ವರನ ಪಾದರಕ್ಷೆ ಕದಿಯುವ ವಿನೋದದ ಸಂಪ್ರದಾಯದಲ್ಲಿ ಅನಿರೀಕ್ಷಿತ ತಿರುವು ; ಮಂಟಪದಲ್ಲೇ ಮದುವೆ ಮುರಿದುಬಿತ್ತು…!

ಮಥುರಾ/ಹಾಥ್ರಸ್ : ಭಾರತೀಯ ವಿವಾಹ ಸಂಪ್ರದಾಯದ ಭಾಗವಾದ ವರನ ಪಾದರಕ್ಷೆ ಕದಿಯುವ (ಶೂ ಸ್ಟೀಲಿಂಗ್) ವಿನೋದಮಯ ಸಂಪ್ರದಾಯವು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿ, ಇಡೀ ನಡೆಯುತ್ತಿದ್ದ ಮದುವೆಯೇ ಮುರಿದುಬಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯಲ್ಲಿ ನವೆಂಬರ್ 7ರಂದು ನಡೆದಿದೆ ಎಂದು ವರದಿಯಾಗಿದೆ.
ಹಾಥ್ರಸ್ ಜಿಲ್ಲೆಯ ಸಹಪಾವು ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಾಡಾಗಿತ್ತು. ಅಮೆರಿಕದಲ್ಲಿ ನೆಲೆಸಿರುವ ಕುಟುಂಬವೊಂದು ತಮ್ಮ ಮಗಳ ವಿವಾಹವನ್ನು ನಿಶ್ಚಯಿಸಿತ್ತು. ಮಥುರಾದ ಸೂರೀರ್ ಪ್ರದೇಶದಿಂದ ವರನ ಮೆರವಣಿಗೆಯೂ ಸಹಪಾವುಗೆ ಆಗಮಿಸಿತ್ತು. ಊಟೋಪಚಾರದ ನಂತರ ವಿವಾಹದ ಶಾಸ್ತ್ರಗಳು ಆರಂಭಗೊಂಡವು.
ಈ ವೇಳೆ, ಪಾದರಕ್ಷೆ ಕದಿಯುವ ಸಂಪ್ರದಾಯದಂತೆ ವಧುವಿನ ಸಹೋದರಿಯರು (ನಾದಿನಿಯರು) ವರನ ಪಾದರಕ್ಷೆಗಳನ್ನು ಮುಚ್ಚಿಟ್ಟು, “ಬಾವಾ, ನಿಮ್ಮ ಪಾದರಕ್ಷೆಗಳು ಬೇಕಿದ್ದರೆ ₹5,000 ನೀಡಿ” ಎಂದು ವಿನೋದವಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ವರನು ಕೇವಲ ₹500 ನೀಡಲು ಮುಂದಾಗಿದ್ದಾನೆ. ನಾದಿನಿಯರು ತಮ್ಮ ಬೇಡಿಕೆಯಾದ ₹5,000ಕ್ಕೆ ಪಟ್ಟು ಹಿಡಿದಾಗ, ವರ ಮತ್ತು ವಧುವಿನ ಸಹೋದರಿಯರ ನಡುವೆ ತೀವ್ರ ವಾಗ್ವಾದ ಶುರುವಾಯಿತು.

ವರನ ವರ್ತನೆಗೆ ಶಾಕ್
ಸಾಕ್ಷಿಗಳ ಪ್ರಕಾರ, ಈ ಜಗಳವು ಉಲ್ಬಣಗೊಂಡಾಗ ವರನು ಅತ್ಯಂತ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾನೆ. ಆತ ಕೋಪದ ಭರದಲ್ಲಿ ಬಾಗಿಲ ಬಳಿಯೇ ತನ್ನ ಉಂಗುರ ಮತ್ತು ಮಾಲೆಯನ್ನು ಹರಿದು ಎಸೆದಿದ್ದಾನೆ. ವರನ ಈ ವರ್ತನೆಯನ್ನು ಕಂಡು ಮದುವೆಗೆ ಬಂದಿದ್ದ ಅತಿಥಿಗಳೆಲ್ಲರೂ ಒಂದು ಸಲ ಗಾಬರಿಯಾದರು. ಹಾಗೂ ಆತನ ಮಾನಸಿಕ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ವರನ ವರ್ತನೆಯಿಂದ ಆಘಾತಗೊಂಡ ವಧು, ಅಂತಹ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ತಕ್ಷಣವೇ ಮದುವೆ ಮುಂದುವರಿಸದೇ ಅಷ್ಟಕ್ಕೇ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಳು. ಎರಡೂ ಕುಟುಂಬದವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಸಹ, ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ವಧುವಿಲ್ಲದೆ ವಾಪಸ್ ತೆರಳಿದ ಮೆರವಣಿಗೆ
ಕೊನೆಗೆ, ಎರಡೂ ಕಡೆಯವರು ವಿವಾಹಕ್ಕೆ ಖರ್ಚಾದ ಊಟ ಮತ್ತಿತರ ವೆಚ್ಚಗಳನ್ನು ಸರಿದೂಗಿಸಲು ಒಪ್ಪಂದ ಮಾಡಿಕೊಂಡರು. ವಧುವನ್ನು ಬಿಟ್ಟೇ, ವರನ ಮೆರವಣಿಗೆ ಮಥುರಾದತ್ತ ವಾಪಸ್ ತೆರಳಿತು. ಪಾದರಕ್ಷೆಯ ವಿವಾದದಿಂದಾಗಿ ಮದುವೆಯೇ ನಿಂತುಹೋದ ಈ ಘಟನೆ ಇದೀಗ ಗ್ರಾಮದಲ್ಲಿ ಚರ್ಚಾ ವಿಷಯವಾಗಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement