ಚೆನ್ನೈ: ಚೆನ್ನೈ ಮತ್ತು ಅದರ ನೆರೆಹೊರೆ ಸೇರಿದಂತೆ ತಮಿಳುನಾಡಿನ ಒಟ್ಟು 27 ಜಿಲ್ಲೆಗಳು ಬಿಸಿಗಾಳಿ(ಶಾಖದ ಅಲೆ)ಯಿಂದ ಬಾಧಿತವಾಗಿವೆ. ಹೀಗಾಗಿ ಇಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಶುಕ್ರವಾರ ಪ್ರಕಟಿಸಿದೆ.
ಏಪ್ರಿಲ್ ತಿಂಗಳಲ್ಲಿ ಚೆನ್ನೈನ ಸರಾಸರಿ ತಾಪಮಾನ 34.5 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, ನಗರದ ನುಂಗಂಬಕ್ಕಂ ಸ್ವಯಂಚಾಲಿತ ಹವಾಮಾನ ಕೇಂದ್ರವು ಶುಕ್ರವಾರ ಮಧ್ಯಾಹ್ನ ಸುಮಾರು 1.15ರ ಸಮಯದಲ್ಲಿ 41.6 ಡಿಗ್ರಿ ಸೆಲ್ಸಿಯಸ್ ತೋರಿಸಿದೆ. ಈ ಬೇಸಿಗೆಯಲ್ಲಿ ಚೆನ್ನೈನ ದಿನದ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು ಇದೇ ಮೊದಲು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಪಶ್ಚಿಮ ತಂಬರಂ, ಮೀನಾಂಬಕ್ಕಂ ಮತ್ತು ಮಾಧವರಂನ ಸ್ವಯಂಚಾಲಿತ ಹವಾಮಾನ ಕೇಂದ್ರಗಳು ಶುಕ್ರವಾರ ಮಧ್ಯಾಹ್ನ 41.8, 41.3 ಮತ್ತು 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿವೆ. ಈರೋಡ್, ವೆಲ್ಲೂರು, ಕರೂರು ಮತ್ತು ತಿರುಟ್ಟಾನಿ ರಾಜ್ಯದ ಅತಿ ಹೆಚ್ಚು ಉಷ್ಣತೆ ದಾಖಲಿಸುವ ಸ್ಥಳಗಳು. ವಾಸ್ತವವಾಗಿ, 43 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ಹೊಂದಿರುವ ಈರೋಡ್ ಕಳೆದ ಕೆಲವು ದಿನಗಳಿಂದ ದೇಶದ ಐದು ಅತಿ ಹೆಚ್ಚು ತಅಪಮಾನ ಹೊಂದಿದ ಸ್ಥಳಗಳಲ್ಲಿ ಒಂದಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಏಪ್ರಿಲ್ 4ರ ವರೆಗೆ ತಮಿಳುನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಬಿಸಿಗಾಳಿಯಿಂದಾಗಿ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಏರಿಯಾ ಸೈಕ್ಲೋನ್ ಎಚ್ಚರಿಕೆ ಕೇಂದ್ರ ಹೇಳಿದೆ. ತಮಿಳುನಾಡಿನ ಅನೇಕ ಜಿಲ್ಲೆಗಳು ಶಾಖದ ತೀಕ್ಷ್ಣತೆ ಎದುರಿಸಸಬೇಕಾಗಬಹುದು ಎಂದು ತಿಳಿಸಲಾಗಿದೆ ಎಂದು ವರದಿ ಹೇಳಿದೆ.
ಏಪ್ರಿಲ್ 5 ರಿಂದ ಉಷ್ಣ ಅಲೆ ಪರಿಣಾಮಗಳು ಧರ್ಮಪುರಿ, ಕರೂರು, ಸೇಲಂ, ನಾಮಕ್ಕಲ್, ಕೃಷ್ಣಗಿರಿ, ದಿಂಡಿಗಲ್, ತಿರುಪ್ಪೂರು, ಈರೋಡ್ ಮತ್ತು ಕೊಯಮತ್ತೂರು ಜಿಲ್ಲೆಗಳಂತಹ ಕೆಲವು ಆಂತರಿಕ ಜಿಲ್ಲೆಗಳಿಗೆ ಸೀಮಿತವಾಗಿರುತ್ತದೆ, ಅಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಿಗೆ ಆಗಬಹುದು ಎಂದು ಹೇಳಲಾಗಿದೆ .
ತೆಲಂಗಾಣದ ಕುಡಾಪಾ, ರಾಯಲ್ಸೀಮಾ ಮತ್ತು ಅನಂತಪುರ ಕಡೆಯಿಂದ ಬಿಸಿಯಾದ ಗಾಳಿ ಬೀಸುವಿಕೆಯಿಂದಾಗ ಉಷ್ಣತೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಕಡಲಾಚೆಯ ಗಾಳಿಯು ಚೆನ್ನೈನಂತಹ ಕರಾವಳಿ ಪ್ರದೇಶಗಳಿಗೆ ಬರುವ ಸಮುದ್ರದ ತಂಗಾಳಿಯನ್ನು ವಿಳಂಬಗೊಳಿಸುತ್ತಿದೆ ಮತ್ತು ಇದರ ಪರಿಣಾಮವಾಗಿ ತಾಪ ಹೆಚ್ಚಾಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ