ಪಣಜಿ : ಮನಕಲಕುವ ಘಟನೆಯೊಂದರಲ್ಲಿ, ಮದುವೆಯಲ್ಲಿ ಕೊನೆಗೊಳ್ಳಬೇಕಿದ್ದ ಗೋವಾ ಪ್ರವಾಸವು ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ಕಂಡಿದೆ.
ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಗೋವಾಕ್ಕೆ ಮದುವೆಯಾಗಬೇಕೆಂದು ಬಂದಿದ್ದ ಯುವತಿಯ ಬದುಕು ದುರಂತದಲ್ಲಿ ಕೊನೆಗೊಂಡಿತು.
ಉತ್ತರ ಬೆಂಗಳೂರಿನ ನಿವಾಸಿ ಸಂಜಯ ಕೆವಿನ್ ಎಂ. ಎಂದು ಗುರುತಿಸಲಾದ ಆರೋಪಿ, ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅದೇ ಪ್ರದೇಶದ ತನ್ನ ಸಂಗಾತಿ ರೋಶ್ನಿ ಮೋಸೆಸ್ ಎಂ. (22 ವರ್ಷ) ಜೊತೆ ಗೋವಾಕ್ಕೆ ಪ್ರಯಾಣ ಬೆಳೆಸಿದ್ದ ಎಂದು ವರದಿಯಾಗಿದೆ.
ಅವರಿಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದಾಗ್ಯೂ, ಇಬ್ಬರ ನಡುವಿನ ಕಹಿ ವಿವಾದವು ಉಲ್ಬಣಗೊಂಡು ಅದು ರೋಶ್ನಿ ಕೊಲೆಯಲ್ಲಿ ಅಂತ್ಯವಾಯಿತು.
ದಕ್ಷಿಣ ಗೋವಾ ಪೊಲೀಸರ ಪ್ರಕಾರ, ಅಪರಾಧ ನಡೆಯುವ ಕೆಲವು ದಿನಗಳ ಮೊದಲು ಇವರಿಬ್ಬರು ಗೋವಾಕ್ಕೆ ಆಗಮಿಸಿದ್ದರು. “ಅವರು ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ಬಂದರು. ಆದರೆ ಯಾವುದೋ ಕಾರಣಕ್ಕಾಗಿ, ಇಬ್ಬರ ನಡುವೆ ಜಗಳ ನಡೆದು ಎರಡು ದಿನಗಳ ಹಿಂದೆ ಸಂಜಯ ರೋಶ್ನಿಯನ್ನು ಕೊಂದು ಶವವನ್ನು ಕಾಡಿನಲ್ಲಿ ಎಸೆದಿದ್ದ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸಂಜೆ ಪ್ರತಾಪ ನಗರದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ರೋಶ್ನಿಯ ಶವವು ಪತ್ತೆಯಾಗಿದೆ. ಆಕೆಯ ಗಂಟಲು ಸೀಳಲಾಗಿದೆ ಎಂದು ಪೊಲೀಸರು ದೃಢಪಡಿಸಿದರು, ಇದು ಭೀಕರ ಹಿಂಸಾಚಾರದ ಕೃತ್ಯ ಎಂದು ಹೇಳಿದ್ದಾರೆ.
ದಕ್ಷಿಣ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಟಿಕಂ ಸಿಂಗ್ ವರ್ಮಾ ಅವರು ಮೃತದೇಹ ಪತ್ತೆಯಾದ ಸ್ವಲ್ಪ ಸಮಯದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. “ಈ ಕೊಲೆ ಪ್ರೇಮ ಸಂಬಂಧ, ಮದುವೆ ಪ್ರಸ್ತಾಪ ಮತ್ತು ಅದರಿಂದ ಉಂಟಾದ ವಿವಾದದ ಪರಿಣಾಮವಾಗಿದೆ” ಎಂದು ಅವರು ಹೇಳಿದ್ದಾರೆ.
ಶವ ಪತ್ತೆಯಾದ ನಂತರ, ತನಿಖಾಧಿಕಾರಿಗಳು ತಕ್ಷಣವೇ ತನಿಖೆಯನ್ನು ಪ್ರಾರಂಭಿಸಿದರು. ಮೃತದೇಹ ಪತ್ತೆಯಾದ 24 ಗಂಟೆಗಳಲ್ಲಿ, ಪೊಲೀಸರು ಸಂಜಯನನ್ನು ಪತ್ತೆಹಚ್ಚಿ ಬಂಧಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ