್ನು ನಿರ್ವಹಿಸುತ್ತಿದ್ದ ಐವತ್ತು ವರ್ಷದ ಚಂದ್ರ ನಾಗಮಲ್ಲಯ್ಯನ ಅವರ ಮೇಲೆ, ಹಿಂಸಾತ್ಮಕ ಅಪರಾಧ ಇತಿಹಾಸ ಹೊಂದಿರುವ ಮತ್ತು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ 37 ವರ್ಷದ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಪದೇ ಪದೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಹಾಗೂ ಚಂದ್ರ ಅವರ ಹೆಂಡತಿ ಹಾಗೂ ಮಗನ ಮುಂದೆಯೇ ಅವರ ಶಿರಚ್ಛೇದ ಮಾಡಿದ್ದಾನೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಗಳಲ್ಲಿ, ಕೊಲೆಗಾರ ಚಂದ್ರ ನಾಗಮಲ್ಲಯ್ಯ ಅವರನ್ನು ಮೋಟೆಲ್ ಕಾರಿಡಾರ್ನಲ್ಲಿ ಮಚ್ಚು ಹಿಡಿದು ಬೆನ್ನಟ್ಟುತ್ತಿರುವುದು ಕಂಡುಬಂದಿದೆ. ಚಂದ್ರ ನಾಗಮಲ್ಲಯ್ಯ ಅವರ ಕಿರುಚಾಟ ಕೇಳಿ ಅವರ ಹೆಂಡತಿ ಮತ್ತು 18 ವರ್ಷದ ಮಗ ತಕ್ಷಣವೇ ಧಾವಿಸಿ ಬಂದು ಕೊಲೆ ಆರೋಪಯನ್ನು ತಡೆಯಲು ಯತ್ನಿಸಿದರು. ಕೊಲೆ ಆರೋಪಿ ಕೋಬೋಸ್-ಮಾರ್ಟಿನೆಜ್ ಅವರನ್ನು ದೂರ ತಳ್ಳಿ ಹಲ್ಲೆ ಮುಂದುವರಿಸಿ ಶಿರಚ್ಛೇದ ಮಾಡಿದ್ದಾನೆ.
ಕೊಲೆಗಾರ ಕತ್ತರಿಸಿದ ತಲೆಯನ್ನು ಫುಟ್ಬಾಲ್ನಂತೆ ಒದ್ದು, ನಂತರ ಅದರ ಕಡೆಗೆ ಹೋಗಿ ಅದನ್ನು ಎತ್ತಿಕೊಂಡು ಕಸದ ಬುಟ್ಟಿಯತ್ತ ತೆಗೆದುಕೊಂಡು ಹೋಗುವುದನ್ನು ತೋರಿಸುತ್ತದೆ.
ಹೂಸ್ಟನ್ನಲ್ಲಿ ಆಟೋ ಕಳ್ಳತನ ಮತ್ತು ಹಲ್ಲೆ ನಡೆಸಿದ ಕಾರಣಕ್ಕೆ ಆತನ ಬಂಧನ ಸೇರಿದಂತೆ ಕ್ರಿಮಿನಲ್ ದಾಖಲೆಯನ್ನು ಹೊಂದಿರುವ ಕೋಬೋಸ್-ಮಾರ್ಟಿನ್ ಅವರನ್ನು ಬಂಧಿಸಲಾಗಿದೆ. ಅಪರಾಧ ಸಾಬೀತಾದರೆ ಆತ ಮರಣದಂಡನೆ ಇಲ್ಲವೆ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಗುರುವಾರ ಪೊಲೀಸರು ಬಿಡುಗಡೆ ಮಾಡಿದ ಬಂಧನ ದಾಖಲೆಯ ಪ್ರಕಾರ, ಬುಧವಾರ ಬೆಳಿಗ್ಗೆ ಕೋಬೋಸ್-ಮಾರ್ಟಿನೆಜ್ ಮೃತ ಚಂದ್ರ ಅವರ ಜೊತೆ ವಾಗ್ವಾದ ನಡೆಸಿದ್ದ ಎಂದು ತಿಳಿದುಬಂದಿದೆ. ಸಾಕ್ಷಿಯೊಬ್ಬರು ಪೊಲೀಸರಿಗೆ ಕೋಬೋಸ್-ಮಾರ್ಟಿನ್ ಜೊತೆ ಕೋಣೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ, ಚಂದ್ರ ನಾಗಮಲ್ಲಯ್ಯ ಬಂದು ವಾಷಿಂಗ್ ಮೆಷಿನ್ ಕೆಟ್ಟುಹೋಗಿದ್ದರಿಂದ ಅದನ್ನು ಬಳಸಬೇಡಿ ಎಂದು ಹೇಳಿದರು ಎಂದು ಹೇಳಿದ್ದಾರೆ.
ಚಂದ್ರ ಅವರು “(ಕೋಬೋಸ್-ಮಾರ್ಟಿನೆಜ್ ಜೊತೆ) ನೇರವಾಗಿ ಮಾತನಾಡದೆ ಹೇಳಿದ್ದಕ್ಕಾಗಿ ಕೋಬೋಸ್-ಮಾರ್ಟಿನೆಜ್ ಅವರ ಮೇಲೆ ಅಸಮಾಧಾನಗೊಂಡ ಎಂದು ಸಾಕ್ಷಿ ಹೇಳಿದರು. ನಂತರ ಆತ ಒಂದು ಮಚ್ಚನ್ನು ತೆಗೆದುಕೊಂಡು ಚಂದ್ರ ಅವರನ್ನು ಬೆನ್ನಟ್ಟಿದ ಎಂದು ಹೇಳಿದ್ದಾನೆ.
ಶಿರಚ್ಛೇದನದ ನಂತರ, “ಆರೋಪಿಯು ಅವರ ತಲೆಯನ್ನು ಪಾರ್ಕಿಂಗ್ ಸ್ಥಳದ ವರೆಗೆ ಎರಡು ಬಾರಿ ಒದ್ದು ಅದನ್ನು ಎತ್ತಿಕೊಂಡು ಕಸದ ಡಬ್ಬಿಯೊಳಗೆ ಹಾಕಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಕೋಬೋಸ್-ಮಾರ್ಟಿನೆಜ್ ಸ್ಥಳದಿಂದ ದೂರ ಹೋಗುತ್ತಿದ್ದಂತೆ, ಡಲ್ಲಾಸ್ ಅಗ್ನಿಶಾಮಕ ದಳದ (DRF) ಟ್ರಕ್ ಬಂದಿತು, ಮತ್ತು ಸಿಬ್ಬಂದಿ ಕೋಬೋಸ್-ಮಾರ್ಟಿನೆಜ್ ಇನ್ನೂ ರಕ್ತಸಿಕ್ತ ಮಚ್ಚು ಹಿಡುಕೊಂಡಿರುವುದನ್ನು ನೋಡಿದರು. ಪೊಲೀಸ್ ಅಧಿಕಾರಿಗಳು ಕೋಬೋಸ್-ಮಾರ್ಟಿನೆಜ್ ಅವರನ್ನು ವಶಕ್ಕೆ ಪಡೆಯುವವರೆಗೂ ಡಿಎಫ್ಆರ್ ಘಟಕವು ಅವರನ್ನು ಹಿಂಬಾಲಿಸಿತು.
ಹೂಸ್ಟನ್ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಚಂದ್ರ ನಾಗಮಲ್ಲಯ್ಯ ಅವರ ಸಾವಿಗೆ ಸಂತಾಪ ಸೂಚಿಸಿದೆ ಮತ್ತು ಘಟನೆಯ ಬಗ್ಗೆ ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದೆ. “ನಾವು ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ” ಎಂದು ಅದು ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ