ವೀಡಿಯೊ…| ಗೋವಾದ ನೈಟ್‌ ಕ್ಲಬ್‌ ದುರಂತ : ಶೋಲೆ ಹಾಡಿಗೆ ನೃತ್ಯ, ನಂತರ ಭಯ ; ಬೆಂಕಿ ಹೊತ್ತಿಕೊಂಡ ಕ್ಷಣದ ದೃಶ್ಯ ಸೆರೆ

ಪಣಜಿ: ಗೋವಾದ ಉತ್ತರ ಗೋವಾದ ಆರ್ಪೋರಾ ಪ್ರದೇಶದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ (Birch By Romeo Lane) ಎಂಬ ಜನಪ್ರಿಯ ನೈಟ್‌ಕ್ಲಬ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 25 ಜನರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಸಂಭವಿಸಿದಾಗ ನೂರಕ್ಕೂ ಹೆಚ್ಚು ಪ್ರವಾಸಿಗರು “ಬಾಲಿವುಡ್ ಬ್ಯಾಂಗರ್ ನೈಟ್” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಘಟನೆ ನಡೆದ ಸಂದರ್ಭದ ವೀಡಿಯೊ ತುಣುಕಿನಲ್ಲಿ, ‘ಶೋಲೆ’ ಚಿತ್ರದ ಪ್ರಸಿದ್ಧ ಹಾಡು ‘ಮೆಹಬೂಬಾ ಓ ಮೆಹಬೂಬಾ’ ಹಾಡಿಗೆ ನರ್ತಕಿಯೊಬ್ಬರು ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಸುತ್ತಲೂ ಸಂಗೀತಗಾರರು ಮತ್ತು ಪ್ರವಾಸಿಗರು ಸಂಭ್ರಮಿಸುತ್ತಿದ್ದರು.
ಈ ಸಂದರ್ಭದಲ್ಲಿ, ನರ್ತಕಿಯ ಹಿಂದಿನ ಕನ್ಸೋಲ್ (ಸಂಗೀತ ನಿಯಂತ್ರಣ ವೇದಿಕೆ) ಮೇಲೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿತು. ಕ್ಲಬ್‌ನ ಇಬ್ಬರು ಸಿಬ್ಬಂದಿ ಕೂಡಲೇ ಕನ್ಸೋಲ್ ಬಳಿ ಧಾವಿಸಿ ಲ್ಯಾಪ್‌ಟಾಪ್ ಒಂದನ್ನು ಬೆಂಕಿ ಬಳಿಯಿಂದ ತೆಗೆಯಲು ಯತ್ನಿಸಿದರು.
ಆರಂಭದಲ್ಲಿ ಜನರಿಗೆ ಬೆಂಕಿ ದೊಡ್ಡದಾಗಿದೆ ಎಂಬ ಆತಂಕವಿರಲಿಲ್ಲ. ಕೆಲವರು ನರ್ತಕಿಯನ್ನು ಹೊಗಳುವ ಭರದಲ್ಲಿ “ಆಗ್ ಲಗಾ ದಿ ಆಪ್ನೇ” (ನೀವು ಬೆಂಕಿ ಹಚ್ಚಿದಿರಿ) ಎಂದು  ಹೇಳಿದ್ದೂ ಕೇಳಿಬಂದಿದೆ.
ಕ್ಷಣಾರ್ಧದಲ್ಲಿ ವ್ಯಾಪಿಸಿದ ಬೆಂಕಿ, ದಿಗ್ಭ್ರಮೆ:
ಆದರೆ, ಬೆಂಕಿ ವೇಗವಾಗಿ ಹರಡುತ್ತಿದ್ದಂತೆ, ಸಂಗೀತಗಾರರು ತಮ್ಮ ವಾದ್ಯಗಳನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಲು ಆರಂಭಿಸಿದರು. ಕೆಲವೇ ಕ್ಷಣಗಳಲ್ಲಿ ನರ್ತಕಿ, ಸಿಬ್ಬಂದಿ ಹಾಗೂ ಪ್ರೇಕ್ಷಕರು ಹೊರ ಹೋಗಲು ಮುಗಿಬಿದ್ದರು. ಬೆಂಕಿಯು ಛಾವಣಿಯ ಉದ್ದಕ್ಕೂ ವೇಗವಾಗಿ ವ್ಯಾಪಿಸಿತು. ಮುಂದಿನ ಕೆಲವು ನಿಮಿಷಗಳಲ್ಲಿ, ಸಂಪೂರ್ಣ ನೈಟ್‌ಕ್ಲಬ್ ಬೆಂಕಿಗೆ ಆಹುತಿಯಾಯಿತು. ಬೆಂಕಿ ಹೇಗೆ ಪ್ರಾರಂಭವಾಯಿತು ಎಂಬ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಕಿರಿದಾದ ಬಾಗಿಲುಗಳಿಂದ ಸಂಕಷ್ಟ:
ಸಾಕ್ಷಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಪ್ರಕಾರ, ಕ್ಲಬ್‌ನ ಕಿರಿದಾದ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಬೆಂಕಿ ಹತ್ತಿದ ನಂತರ ಗೊಂದಲವನ್ನು ಹೆಚ್ಚಿಸಿವೆ. ಹಲವರು ಹೇಗೋ ತಪ್ಪಿಸಿಕೊಳ್ಳಲು ಯಶಸ್ವಿಯಾದರೆ, ಕೆಲವು ಪ್ರವಾಸಿಗರು ಕೆಳಮಹಡಿಯ ಅಡುಗೆಮನೆಗೆ ಓಡಿಹೋಗಿ ಅಲ್ಲಿ ಸಿಬ್ಬಂದಿಯೊಂದಿಗೆ ಸಿಕ್ಕಿಹಾಕಿಕೊಂಡರು.
ರಕ್ಷಣಾ ಕಾರ್ಯಾಚರಣೆಯೂ ಕಷ್ಟಕರವಾಗಿತ್ತು. ನೈಟ್‌ಕ್ಲಬ್‌ಗೆ ಹೋಗುವ ರಸ್ತೆಗಳು ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಸಾಕಷ್ಟು ಅಗಲವಿರಲಿಲ್ಲ. ಪರಿಣಾಮವಾಗಿ, ಅಗ್ನಿಶಾಮಕ ವಾಹನಗಳನ್ನು ಸುಮಾರು 400 ಮೀಟರ್ ದೂರದಲ್ಲಿ ನಿಲ್ಲಿಸಬೇಕಾಯಿತು.
ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರು ಉಸಿರುಗಟ್ಟುವಿಕೆಯಿಂದ (suffocation) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿಗಳ ಹೇಳಿಕೆ ಮತ್ತು ತನಿಖೆ:
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರು ಪ್ರತಿಕ್ರಿಯಿಸಿ, “ಇದು ಗೋವಾದಲ್ಲಿ ಇಂತಹ ಮೊದಲ ಘಟನೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಬೆಂಕಿ ಮೇಲಿನ ಮಹಡಿಯಲ್ಲಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ. ಬಾಗಿಲುಗಳು ಬಹಳ ಕಿರಿದಾಗಿದ್ದ ಕಾರಣ, ಕೆಲವರು ತಪ್ಪಿಸಿಕೊಂಡರೂ, ಬೆಂಕಿ ತೀವ್ರಗೊಂಡ ನಂತರ ಇತರರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ. ನೆಲಮಹಡಿಯ ಕಡೆಗೆ ಹೋದ ಅನೇಕರು ಸೂಕ್ತ ಗಾಳಿಯ ವ್ಯವಸ್ಥೆ ಇಲ್ಲದ ಕಾರಣ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಸರ್ಕಾರವು ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. “ಹೋಟೆಲ್‌ನ ಜನರಲ್ ಮ್ಯಾನೇಜರ್‌ಗಳು ಮತ್ತು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧನ ವಾರಂಟ್ ಜಾರಿ ಮಾಡಲಾಗಿದೆ. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ನಿರ್ಮಾಣದ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ತನಿಖೆ ಕೂಲಂಕಷವಾಗಿ ಪರಿಶೀಲಿಸಲಿದೆ” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
“ಮೃತರ ಕುಟುಂಬಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡಲಿದೆ. ಇಂತಹ ಘಟನೆ ಮರುಕಳಿಸದಂತೆ ನಾವು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement