ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ ಧನಕರ ಅನಿರೀಕ್ಷಿತ ರಾಜೀನಾಮೆ ನಂತರದ ವದಂತಿಗಳು

ನವದೆಹಲಿ : ಸೋಮವಾರದ ಅಚ್ಚರಿಯ ನಡೆಯಲ್ಲಿ, 74 ವರ್ಷ ವಯಸ್ಸಿನ ಉಪರಾಷ್ಟ್ರಪತಿ ಜಗದೀಪ ಧನಕರ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ನೀಡಿದ ಈ ಕಾರಣವನ್ನು ಒಪ್ಪುವವರು ಕಡಿಮೆ. ಇದರ ಹಿಂದೆ ಇದಕ್ಕೂ ಮಿಗಿಲಾದ ಕಾರಣಗಳಿವೆ ಎಂದು ಅನೇಕರು ಭಾವಿಸುತ್ತಾರೆ.
ಧನಕರ ಅವರ ಅಧಿಕಾರಾವಧಿಯಲ್ಲಿ ಆಗಾಗ್ಗೆ ಅವರ ಜೊತೆ ಘರ್ಷಣೆ ನಡೆಸುತ್ತಿದ್ದ ಮತ್ತು ಅವರ ವಿರುದ್ಧ ದೋಷಾರೋಪಣೆ ಮಾಡಲು ಮುಂದಾಗುತ್ತಿದ್ದ ವಿಪಕ್ಷದ ಅವರ ಅತ್ಯಂತ ಕಟು ಟೀಕಾಕಾರರೂ ಸಹ ರಾಜೀನಾಮೆ ಹಿಂದೆ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದ್ದು ಇದೆ ಎಂದು ಹೇಳುತ್ತಾರೆ.
ಉಪರಾಷ್ಟ್ರಪತಿ ಕಚೇರಿ ಅಥವಾ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದ ಕಾರಣ, ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಜಗದೀಪ ಧನಕರ ಅವರಿಗೆ ಹೃದಯ ತೊಂದರೆಗೆ ಚಿಕಿತ್ಸೆ ನೀಡಲಾಗಿತ್ತು ಎಂಬುದು ನಿಜ, ಆದರೆ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದ ಘಟನೆಗಳ ನಂತರ ಅವರು ಏಕಾಏಕಿ ರಾಜೀನಾಮೆ ನೀಡಿರುವುದು ಈ ಬಗ್ಗೆ ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಅಧಿವೇಶನ ಪ್ರಾರಂಭವಾಗುವ ಮೊದಲು ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಬಹುದಿತ್ತು ಎಂದು ವಿಪಕ್ಷದ ನಾಯಕರು ಹೇಳಿದ್ದಾರೆ. ಈ ವಾರದ ಕೊನೆಯಲ್ಲಿ ಜೈಪುರಕ್ಕೆ ಅವರ ನಿಗದಿತ ಪ್ರಯಾಣದ ಕುರಿತು ಸೋಮವಾರ ಸಂಜೆ 4 ಗಂಟೆಗೆ ಉಪರಾಷ್ಟ್ರಪತಿಗಳ ಸಚಿವಾಲಯವು ನೀಡಿದ ಪತ್ರಿಕಾ ಪ್ರಕಟಣೆಯು ಈ ರಾಜೀನಾಮೆ ಒಗಟಿನ ಬಗ್ಗೆ ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅನೇಕರು ಹೇಳುತ್ತಾರೆ.

ಬಿಹಾರ ಚುನಾವಣೆಗೆ ಮುನ್ನ ನಿತೀಶಕುಮಾರ ಅವರು ಮುಂದಿನ ಉಪರಾಷ್ಟ್ರಪತಿಯಾಗುವಂತೆ ಮಾಡಲು ಧನಕರ ದಾರಿ ಮಾಡಿಕೊಟ್ಟಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಈ ಬಾರಿ ಬಿಜೆಪಿಯು ಬಿಹಾರದ ಸ್ಥಾನಗಳಲ್ಲಿ ಹೆಚ್ಚಿನ ಪಾಲನ್ನು ನಿರೀಕ್ಷಿಸುತ್ತಿರುವುದರಿಂದ, ನಿತೀಶ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡುವುದು ಕೂಡ ಒಂದು ತಂತ್ರಗಾರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ, ಬಿಜೆಪಿ ಶಾಸಕ ಹರಿಭೂಷಣ ಠಾಕೂರ್ ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದ್ದಾರೆ. “ನಿತೀಶಕುಮಾರ ಅವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡುವುದು ಬಿಹಾರಕ್ಕೆ ತುಂಬಾ ಒಳ್ಳೆಯದು” ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
ಬಿಹಾರದಲ್ಲಿ ಬಿಜೆಪಿಯು ಎಂದಿಗೂ ಏಕಾಂಗಿಯಾಗಿ ಅಧಿಕಾರವನ್ನು ಹಿಡಿದಿಲ್ಲ, ಇದು ಬಿಹಾರದ ಚುನಾವಣೆಗಳ ಮೇಲೆ ಬಹಳಷ್ಟು ಪರಿಣಾಮ ಬೀರಬಹುದಾಗಿದೆ.
ಮಂಗಳವಾರ, ಧನಕರ ರಾಜ್ಯಸಭೆಯ ಕಲಾಪಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿಲ್ಲ. ನಿಯಮಗಳ ಪ್ರಕಾರ, ಅಧ್ಯಕ್ಷರ ಅನುಪಸ್ಥಿತಿಯಲ್ಲಿ, ರಾಜ್ಯಸಭೆಯ ಕಲಾಪಗಳು ಉಪಸಭಾಪತಿಯ ಅಧ್ಯಕ್ಷತೆಯಲ್ಲಿ ನಡೆಯುತ್ತವೆ. ನಿತೀಶಕುಮಾರ ಅವರ ಜೆಡಿಯು ಪಕ್ಷದ ಹರಿವಂಶ ನಾರಾಯಣ ಸಿಂಗ್ 2020 ರಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರಿವಂಶ ಈಗ ಚುನಾವಣೆ ನಡೆಯುವವರೆಗೆ ಉಳಿದ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ, ಬಿಹಾರದ ನಾಯಕರೊಬ್ಬರು ಚುನಾವಣೆಗೆ ಮುಂಚಿತವಾಗಿ ಮೇಲ್ಮನೆಯಲ್ಲಿ ಕಲಾಪವನ್ನು ಮುನ್ನಡೆಸುತ್ತಾರೆ ಎಂಬ ಮುನ್ಸೂಚನೆಗಳು ಎನ್‌ಡಿಎ ಮೈತ್ರಿಕೂಟಕ್ಕೆ ಚುನಾವಣೆಗೆ ಮುನ್ನ ಶುಭ ಸೂಚನೆಯಾಗಿದೆ ಎಂದು ಹಲವರು ಭಾವಿಸುತ್ತಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಮತ್ತೊಂದು ಸುದ್ದಿ…
ವ್ಯಾಪಕವಾಗಿ ವರದಿಯಾಗಿರುವ ಮತ್ತೊಂದು ವದಂತಿಯೆಂದರೆ ಮಾನ್ಸೂನ್ ಅಧಿವೇಶನದ ಮೊದಲ ದಿನದ ಘಟನೆಗಳ ಸರಪಳಿ.
ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಿಂದ ಭಾರಿ ಪ್ರಮಾಣದ ನಗದು ಪತ್ತೆಯಾಗಿದ್ದು, ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿಪಕ್ಷಗಳ 68 ಸಂಸದರು ಸಹಿ ಮಾಡಿದ ನೋಟಿಸ್ ಅನ್ನು ಸ್ವೀಕರಿಸಿರುವುದಾಗಿ ಸೋಮವಾರ ಧನಕರ ಅವರು ಪ್ರಕಟಿಸಿದರು ಮತ್ತು ಅವರು ಅದನ್ನು ಒಪ್ಪಿಕೊಂಡರು.
ಲೋಕಸಭೆಯಲ್ಲಿ ಈ ಬಗ್ಗೆ ಸರ್ಕಾರವೇ ನಿರ್ಣಯವನ್ನು ಮಂಡಿಸುತ್ತಿರುವ ಸಮಯದಲ್ಲಿ, ವಿಪಕ್ಷಗಳ ನೋಟಿಸಿನ ಮೇಲೆ ಕ್ರಮ ಕೈಗೊಳ್ಳಲು ಉಪರಾಷ್ಟ್ರಪತಿಗಳು ಆತುರಪಟ್ಟಿದ್ದಾರೆಂದು ಆಡಳಿತ ಮೈತ್ರಿಕೂಟಗಳು ಭಾವಿಸಿದ್ದು ಇದಕ್ಕೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ. ವಿಪಕ್ಷಗಳ ಬೆಂಬಲಿತ ನೋಟಿಸ್ ಅನ್ನು ಉಪರಾಷ್ಟ್ರಪತಿಗಳು ಅಂಗೀಕರಿಸಿದ್ದರಿಂದ ನ್ಯಾಯಾಧೀಶರ ವಿರುದ್ಧ ಮತ್ತು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ವಿರುದ್ಧ ದಾಳಿ ನಡೆಸಲು ಸರ್ಕಾರಕ್ಕೆ ಇದ್ದ ಅವಕಾಶ ತಪ್ಪಿಹೋಯಿತು. ನಂತರ ಧನಕರ ಅವರು ಕರೆದಿದ್ದ ಸಭೆಗೆ ರಾಜ್ಯಸಭೆಯ ಸದನದ ನಾಯಕ ಜೆ.ಪಿ. ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಗೈರಾಗಿದ್ದು ಸರ್ಕಾರದ ಅಸಮಾಧಾನಕ್ಕೆ ಕಾರಣ ಎಂಬುದರತ್ತ ಬೊಟ್ಟು ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ.
ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿ (ಬಿಎಸಿ)ಯಲ್ಲಿ ಈ ಸಭೆ ನಿರ್ಣಾಯಕವಾಗಿತ್ತು. ಚರ್ಚೆಗಳು ಮತ್ತು ಶಾಸಕಾಂಗ ವ್ಯವಹಾರಗಳಿಗೆ ಸಮಯ ಹಂಚಿಕೆಯ ಬಗ್ಗೆ ಇದು ಶಿಫಾರಸು ಮಾಡುತ್ತದೆ.ಆದಾಗ್ಯೂ, ತಾವು ಪ್ರಮುಖ ಕೆಲಸದಲ್ಲಿ ನಿರತರಾಗಿದ್ದೆವು ಮತ್ತು ರಾಜ್ಯಸಭೆಯ ಅಧ್ಯಕ್ಷರಿಗೆ ಮೊದಲೇ ತಿಳಿಸಲಾಗಿತ್ತು ಎಂದು ಸಚಿವ ನಡ್ಡಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

“ಯಾವುದೂ ದಾಖಲಾಗುವುದಿಲ್ಲ, ನಾನು ಹೇಳುವುದು ಮಾತ್ರ ದಾಖಲಾಗುತ್ತದೆ” ಎಂದು ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ವಿಪಕ್ಷದ ಗದ್ದಲದ ನಡುವೆ ಧನಕರ ಕಡೆಗೆ ಬೆರಳು ತೋರಿಸುತ್ತಾ ನಡ್ಡಾ ಹಿಂದಿನ ದಿನ ಮಾಡಿದ ಹೇಳಿಕೆಯನ್ನು ಕಾಂಗ್ರೆಸ್ ಬೊಟ್ಟು ಮಾಡಿತು. ಆದಾರೆ, ತನ್ನ ಹೇಳಿಕೆ ವಿರೋಧ ಪಕ್ಷದ ಸಂಸದರನ್ನು ಗುರಿಯಾಗಿರಿಸಿಕೊಂಡಿವೆ ಎಂದು ನಡ್ಡಾ ಹೇಳಿದರು.
ನ್ಯಾಯಾಂಗದೊಂದಿಗೆ ಆಗಾಗ್ಗೆ ಸಂಘರ್ಷ…
ಮತ್ತೊಂದು ವದಂತಿಯೆಂದರೆ ಧನಕರ ಅವರು ವಿಶೇಷವಾಗಿ ನ್ಯಾಯಾಂಗದ ಬಗ್ಗೆ ನೀಡಿದ ತೀಕ್ಷ್ಣವಾದ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಸರ್ಕಾರದಲ್ಲಿ ಕೆಲವರನ್ನು ಕೆರಳಿಸಿದೆ ಎಂಬುದು. 2022 ರಲ್ಲಿ ಉಪಾಧ್ಯಕ್ಷರಾದಾಗಿನಿಂದ, ಧನಕರ “ನ್ಯಾಯಾಂಗ ಅತಿಕ್ರಮಣ”ದ ಬಗ್ಗೆ ಮಾತನಾಡಿದ್ದಾರೆ ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಕಾಯ್ದೆಯನ್ನು ರದ್ದುಗೊಳಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಖಂಡಿಸಿದ್ದಾರೆ.
ಈ ಹೇಳಿಕೆಗಳನ್ನು ಸರ್ಕಾರದ ನಿಲುವನ್ನು ಪ್ರತಿಬಿಂಬಿಸುವವು ಎಂದು ಪರಿಗಣಿಸಲಾಗಿದೆ.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement